100 ಲೋಕಸಭಾ ಕ್ಷೇತ್ರಗಳಲ್ಲಿ AAP ಸ್ಪರ್ಧೆ: ಮಿಷನ್ 25 ಟಾರ್ಗೆಟ್!
ನವದೆಹಲಿ, ಸೆಪ್ಟೆಂಬರ್ 24: 2019 ರ ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ತನ್ನ 100 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.
ಈ ನೂರರ ಪೈಕಿ ಕನಿಷ್ಠ 25 ಕ್ಷೇತ್ರಗಳಲ್ಲಾದರೂ ಗೆಲ್ಲುವ ಗುರಿಯನ್ನು AAP ಹೊಂದಿದೆ. ಎಎಪಿ 25 ಸ್ಥಾನಗಳನ್ನು ಗೆದ್ದು, ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದರೆ ರಾಷ್ಟ್ರ ರಾಜಕಾರಣದಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ಇರಾದೆ ಹೊಂದಿದೆ.
2013 ರಲ್ಲಿ ದೆಹಲಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಪ್ರಥಮ ಬಾರಿಗೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ನಂತರ 2015 ರಲ್ಲಿ ನಡೆದ ಮರುಚುನಾವಣೆಯಲ್ಲಿ ಕೇಜ್ರಿವಾಲ್ ಮತ್ತೊಮ್ಮೆ ದೆಹಲಿಯ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ 67 ಸ್ಥಾನಗಳಲ್ಲಿ ಎಎಪಿ ಜಯಗಳಿಸಿ ಅಪೂರ್ವ ಸಾಧನೆ ಮೆರೆದಿತ್ತು.
ಆದರೆ ವಿಧಾನಸಭೆ ಚುನಾವಣೆಯಲ್ಲಿ ತೋರಿದ ಸಾಧನೆಯನ್ನೇ ಲೋಕಸಭೆಯಲ್ಲೂ ಎಎಪಿ ತೋರಿಸುತ್ತದೆಯೇ? ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ತನ್ನ ಮೊದಲಿನ ಜನಪ್ರಿಯತೆಯನ್ನು ಉಳಿಸಿಕೊಂಡಿದೆಯೇ?

ಯಾವ್ಯಾವ ರಾಜ್ಯದಲ್ಲಿ ಸ್ಪರ್ಧೆ?
ದೆಹಲಿ, ಹರ್ಯಾಣ ಮತ್ತು ಪಂಜಾಬ್ ಗಳು ಎಎಪಿಯ ಮುಖ್ಯ ಗುರಿಯಾಗಿದ್ದು, ಅದರೊಂದಿಗೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ಬಿಹಾರ, ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಲ್ಲೂ ಎಎಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಇರಾದೆ ಹೊಂದಿದೆ.

ಕಾಂಗ್ರೆಸ್ ಗೂ ಬೆಂಬಲವಿಲ್ಲ ಎಂದ ಎಎಪಿ
ತಾನು ಬಿಜೆಪಿಗಂತೂ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಅಂತೆಯೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ ಎಂದು ಎಎಪಿ ಹೇಳಿದೆ. ಅಕಸ್ಮಾತ್ ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ತೃತಿಯ ರಂಗವೇನಾದರೂ ಅಸ್ತಿತ್ವಕ್ಕೆ ಬಂದರೆ ಆಗ ಎಎಪಿ ಅದಕ್ಕೆ ಬೆಂಬಲ ನೀಡಬಹುದು. ಆದರೆ ಸ್ವತಂತ್ರವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸ ಕಾಂಗ್ರೆಸ್ ಗೆ ಇದ್ದಂತಿಲ್ಲ. ಆದ್ದರಿಂದ ಅದು ಇತರ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಬಹುದು. ಆಗ ಎಎಪಿ ನಿಲುವೇನು ಎಂಬುದು ಕುತೂಹಲ ಕೆರಳಿಸಿದೆ.

ಎಲ್ಲಾ ಏಳು ಕ್ಷೇತ್ರಗಳೂ ಬಿಜೆಪಿ ಕೈಲಿವೆ!
2014 ರ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯ ಒಟ್ಟು ಏಳು ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿತ್ತು. ಈ ಬಾರಿ ದೆಹಲಿಯ ಏಳು ಕ್ಷೇತ್ರಗಳನ್ನೂ ಗೆಲ್ಲುವ ಉತ್ಸಾಹದಲ್ಲಿ ಎಎಪಿ ಇದೆ. ಹರ್ಯಾಣದ ಒಟ್ಟು 10 ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಪ್ರಬಲ ಪ್ರತಿಸ್ಪರ್ಧಿಗಳನ್ನು ಅಭ್ಯರ್ಥಿಗಳನ್ನಾಗಿ ನಿಲ್ಲಿಸುವ ಯೋಚನೆಯಲ್ಲಿ ಎಎಪಿ ಇದೆ.

ಮತ್ತೆ ಮೋದಿ-ಕೇಜ್ರಿ ಮುಖಾಮುಖ ಿ?
2014 ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಹದಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಸ್ಪರ್ಧಿಯಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಣಕ್ಕಿಳಿದಿದ್ದರು. ಆದರೆ ಅವರು ಸುಮಾರು ಸುಮಾರು 370,000 ಮತಗಳ ಅಂತರದಿಂದ ಸೋಲುಂಡಿದ್ದರು. ಆಗ ಮೋದಿ ಪ್ರಧಾನಿ ಅಭ್ಯರ್ಥಿಯಾಗಿದ್ದರು. ಆದರೆ ಈ ಬಾರಿ ಸ್ವತಃ ಪ್ರಧಾನಿ ಅವರ ವಿರುದ್ಧವೇ ಕಣಕ್ಕಿಳಿಯುವ ಧೈರ್ಯವನ್ನು ಕೇಜ್ರಿವಾಲ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು.












Click it and Unblock the Notifications