ರಾಹುಲ್ ಗಾಂಧಿ ರಾಜೀನಾಮೆ: ಮೆಚ್ಚಿನ ನಾಯಕಗೆ ಭಾವುಕ ಸಂದೇಶ
ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವ ರಾಹುಲ್ ಗಾಂಧಿ ತಮ್ಮ ಸ್ಥಾನಕ್ಕೆ ಕೂಡಲೇ ಪರ್ಯಾಯವನ್ನು ಹುಡುಕಲು ಪಕ್ಷದ ವರಿಷ್ಟರಿಗೆ ತಿಳಿಸಿದ್ದಾರೆ.
ಈಗಾಗಲೇ ಟ್ವಿಟ್ಟರ್ ಖಾತೆಯಿಂದಲೂ ತಮ್ಮ ಪ್ರೊಫೈಲ್ ಇಂದ "ಪ್ರೆಸಿಡೆಂಟ್" ಎಂಬ ನಾಫಲಕವನ್ನು ರಾಹುಲ್ ಗಾಂಧಿ ಅಳಿಸಿಹಾಕಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯ ಮತ್ತು ಸಂಸತ್ ಸದಸ್ಯ ಎಂದಷ್ಟೇ ಪ್ರೊಫೈಲ್ ನಲ್ಲಿ ನಮೂದಾಗಿದೆ.
ಈ ಮೂಲಕ ತಾವು ತಮ್ಮ ನಿರ್ಧಾರಕ್ಕೆ ಬದ್ಧ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಜೊತೆಗೆ ಬಹಿರಂಗ ಪತ್ರವೊಂದನ್ನು ಬರೆದು ಎಲ್ಲ ಕಾರ್ಯಕರ್ತರಿಗೂ, ನಾಯಕರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಪ್ರದರ್ಶನದಿಂದ ಬೇಸರಗೊಂಡ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿವ ನಿರ್ಧಾರಕ್ಕೆ ಬಂದಿದ್ದರು. ಆದರೂ ಅವರು ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಎಂದು ಅವರ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆ ಎಲ್ಲ ನಿರೀಕ್ಷೆಗಳೂ ಹುಸಿಯಾಗಿದ್ದು, ಈ ಕೂಡಲೇ ಕಾರ್ಯಕಾರಿಣಿ ಸಭೆ ಕರೆದು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಕೋರಿ, ರಾಹುಲ್ ಗಾಂಧಿ ತಮ್ಮ ಪದವಿಯಿಂದ ಹಿಂದೆ ಸರಿದಿದ್ದಾರೆ.
ನಿಜವಾದ ಅಪಾಯ ಮುಂದಿದೆ: ವಿದಾಯದ ಪತ್ರದಲ್ಲಿ ರಾಹುಲ್ ಗಾಂಧಿ ಕಳವಳ
ಆದರೆ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವುದಕ್ಕೆ ಕಾಂಗ್ರೆಸ್ ನ ಹಲವು ನಾಯಕರು ಭಾವುಕವಾಗಿ ಪ್ರತಿಕ್ರಿಯಿಸಿದ್ದು, ರಾಹುಲ್ ಎಂದಿಗೂ ನಮಗೆ ನಾಯಕರೇ ಎಂದಿದ್ದಾರೆ.
ಅವರೇ ನಮ್ಮ ನಾಯಕ
ರಾಹುಲ್ ಗಾಂಧಿ ನಮ್ಮ ನಾಯಕರಾಗಿದ್ದರು, ಆಗಿದ್ದಾರೆ. ಮುಂದೆಯೂ ಆಗಿರುತ್ತಾರೆ. ಅವರು ಎಂದಿಗೂ ನಮ್ಮ ನಾಯಕ, ನಮಗೆ ಆದರ್ಶ. ಅವರ ಪ್ರಾಮಾಣಿಕತೆ, ವರ್ಚಸ್ಸನ್ನು ತುಂಬುವುದಕ್ಕೆ ಬೇರೆ ಯಾರಿಗೂ ಸಾಧ್ಯವಿಲ್ಲ. ರಾಹುಲ್ ಗಾಂಧಿಯವರೇ ನಾವೆಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ. ನೀವು ಎಂದಿಗೂ ನಮಗೆ ಮಾರ್ಗದರ್ಶಕರಾಗಿರಬೇಕು- ಸಲ್ಮಾನ್ ನಿಜಾಮಿ, ಕಾಂಗ್ರೆಸ್ ಮುಖಂಡ
ತಡಮಾಡದೆ ಹೊಸ ಅಧ್ಯಕ್ಷರನ್ನು ಆರಿಸಿ: ನಾಯಕರಿಗೆ ರಾಹುಲ್ ಗಾಂಧಿ ಆದೇಶ
ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ!
ಅವರು ನಮ್ಮ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ನಮ್ಮ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಸೋನಿಯಾ ಗಾಂಧಿ ಅವರು ನಮ್ಮ ಅಧ್ಯಕ್ಷರಲ್ಲದಿರಬಹುದು. ಆದರೆ ಅವರು ಎಂದಿಗೂ ನಮ್ಮ ನಾಯಕರಾಗಿಯೇ ಇರುತ್ತಾರೆ. ರಾಹುಲ್ ಗಾಂಧಿ ಅವರೂ ಹಾಗೆಯೇ. ಅವರು ನಾಯಕರಾಗಿಯೇ ಬಂದವರು. ಹಾಗೆಯೇ ಮುಂದುವರಿಯುತ್ತಾರೆ. ನಮ್ಮ ಎಲ್ಲಾ ನಡೆಗೂ ಅವರ ಸಹಕಾರ ಬೇಕೇ ಬೇಕು-ಸಲ್ಮಾನ್ ಖುರ್ಷಿದ್
ಶ್ರೇಯಸ್ಸು ಸಲ್ಲಬೇಕು
ಭಾರತದಲ್ಲಿ ಕೆಲವೇ ಕೆಲವು ನಾಯಕರು ಸೋಲಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ರಾಹುಲ್ ಗಾಂಧಿ ಅವರೂ ನೀಡಿದ್ದಾರೆ. ಅದಕ್ಕಾಗಿ ಅವರನ್ನು ಶ್ಲಾಘಿಸಬೇಕು. ಆದರೆ ಕಾಂಗ್ರೆಸ್ ನ ಕೆಲವು ನಾಯಕರೇಕೆ ಈಗಲೂ ಅವರನ್ನು ರಾಜೀನಾಮೆಯನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಅದು ಸರಿಯಾದ ನಡೆಯಲ್ಲ ಅಲ್ಲವೇ?- ರಾಜದೀಪ್ ಸರ್ದೇಸಾಯಿ
ಪತ್ರ ಬರೆದ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನನಗೆ ದೊರೆತ ಅತ್ಯಂತ ದೊಡ್ಡ ಗೌರವ. ಏಕೆಂದರೆ ಕಾಂಗ್ರೆಸ್ ಪಕ್ಷದ ತತ್ತ್ವ ಮತ್ತು ಆದರ್ಶವೇ ನಮ್ಮ ಸುಂದರ ದೇಶದ ಸೇವೆ ಮಾಡುವುದು. ನನ್ನ ಮೇಲೆ ನನ್ನ ದೇಶ ಮತ್ತು ಪಕ್ಷದ ಋಣ ಮತ್ತು ಪ್ರೀತಿ ಸಾಕಷ್ಟಿದೆ ಎಂದು ಪತ್ರವೊಂದನ್ನು ರಾಹುಲ್ ಗಾಂಧಿ ಬರೆದಿದ್ದಾರೆ.