ಅಭ್ಯರ್ಥಿ ಅವಹೇಳನೆ ಆರೋಪ: ಗೌತಮ್ ಗಂಭೀರ್ ಪ್ರತಿ ಸವಾಲು
ನವದೆಹಲಿ, ಮೇ 9: ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಅವರು ಎಎಪಿ ಅಭ್ಯರ್ಥಿ ಅತಿಶಿ ಅವರ ವಿರುದ್ಧ ಅವಹೇಳನಾಕಾರಿ ಮತ್ತು ಅಶ್ಲೀಲ ಭಾಷೆಯ ಕರಪತ್ರಗಳನ್ನು ಹಂಚುತ್ತಿದ್ದಾರೆ ಎಂದು ಎಎಪಿ 'ಗಂಭೀರ' ಆರೋಪ ಮಾಡಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅತಿಶಿ ಮತ್ತು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗೌತಮ್ ಗಂಭೀರ್ ವಿರುದ್ಧ ಆರೋಪ ಮಾಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಅತಿಶಿ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರಿಟ್ಟರು.
'ಭಾರತ ತಂಡಕ್ಕೆ ಆಡುವಾಗ ವಿರೋಧಿಗಳ ಎದುರು ಗಂಭೀರ್ ಫೋರ್ ಮತ್ತು ಸಿಕ್ಸರ್ಗಳನ್ನು ಚಚ್ಚುತ್ತಿದ್ದಾಗ ನಾವು ಚಪ್ಪಾಳೆ ತಟ್ಟುತ್ತಿದ್ದೆವು. ಆದರೆ, ಈ ಮನುಷ್ಯ ಚುನಾವಣೆಯಲ್ಲಿ ಗೆಲ್ಲಲು ಈ ರೀತಿ ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ನಮ್ಮ ಕೆಟ್ಟ ಕನಸಿನಲ್ಲಿಯೂ ಊಹಿಸಿರಲಿಲ್ಲ' ಎಂದು ಸಿಸೋಡಿಯಾ ಹೇಳಿದರು.
ಗಂಭೀರ್ ಅವರು ಅತಿಶಿ ಅವರ ವೈಯಕ್ತಿಕ ಬದುಕನ್ನು ತೇಜೋವಧೆ ಮಾಡುವ ಅಶ್ಲೀಲ ಬರಹವುಳ್ಳ ಕರಪತ್ರ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಮ್ಮ ವಿರುದ್ಧ ಆರೋಪವನ್ನು ಗಂಭೀರ್ ಬಲವಾಗಿ ನಿರಾಕರಿಸಿದ್ದಾರೆ. ನಾನು ಈ ಕರಪತ್ರಗಳನ್ನು ಹಂಚಿದ್ದೇನೆ ಎಂಬುದು ಸಾಬೀತಾದರೆ ಈಗಲೇ ನನ್ನ ಅಭ್ಯರ್ಥಿತನವನ್ನು ಹಿಂದಕ್ಕೆ ಪಡೆದುಕೊಳ್ಳುತ್ತೇನೆ. ಇಲ್ಲದಿದ್ದರೆ, ನೀವು (ಅರವಿಂದ್ ಕೇಜ್ರಿವಾಲ್ ಮತ್ತು ಅತಿಶಿ) ರಾಜಕೀಯ ತೊರೆಯುತ್ತೀರಾ? ಎಂದು ಗಂಭೀರ್ ಸವಾಲು ಹಾಕಿದರು.

ಮಹಿಳೆಯರ ಸುರಕ್ಷತೆ ಹೇಗೆ?
'ಗೌತಮ್ ಗಂಭೀರ್ ಅವರಿಗೆ ನನ್ನದು ಒಂದೇ ಒಂದು ಪ್ರಶ್ನೆ ಇದೆ. ಅವರು ಒಬ್ಬ ಮಹಿಳೆಯ ವಿರುದ್ಧ ಹೀಗೆ ಮಾಡುವುದಾದರೆ, ತಮ್ಮ ಸುರಕ್ಷತೆಯ ಬಗ್ಗೆ ಚಿಂತೆಗೊಳಗಾಗಿರುವ ಪೂರ್ವ ದೆಹಲಿಯ ಲಕ್ಷಾಂತರ ಮಹಿಳೆಯರ ಪಾಡೇನು?' ಎಂದು ಅತಿಶಿ ಪ್ರಶ್ನಿಸಿದರು.
|
ಮಹಿಳೆಯರ ಸುರಕ್ಷತೆ ಕತೆಯೇನು?
