ದೆಹಲಿ ಗಲಭೆ; ಕೆಂಪು ಕೋಟೆ ಘಟನೆ ಫೇಸ್ಬುಕ್ ಲೈವ್ ಮಾಡಿದ್ದವನ ಬಂಧನ
ನವದೆಹಲಿ, ಫೆಬ್ರುವರಿ 10: ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಜಾಥಾ ವೇಳೆ ದೆಹಲಿಯ ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬುಧವಾರ ಪಂಜಾಬ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ, ಪಂಜಾಬ್ ನಟ ದೀಪ್ ಸಿಧು ಬಂಧನದ 36 ಗಂಟೆಗಳ ನಂತರ ಮತ್ತೊಬ್ಬ ಆರೋಪಿ ಇಕ್ಬಾಲ್ ಸಿಂಗ್ ಬಂಧಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರವಷ್ಟೆ ಹರಿಯಾಣದ ಕರ್ನಾಲ್ ನಲ್ಲಿ ದೀಪ್ ಸಿಧು ಬಂಧನವಾಗಿತ್ತು. ಬುಧವಾರ ಪಂಜಾಬ್ ನ ಹೋಷಿಯಾರ್ ಪುರದಲ್ಲಿ ಇಕ್ಬಾಲ್ ಸಿಂಗ್ನನ್ನು ಬಂಧಿಸಲಾಗಿದೆ. ಪ್ರಕರಣದ ಎಂಟು ಪ್ರಮುಖ ಆರೋಪಿಗಳಲ್ಲಿ ಇಕ್ಬಾಲ್ ಸಿಂಗ್ ಒಬ್ಬ ಎನ್ನಲಾಗಿದೆ. ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದ ಸಿಂಗ್ ಬಗ್ಗೆ ಮಾಹಿತಿ ನೀಡಿದರೆ 50,000 ರೂ ಬಹುಮಾನ ಕೊಡುವುದಾಗಿ ಈ ಹಿಂದೆ ಘೋಷಿಸಲಾಗಿತ್ತು.

ಗಣರಾಜ್ಯೋತ್ಸವದಂದು ದೆಹಲಿಯ ಕೆಂಪುಕೋಟೆ ಮೇಲೆ ಧ್ವಜ ಹಾರಿಸುವ ಸಂದರ್ಭ ಇಕ್ಬಾಲ್ ಸಿಂಗ್ ಫೇಸ್ ಬುಕ್ ಲೈವ್ ಮಾಡಿದ್ದು, ಜನರನ್ನು ಗಲಭೆಗೆ ಪ್ರಚೋದನೆ ಮಾಡಿದ ಆರೋಪ ಈತನ ಮೇಲಿತ್ತು.
ಸಿಧು ಬಂಧನಕ್ಕೂ ಮುನ್ನ ಚಂಡೀಗಢದಲ್ಲಿ ಸುಖದೇವ್ ಸಿಂಗ್ ಎಂಬಾತನನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದ ಜುಗರಾಜ್ ಸಿಂಗ್, ಗುರುಜೀತ್ ಸಿಂಗ್, ಗುರುಜಂತ್ ಸಿಂಗ್, ಬೂಟಾ ಸಿಂಗ್, ಜಜ್ಬೀರ್ ಸಿಂಗ್ ಎಂಬುವರು ತಲೆ ಮರೆಸಿಕೊಂಡಿದ್ದು, ಇನ್ನೂ ಪತ್ತೆಯಾಗಿಲ್ಲ.
ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಜಾಥಾ ವೇಳೆ ನಡೆದ ಗಲಭೆಯಲ್ಲಿ ಐನೂರಕ್ಕೂ ಹೆಚ್ಚು ಪೊಲೀಸರು ಹಾಗೂ ಹತ್ತಕ್ಕೂ ಹೆಚ್ಚು ರೈತರು ಗಾಯಗೊಂಡಿದ್ದರು. ಒಬ್ಬ ರೈತ ಮೃತಪಟ್ಟಿದ್ದ. ಘಟನೆಗೆ ಸಂಬಂಧಿಸಿದಂತೆ 44 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದುವರೆಗೂ 133 ಮಂದಿಯನ್ನು ಬಂಧಿಸಲಾಗಿದೆ.












Click it and Unblock the Notifications