ಪಂಜಾಬ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯನ್ನು ಜನತೆಗೆ ಬಿಟ್ಟ ಆಮ್ ಆದ್ಮಿ ಪಕ್ಷ
ನವದೆಹಲಿ, ಜನವರಿ 13: ಪಂಜಾಬ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ವಿಷಯದಲ್ಲಿ ನಡೆಯುತ್ತಿರುವ ಗೊಂದಲಕ್ಕೆ ಆಮ್ ಆದ್ಮಿ ಪಕ್ಷ ಪರಿಹಾರ ಕಂಡುಕೊಂಡಿದೆ. ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಯ ತೀರ್ಮಾನವನ್ನು ಜನತೆಗೇ ಬಿಡಲಾಗಿದೆ. ಜನರು 707470748ಕ್ಕೆ ಡಯಲ್ ಮಾಡುವ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಸೂಚಿಸಬಹುದು ಎಂದು ಹೇಳಲಾಗಿದೆ.
ಈಗಾಗಲೇ ಫೋನ್ ಲೈನ್ ಜಾಮ್ ಆಗಿದೆ ಎಂದು ಆಮ್ ಆದ್ಮಿ ಪಕ್ಷ ಟ್ವೀಟ್ನಲ್ಲಿ ಹೇಳಿಕೊಂಡಿದೆ. ಜನರಿಂದ ಟೆಲಿ ಮತದಾನದ ಮೂಲಕ ಆಯ್ಕೆಯಾದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಜನವರಿ 17ರಂದು ಘೋಷಿಸಲಾಗುತ್ತದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಪಕ್ಷವೊಂದು ಸಾರ್ವಜನಿಕರಿಗೆ ತಮ್ಮ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತಿರುವುದು ಇದೇ ಮೊದಲು ಎಂದು ಅವರು ಹೇಳಿದ್ದಾರೆ.

ಪಂಜಾಬ್ನ ಜನತೆ 7074870748 ಗೆ ಕರೆ ಮಾಡಬಹುದು, ವಾಟ್ಸಾಪ್ ಅಥವಾ SMS ಮಾಡಬಹುದು ಮತ್ತು ಅವರ ಆಯ್ಕೆಯನ್ನು ಹೆಸರಿಸಬಹುದು. ಫೋನ್ ಸಂಖ್ಯೆಯು ಜನವರಿ 17 ರಂದು ಸಂಜೆ 5 ಗಂಟೆಯವರೆಗೆ ತೆರೆದಿರುತ್ತದೆ. ನಾವು ಪ್ರತಿಕ್ರಿಯೆಗಳ ಮೂಲಕ ಹೋಗುತ್ತೇವೆ ಮತ್ತು ಪ್ರತಿಕ್ರಿಯೆಯನ್ನು ಆಧರಿಸಿ, AAP ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ ಎಂದು ಹೇಳಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆ ಫೆಬ್ರವರಿ 14ರಂದು ನಡೆಯುತ್ತಿದ್ದು, ಆಮ್ ಆದ್ಮಿ ಪಕ್ಷ ಪಂಜಾಬ್ ಅಭಿವೃದ್ಧಿಗೆ 10 ಸೂತ್ರಗಳನ್ನು ಸಿದ್ಧಪಡಿಸಿದೆ. ಉದ್ಯೋಗ ಸೃಷ್ಟಿಯೇ ಪ್ರಮುಖವಾಗಿರಲಿದ್ದು, ಜತೆಗೆ 10 ಭರವಸೆಗಳನ್ನು ನೀಡಿದ್ದು, ಮಾದರಿ ಪಂಜಾಬ್ ನಿರ್ಮಾಣ ಮಾಡುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಮೊಹಾಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 10 ಅಂಶಗಳ ಯೋಜನೆಗಳ ಮೂಲಕ ಪಂಜಾಬ್ ಅನ್ನು ಮಾದರಿ ರಾಜ್ಯವನ್ನಾಗಿ ಪರಿವರ್ತನೆ ಮಾಡುತ್ತೇವೆ. ಅಧಿಕಾರಕ್ಕೆ ಬಂದರೆ ಸಮೃದ್ಧ ಹಾಗೂ ಅಭಿವೃದ್ಧಿ ಹೊಂದಿದ ಪಂಜಾಬ್ ಅನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಪಂಜಾಬ್ನಲ್ಲಿ ಆಳವಾಗಿ ಬೇರೂರಿರುವ ಡ್ರಗ್ ಮಾಫಿಯಾವನ್ನು ತೊಡೆದು ಹಾಕುತ್ತೇವೆ ಎಂದು ಹೇಳಿರುವ ಕೇಜ್ರಿವಾಲ್ ಪಂಜಾಬ್ನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ವಾಗ್ದಾನ ಮಾಡಿದ್ದಾರೆ.