'ಗಂಭೀರ್ ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ಊಹಿಸಿರಲಿಲ್ಲ. ಇಂತಹ ಮನೋಭಾವ ಹೊಂದಿರುವ ವ್ಯಕ್ತಿಗೆ ಮತ ಹಾಕಿದರೆ ಮಹಿಳೆಯರ ಸುರಕ್ಷತೆ ಬಗ್ಗೆ ಏನನ್ನು ನಿರೀಕ್ಷಿಸಲು ಸಾಧ್ಯ? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
|
ಪೊರಕೆಯಲ್ಲಿ ಶುದ್ಧಮಾಡಿಕೊಳ್ಳಿ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್, ಮಹಿಳೆಯೊಬ್ಬರ ಅದೂ ನಿಮ್ಮದೇ ಸಹೋದ್ಯೋಗಿಯೊಬ್ಬರ ಘನತೆಯನ್ನು ಕುಗ್ಗಿಸುವ ನಿಮ್ಮ ಕೃತ್ಯದ ಬಗ್ಗೆ ತುಂಬಾ ಅಸಹ್ಯವಾಗುತ್ತಿದೆ ಕೇಜ್ರಿವಾಲ್ಜಿ. ಇದು ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿಯೇ? ಮಿಸ್ಟರ್ ಸಿಎಂ ನೀವು ಕೊಳಕಾಗಿದ್ದೀರಿ. ನಿಮ್ಮ ಕೊಳಕು ಮನಸ್ಸನ್ನು ಸ್ವಚ್ಛಗೊಳಿಸಲು ನಿಮ್ಮದೇ ಪೊರಕೆಯನ್ನು ಬಳಸಬೇಕಾದ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸಾಕ್ಷ್ಯ ನೀಡಿದರೆ ರಾಜೀನಾಮೆ
ಅವರಿಗೆ ಪುರಾವೆ ದೊರೆತರೆ ನಾನು ಈಗಲೇ ರಾಜೀನಾಮೆ ಕೊಡುತ್ತೇನೆ. ಅವರಿಗೆ 23ರಂದು ಪುರಾವೆ ದೊರೆತರೆ, ಆ ದಿನವೇ ರಾಜೀನಾಮೆ ನೀಡುತ್ತೇನೆ. ಆದರೆ, ಅರವಿಂದ್ ಕೇಜ್ರಿವಾಲ್ ಅವರು ಪುರಾವೆ ಒದಗಿಸಲು ವಿಫಲರಾದರೆ, ತಾವು ರಾಜಕೀಯವನ್ನು ಸಂಪೂರ್ಣವಾಗಿ ತ್ಯಜಿಸುವುದಾಗಿ 23ರಂದು ಒಪ್ಪಿಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದರು.
|
ಮಾನನಷ್ಟ ಮೊಕದ್ದಮೆ ಎಚ್ಚರಿಕೆ
ಅವರ ವಿರುದ್ಧ ಖಂಡಿತವಾಗಿಯೂ ಮಾನಹಾನಿ ಮೊಕದ್ದಮೆ ಹಾಕುತ್ತೇನೆ. ನಿಮ್ಮ ಬಳಿ ಸಾಕ್ಷ್ಯ ಇಲ್ಲದೆ ಈ ರೀತಿ ಒಬ್ಬರ ಚಾರಿತ್ರ್ಯವಧೆ ಮಾಡಬಾರದು. ನನ್ನ ಚುನಾವಣಾ ಪ್ರಚಾರಗಳಲ್ಲಿ ಇದುವರೆಗೂ ಯಾರ ವಿರುದ್ಧವೂ ನಾನು ನಕಾರಾತ್ಮಕ ಹೇಳಿಕೆ ಕೂಡ ನೀಡಿಲ್ಲ ಎಂದು ಗಂಭೀರ್ ಹೇಳಿದರು.












Click it and Unblock the Notifications