ಬಿಜೆಪಿ ಕಾರ್ಯಕಾರಿಣಿಯಲ್ಲಿ ರಾಹುಲ್ ರನ್ನು ತರಾಟೆಗೆ ತೆಗೆದುಕೊಂಡ ಶಾ!
ನವದೆಹಲಿ, ಸೆಪ್ಟೆಂಬರ್ 25: ಕುಟುಂಬದ ಹಿನ್ನೆಲೆಯಲ್ಲಿ ರಾಜಕಾರಣಕ್ಕಿಳಿಯುವ ಸಂಪ್ರದಾಯ ಕಾಂಗ್ರೆಸ್ಸಿನದ್ದೇ ಹೊರತು ಭಾರತದಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಮಾತಿನ ಛಾಟಿ ನೀಡಿದ್ದಾರೆ.
ನವದೆಹಲಿಯಲ್ಲಿ ನಿನ್ನೆ(ಸೆ.24)ಯಿಂದ ನಡೆಯುತ್ತಿರುವ 2 ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ನೀಡಿದ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಬೆರ್ಕೆಲೇಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, 'ಭಾರತದಲ್ಲಿ ಕುಟುಂಬ ರಾಜಕಾರಣವೆಂಬುದು ಮಾಮೂಲು. ಭಾರತ ನಡೆಯುವುದೇ ಹೀಗೆ' ಎಂಬ ಹೇಳಿಕೆ ನೀಡಿದ್ದರು. ಈ ಮಾತನ್ನು ಬಿಜೆಪಿ ಕಾರ್ಯಕಾರಿಣಿಯಲ್ಲಿ ಉಲ್ಲೇಖಿಸಿದ ಶಾ, ಕುಟುಂಬ ರಾಜಕಾರಣ ಕಾಂಗ್ರೆಸ್ ನ ಸಂಪ್ರದಾಯವೇ ಹೊರತು, ಭಾರತದಲ್ಲ ಎಂದರು.
ಇದರೊಂದಿಗೆ ಬಿಜೆಪಿ ಕಾರ್ಯಕಾರಣಿ ಕುರಿತ ಮಹತ್ವದ ಸಂಗತಿಗಳು ಇಲ್ಲಿವೆ.

ಎಲ್ಲ ನಾಯಕರೂ ಭಾಗಿ
ಸಾಮಾನ್ಯವಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಎಂದರೆ ಬಿಜೆಪಿಯ 120 ಪ್ರಮುಖ ನಾಯಕರಷ್ಟೇ ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ದೇಶದಾದ್ಯಂತ ಇರುವ ಬಿಜೆಪಿಯ ಎಲ್ಲಾ ನಾಯಕರನ್ನೂ ಆಹ್ವಾನಿಸಲಾಗಿದೆ, ಮಾತ್ರವಲ್ಲ ಬಿಜೆಪಿ ಅಧಿಕಾರದಲ್ಲಿರುವ 13 ರಾಜ್ಯಗಳ ಮುಖ್ಯಮಂತ್ರಿಗಳೂ ಸಭೆಯಲ್ಲಿ ಹಾಜರಿದ್ದಾರೆ.

ಪ್ರಧಾನಿ ಮೋದಿ ಉಪಸ್ಥಿತಿ
ಪ್ರಧಾನಿ ನರೇಂದ್ರ ಮೋದಿಯವರೂ ಈ ಸಭೆಯಲ್ಲಿ ಇಡಿ ದಿನ ಹಾಜರಿದ್ದು, ಸರ್ಕಾರದ ಕೆಲವು ಮಹತ್ವದ ಯೋಜನಗಳ ಬಗ್ಗೆ ಮಾತನಾಡುತ್ತಾರೆ.

ಕ್ರಾಂತಿಕಾರಿ ಹೆಜ್ಜೆಗಳ ಕುರಿತವು ಚರ್ಚೆ
ನೋಟು ನಿಷೇಧ, ಜಿಎಸ್ ಟಿ ಕುರಿತು ವಿರೋಧ ಪಕ್ಷಗಳು ನೀಡಿದ್ದ ಹೇಳಿಕೆಗಳ ಬಗ್ಗೆಯೂ ಮೋದಿ ಮಾತನಾಡುವ ನಿರೀಕ್ಷೆ ಇದೆ. ಜೊತೆಗೆ ನೋಟು ನಿಷೇಧ, ಜಿಎಸ್ ಟಿಯಂಥ ಸರ್ಕಾರದ ಕ್ರಾಂತಿಕಾರಿ ಹೆಜ್ಜೆಗಳ ಪರಿಣಾಮದ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಜನಸಂಪರ್ಕಕ್ಕೆ ಯೋಜನೆ
ಜನರೊಂದಿಗೆ ಸಂಪರ್ಕ ಬೆಳೆಸುವ ಕುರಿತು ಪಕ್ಷ ಯಾವೆಲ್ಲ ಯೋಜನೆಗಳನ್ನು ಹಮ್ಮಿಕೊಳ್ಳಬಹುದು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ.

ಚುನಾವಣೆಗೆ ಸಿದ್ಧತೆ
ಕೆಲವು ರಾಜ್ಯಗಳಲ್ಲಿ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ವಿಧಾನ
ಸಭಾ ಚುನಾವಣೆ ಮತ್ತು 2019 ರ ಲೋಕಸಭಾ ಚುನಾವಣೆಗೆ ಪಕ್ಷ ಯಾವೆಲ್ಲ ನಿರ್ಣಯ ಕೈಗೊಳ್ಳಲಿದೆ ಎಂಬುದೂ ಚರ್ಚೆಯಾಗಲಿದೆ.

ಪಾರದರ್ಶಕ ಆಡಳಿತದ ಪ್ರದರ್ಶನ
ಕೇಂದ್ರ ಬಿಜೆಪಿ ಸರ್ಕಾರದ ಕೆಲವು ನಿರ್ಣಯಗಳು ಜನಸ್ನೇಹಿಯಾಗಿಲ್ಲ ಎಂಬ ಮಾತು ಹಲವೆಡೆಯಿಂದ ಕೇಳಿಬಂದ ಹಿನ್ನೆಲೆಯಲ್ಲಿ ಮಾಧ್ಯಮಗಳ ಮುಂದೆ ತನ್ನ ಆಡಳಿತ ಪಾರದರ್ಶಕತೆಯನ್ನು ತೋರಿಸಿಕೊಳ್ಳುವಲ್ಲಿಯೂ ಬಿಜೆಪಿ ಪ್ರಯತ್ನ ಪಡೆಬೇಕಿದೆ. ಈ ಕುರಿತೂ ವಿಚಾರ ವಿನಿಮಯ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ದೀನ್ ದಯಾಳ್ ಉಪಾಧ್ಯಾಯ ಅವರ 101 ನೇ ಜನ್ಮದಿನಾಚರಣೆಯ ಅಂಗವಾಗಿ, ಅವರು ಬಹಳ ಇಷ್ಟಪಡುತ್ತಿದ್ದ ರಾಷ್ಟ್ರೀಯತೆಯ ಕುರಿತಾದ ಕೆಲವು ಹಾಡುಗಳನ್ನು ಇದೇ ಸಂದರ್ಭದಲ್ಲಿ ಹಾಡಲಾಗುವುದು ಎಂದು ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ತಿಳಿಸಿದ್ದಾರೆ.












Click it and Unblock the Notifications