ಬಿಎಸ್ವೈ ಮರಳಿ ಗೂಡು ಸೇರುವುದು ತಡವಾಗ್ತಿದೆ

ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಚುಂಬನದಲ್ಲೇ ಯಶಸ್ಸು ಗಳಿಸಿದರೂ ಅಲ್ಲಿನ ವಿಧಾನಸಭೆಯನ್ನು ತ್ರಿಶಂಕು ಸ್ಥಿತಿಗೆ ತಳ್ಳಿದ ಅಪಕೀರ್ತಿಗೆ ಭಾಜನವಾಗಿರುವ ಆಮ್ ಆದ್ಮಿ ಪಕ್ಷವು ಬಿಎಸ್ವೈ ಮರಳಿ ಗೂಡು ಸೇರುವುದನ್ನು ಸಹ ಪರೋಕ್ಷವಾಗಿ ತ್ರಿಶಂಕು ಸ್ಥಿತಿಯಲ್ಲಿಟ್ಟಿದೆ.
ಬಿಜೆಪಿ ವರಿಷ್ಠರಿಗೂ ಇದೇ ಸಮಸ್ಯೆಯಾಗಿ ಕಾಡುತ್ತಿದೆ. ಮುಖ್ಯವಾಗಿ ಪಕ್ಷದ ಹಿರಿಯರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಶಿ ಮತ್ತು ಸುಷ್ಮಾ ಸ್ವರಾಜ್ ಅವರು ಇದನ್ನೇ ದೊಡ್ಡ ಸಮಸ್ಯೆಯಾಗಿ ಪ್ರತಿಬಿಂಬಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ದೆಹಲಿ ಮೂಲಗಳು ಹೇಳುತ್ತಿವೆ.
ಹೇಳಿಕೇಳಿ ಈ ತ್ರಿಮೂರ್ತಿಗಳು ಅಂದಿನಿಂದಲೂ ಬಿಎಸ್ವೈ ಬಿಜೆಪಿಗೆ ವಾಪಸಾಗುವುದಕ್ಕೆ ತೊಡರುಗಾಲು ಹಾಕುತ್ತಿರುವವರು. ಇದೀಗ, ಬಿಎಸ್ವೈ ವಾಪಸಾತಿಗೆ ತ್ರಿಮೂರ್ತಿಗಳ ಕೈಯಲ್ಲಿದ್ದ ಕೆಂಪು ಝಂಡಾ ಮತ್ತೊಮ್ಮೆ ಹಾರಾಡಿದೆ.
ಆಮ್ ಆದ್ಮಿಯ ಭರ್ಜರಿ ವಿಜಯವನ್ನೇ ಮುಂದಿಟ್ಟುಕೊಂಡು ಈ ತ್ರಿಮೂರ್ತಿಗಳು 'ಅಲ್ಲಾ, ಆಮ್ ಆದ್ಮಿ ಪಕ್ಷಕ್ಕೆ ಜನ/ ಮತದಾರ ಆ ಪಾಟಿ ಮತ ಹಾಕಿದ್ದಾರೆ. ಅಂದರೆ ಅದು ಭ್ರಷ್ಟಾಚಾರದ ವಿರುದ್ಧ ಜನ ರೋಸಿ ಹೋಗಿರುವುದರ ಸಂಕೇತವಾಗಿದೆ. ಅಂಥಾದ್ದರಲ್ಲಿ 'ಭ್ರಷ್ಟಾಚಾರಿ ಯಡಿಯೂರಪ್ಪ' ಮತ್ತೆ ಪಕ್ಷಕ್ಕೆ ಮರಳುವುದು ಎಷ್ಟು ಸಮಂಜಸ ಮತ್ತು ಅದು ಉಚಿತವೇ?' ಎಂದು ರಾಗ ತೆಗೆದಿದ್ದಾರೆ.
'ಬಿಜೆಪಿ ಕಳಂಕಿತರಿಗೆ ಮಣೆ ಹಾಕುತ್ತಿದೆ ಎಂದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ದೊಡ್ಡ ಮಟ್ಟದಲ್ಲಿ ಹುಯಿಲೆಬ್ಬಿಸಿದರೆ ಆ ಪಕ್ಷಗಳಿಗೆ ನಾವೇ ಅಸ್ತ್ರವನ್ನು ನೀಡದಂತಾಗುವುದಿಲ್ಲವೇ?' ಎಂಬ ಪ್ರಶ್ನೆ ಈ ತ್ರಿಮೂರ್ತಿಗಳ ಮಧ್ಯೆಯಷ್ಟೇ ಸರಿದಾಡಿದೆ. (ಯಡಿಯೂರಪ್ಪ ಹೊಸವರ್ಷಾಚರಣೆ ಬಿಜೆಪಿಯಲ್ಲಿ!)
ಆದರೆ, 'ಶಾಸಕಿಯಾಗಿ ಆಯ್ಕೆಯಾಗುವಲ್ಲಿ ವಿಫಲರಾದ ಶೋಭಾ ಕರಂದ್ಲಾಜೆ ಕನಿಷ್ಠ ಲೋಕಸಭೆ ಸದಸ್ಯೆಯಾದರೂ ಆಗಲಿ. ಅವರನ್ನು ಈ ಬಾರಿ ಲೋಕಸಭಾ ಚುನಾವಣೆಗೆ ನಿಲ್ಲಿಸಿ' ಎಂಬ ಷರತ್ತು ಸೇರಿದಂತೆ ತಮ್ಮ ಹೆಗಲ ಮೇಲೆ ಹಲವಾರು ಷರತ್ತುಗಳ ಮೂಟೆ ಹೊತ್ತಿರುವ ಯಡಿಯೂರಪ್ಪ, ನಾಳೆ ಶುಕ್ರವಾರ ಅಡ್ವಾಣಿಯೊಂದಿಗೆ ಭೇಟಿಯಾಗಿ Final Cut ಹೇಳುವ ಸಾಧ್ಯತೆಯಿದೆ.












Click it and Unblock the Notifications