'ಪಂಜಾಬ್ನಿಂದ ಉದ್ಯೋಗಕ್ಕಾಗಿ ಕೆನಡಾಗೆ ಹೋಗಿರುವ ಯುವಕರು ಮುಂದಿನ ಐದು ವರ್ಷದಲ್ಲಿ ಮತ್ತೆ ಪಂಜಾಬ್ಗೆ ಮರಳಬೇಕು. ಈ ರೀತಿಯಾದ ಸಮೃದ್ಧ ಪಂಜಾಬ್ ನಿರ್ಮಾಣ ಮಾಡಲಿದ್ದೇವೆ' ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಕೇಜ್ರಿವಾಲ್ ಅವರ 10 ಅಂಶಗಳ ಪಂಜಾಬ್ ಮಾಡೆಲ್ನಲ್ಲಿ ಉದ್ಯೋಗದ ಭರವಸೆ, ಮಹಿಳೆಯರಿಗೆ 1000 ರೂ. ಮಾಸಾಶನ ಹಾಗೂ ರೈತರ ಸಮಸ್ಯೆಗೆ ಮುಕ್ತಿ ಮುಂತಾದ ಭರವಸೆಗಳಿವೆ.
ರಾಜ್ಯಾದ್ಯಂತ 16,000 ಮೊಹಲ್ಲಾ ಕ್ಲೀನಿಕ್ ಸ್ಥಾಪನೆ ಮಾಡಿ, ಪ್ರತೀ ಪಂಜಾಬಿಗೂ ಉಚಿತ ಚಿಕಿತ್ಸೆ ನೀಡುತ್ತೇವೆ. 24 * 7 ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದಾರೆ.
ಪಂಜಾಬ್ನಲ್ಲಿ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ಫೆಬ್ರವರಿ 14 ಕ್ಕೆ ಮತದಾನ ನಡೆಯಲಿದೆ. ಮಾರ್ಚ್ 20 ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಅಭಿವೃದ್ಧಿಗಾಗಿ ಪಕ್ಷ ಶ್ರಮಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಇನ್ನು ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಜಾಬ್ನಲ್ಲಿ ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದ ಬಗ್ಗೆ ಪ್ರಸ್ತಾಪಿಸಿ, ಒಂದು ವೇಳೆ ನಾವು ಅಧಿಕಾರಕ್ಕೆ ಬಂದರೆ ಪ್ರಧಾನಿಗೆ ಮಾತ್ರವಲ್ಲ ಪಂಜಾಬ್ನ ಪ್ರತಿಯೊಬ್ಬರ ರಕ್ಷಣೆ ಬಗ್ಗೆಯೂ ನಾವು ಖಾತರಿ ಪಡಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಮುಂದಿನ ವಾರ ಆಮ್ ಆದ್ಮೀ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದನ್ನು ನಾವು ಘೋಷಣೆ ಮಾಡಲಿದ್ದೇವೆ ಎಂದು ತಿಳಿಸಿದರು.
ಹಾಗೆಯೇ ಪಂಜಾಬ್ನಲ್ಲಿ ಚರಣ್ಜಿತ್ ಸಿಂಗ್ ಚನ್ನಿ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂಸು ಸುವ್ಯವಸ್ಥೆ ಕುಸಿದಿದೆ. ಬಾಂಬ್ ಬ್ಲಾಸ್ಟ್, ಪ್ರಧಾನ ಮಂತ್ರಿಗಳ ಭದ್ರಲಾ ಲೋಪ ಉಂಟಾಗಿದೆ. ಎಎಪಿ ಪ್ರತಿಯೊಬ್ಬರ ಸುರಕ್ಷತೆ ಬಗ್ಗೆ ಗಮನ ಕೊಡಲಿದೆ ಎಂದು ಹೇಳಿದರು.
ಪಂಜಾಬ್ ಅಭಿವೃದ್ಧಿಗಾಗಿ 10 ಅಂಶಗಳ ಕಾರ್ಯಕ್ರಮದ ಪಟ್ಟಿ ಬಿಡುಗಡೆ ಮಾಡಿದ ಕೇಜ್ರಿವಾಲ್, ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮಗಳು ನಿಜಕ್ಕೂ ಆಶಾದಾಯಕವಾಗಿವೆ ಎಂದು ಹೇಳಿದರು.












Click it and Unblock the Notifications