ಚಂದ್ರಬಾಬು ನಾಯ್ಡು ಪ್ರತಿಭಟನೆ; ಬೆಂಬಲಿಗರ ವಾಸ್ತವ್ಯಕ್ಕೆ 60 ಲಕ್ಷ ವೆಚ್ಚ
ನವದೆಹಲಿ, ಫೆಬ್ರವರಿ 11: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ-ಮಾನ ನೀಡಬೇಕು ಎಂದು ಆಗ್ರಹಿಸಿ, ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೋಮವಾರದಂದು ನವದೆಹಲಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ(ಧರ್ಮ ಪೋರಾಟ ದೀಕ್ಷಾ) ಕೂತಿದ್ದಾರೆ. ಚಂದ್ರಬಾಬು ನಾಯ್ಡು ಅವರು ತಮ್ಮ ಪಕ್ಷದ ಸದಸ್ಯರು ಹಾಗೂ ಬೆಂಬಲಿಗರಿಗೆ ಮಾಡಿದ ವಾಸ್ತವ್ಯದ ವ್ಯವಸ್ಥೆ ಬಗ್ಗೆ ಮಾಧ್ಯಮವೊಂದು ಹಣಕಾಸಿನ ವೆಚ್ಚದ ಲೆಕ್ಕಾಚಾರ ತೆರೆದಿಟ್ಟಿದೆ.
ಪಕ್ಷದ ಸದಸ್ಯರು, ಬೆಂಬಲಿಗರ ವಾಸ್ತವ್ಯಕ್ಕಾಗಿ 60 ಲಕ್ಷಕ್ಕಿಂತ ಸ್ವಲ್ಪ ಹೆಚ್ಚೇ ವೆಚ್ಚ ಮಾಡಿದ್ದಾರೆ. ತೆಲುಗು ದೇಶಂ ಪಕ್ಷಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸರಕಾರ ಮಾಡಿದ ವೆಚ್ಚದ ವಿವರ ಮಾಧ್ಯಮಕ್ಕೆ ಲಭ್ಯವಾಗಿದ್ದು, 2500ಕ್ಕೂ ಹೆಚ್ಚು ಮಂದಿಗೆ ವ್ಯವಸ್ಥೆ ಮಾಡಲಾಗಿದೆ.
ಆಂಧ್ರಪ್ರದೇಶ ಸರಕಾರದ ಇಪ್ಪತ್ತಾರು ಸಚಿವರು, 127 ಶಾಸಕರು, 41 ಎಂಎಲ್ ಸಿಗಳು, 15 ಅಧ್ಯಕ್ಷರು, 150 ಜನರಲ್ ಬಾಡಿ ಸದಸ್ಯರು, 2000 ಬೆಂಬಲಿಗರು ಹಾಗೂ ಅನುಯಾಯಿಗಳು ಚಂದ್ರಬಾಬು ನಾಯ್ಡು ಅವರ ಒಂದು ದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಹೋಟೆಲ್ ಸೂರ್ಯ, ರಾಯಲ್ ಪ್ಲಾಜಾ ಸೇರಿದಂತೆ ದೆಹಲಿಯ ನಾನಾ ಹೋಟೆಲ್ ಗಳಲ್ಲಿ ಟಿಡಿಪಿ ಸದಸ್ಯರು, ನಿಷ್ಠರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಆಂಧ್ರಪ್ರದೇಶದಿಂದ ದೆಹಲಿಗೆ ಪಕ್ಷದ ಸದಸ್ಯರ ಸಾರಿಗೆ ವ್ಯವಸ್ಥೆಗಾಗಿ 1.12 ಕೋಟಿ ಖರ್ಚು ಮಾಡಿ, ಚರ್ಚೆಗೆ ಕಾರಣರಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಭಾನುವಾರದಂದು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದ್ದರು. ಆ ವೇಳೆ ಮಾತನಾಡಿದ ಅವರು, ಫೋಟೋಗಾಗಿ ಚಂದ್ರಬಾಬು ನಾಯ್ಡು ನವದೆಹಲಿಗೆ ಹೋಗುತ್ತಿದ್ದಾರೆ. ಅದಕ್ಕಾಗಿ ಸಾರ್ವಜನಿಕ ಹಣ ಪೋಲು ಮಾಡುತ್ತಿದ್ದಾರೆ. ಆಂಧ್ರಪ್ರದೇಶದ ಹಲವು ನಾಯಕರು ಈ ಬಗ್ಗೆ ಈಗಾಗಲೇ ತಮ್ಮ ಕಳಕಳಿ ವ್ಯಕ್ತಪಡಿಸಿದ್ದಾರೆ ಎಂದು ಟೀಕಿಸಿದ್ದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರದಂದು ಚಂದ್ರಬಾಬು ನಾಯ್ಡು ಅವರನ್ನು ನವದೆಹಲಿಯಲ್ಲಿ ಇರುವ ಆಂಧ್ರಭವನದಲ್ಲಿ ಭೇಟಿಯಾದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಎಲ್ಲೇ ಹೋಗಲಿ ಸುಳ್ಳು ಹೇಳುತ್ತಾರೆ. ಅವರು ಆಂಧ್ರಕ್ಕೆ ಹೋದರು. ವಿಶೇಷ ಸ್ಥಾನಮಾನದ ಬಗ್ಗೆ ಸುಳ್ಳು ಹೇಳಿದರು. ಈಶಾನ್ಯ ರಾಜ್ಯಕ್ಕೆ ಹೋಗುತ್ತಾರೆ ಮತ್ತು ಅಲ್ಲೊಂದು ಸುಳ್ಳು ಹೇಳುತ್ತಾರೆ ಎಂದಿದ್ದಾರೆ.

ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿ, ನಾನು ಪ್ರಧಾನ ಮಂತ್ರಿಗಳಿಗೆ ಹೇಳಲು ಬಯಸುತ್ತೇನೆ. ಅವರು ಬಿಜೆಪಿಯ ಪಿಎಮ್ ಅಲ್ಲ. ಅವರು ಇಡೀ ದೇಶಕ್ಕೆ ಪ್ರಧಾನಿ. ಅವರು ವಿಪಕ್ಷಗಳ ಸರಕಾರವನ್ನು ಹೇಗೆ ನಡೆಸಿಕೊಳ್ಳುತ್ತಾರೆ ಅಂದರೆ, ಮೋದಿ ಅವರು ಹಿಂದೂಸ್ತಾನಕ್ಕಲ್ಲ, ಪಾಕಿಸ್ತಾನದ ಪ್ರಧಾನಿಯೇನೋ ಎನಿಸುವಂತೆ ಇರುತ್ತದೆ ಎಂದು ಆರೋಪಿಸಿದ್ದಾರೆ.












Click it and Unblock the Notifications