ಕ್ವಿಟ್ ಇಂಡಿಯದಿಂದ ನ್ಯೂ ಇಂಡಿಯಾ: ಟ್ವಿಟ್ಟರ್ ನಲ್ಲಿ ಸಂಕಲ್ಪ
ನವದೆಹಲಿ, ಆಗಸ್ಟ್ 9: 1947, ಆಗಸ್ಟ್ 15 ರಂದು ಭಾರತ ಸ್ವಾತಂತ್ರ್ಯ ಪಡೆಯುವುದಕ್ಕೆ ಬಹುಮುಖ್ಯ ಕಾರಣ 1942 ಆಗಸ್ಟ್ 9 ರಂದು ಆರಂಭವಾದ 'ಕ್ವಿಟ್ ಇಂಡಿಯಾ' ಚಳವಳಿ.
ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ನಡೆದ "ಬ್ರಿಟೀಶರೇ ಭಾರತ ಬಿಟ್ಟು ತೊಲಗಿ" ಎಂಬ ಈ ಚಳವಳಿ, ಭಾರತೀಯರ ಶಕ್ತಿ, ದೇಶಕ್ಕಾಗಿ ಬಲಿದಾನಕ್ಕೂ ಸಿದ್ಧವಿರುವ ದೇಶಪ್ರೇಮ ಗಳನ್ನು ಪ್ರಕಟಪಡಿಸಿ ಬ್ರಿಟೀಶರಲ್ಲಿ ಭಯ ಮೂಡಿಸಿತ್ತು.
ಈ ಚಳವಳಿಗೆ ಇಂದಿಗೆ 75 ವಸಂತಗಳು ಸಂದಿವೆ. ಈ ಚಳಿವಳಿಯ ತರುವಾಯ 5 ವರ್ಷದಲ್ಲಿ ಭಾರತ ಸ್ವಾತಂತ್ರ್ಯವನ್ನೂ ಪಡೆದು, ನಂತರ ಹಂತ ಹಂತವಾಗಿ ಬೆಳೆಯುತ್ತ ಇದೀಗ ಅತೀವೇಗದಲ್ಲಿ ಬೆಳವಣಿಗೆ ಹೊಂದುತ್ತಿರುವ ದೇಶವಾಗಿ ಹೆಸರಾಗಿದೆ.
ಭಾರತೀಯ ಅಸ್ಮಿತೆಯನ್ನು ಪ್ರಕಟಿಸುವುದಕ್ಕೆ ಸಹಕಾರಿಯಾದ ಕ್ವಿಟ್ ಇಂಡಿಯಾ ಚಳವಳಿಯ ವಜ್ರಮಹೋತ್ಸವದ ದಿನವನ್ನು, ಭಾರತೀಯರೆಲ್ಲ ಸೇರಿ 2022 ರ ಹೊತ್ತಿಗೆ ಹೊಸ ಭಾರತವನ್ನು ಕಟ್ಟುವ ಸಂಕಲ್ಪ ಮಾಡಿಕೊಳ್ಳುವುದಕ್ಕಾಗಿ ಮೀಸಲಿಡಬೇಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ.
'ಭಾರತ ಬಿಟ್ಟು ತೊಲಗಿ ಆಂದೋಲನ'ಕ್ಕೆ 75 ವರ್ಷ: ಸಂಸತ್ ವಿಶೇಷ ಅಧಿವೇಶನ
ಸ್ವಚ್ಛ ಭಾರತ, ಬಡತನ ಮುಕ್ತ ಭಾರತ, ಭ್ರಷ್ಟಾಚಾರ ಮುಕ್ತ ಭಾರತ, ಭಯೋತ್ಪಾದನೆ ಮುಕ್ತ ಭಾರತ, ಕೋಮುವಾದ ಮುಕ್ತ ಭಾರತ, ಜಾತೀಯತೆ ಮುಕ್ತ ಭಾರತ ಇವೆಲ್ಲವನ್ನೂ ಒಟ್ಟಾಗಿ ಸಾಧಿಸುವ ಸಂಕಲ್ಪ ಮಾಡಿಕೊಳ್ಳುವ ಉದ್ದೇಶದಿಂದಾಗಿ 'ಸಂಕಲ್ಪ್ ಸೆ ಸಿದ್ಧಿ' ಎಂಬ ಘೋಷ ವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.
ಟ್ವಿಟ್ಟರ್ ನಲ್ಲಿಯೂ #SankalpSeSiddhi ಹ್ಯಾಶ್ ಟ್ಯಾಗ್ ಮೂಲಕ ಹಲವು ನಾಯಕರು ಟ್ವೀಟ್ ಮಾಡಿದ್ದಾರೆ. ಆ ಮೂಲಕ ವಜ್ರಮಹೋತ್ಸವಕ್ಕೆ ಶುಭಕೋರಿದ್ದಲ್ಲದೆ, ಹೊಸ ಭಾರತ ಕಟ್ಟುವ ಸಂಕಲ್ಪ ಮಾಡಿದ್ದಾರೆ.
|
ಪ್ರಧಾನಿ ಮೋದಿ ಹಾರೈಕೆ
ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹೆಮ್ಮೆ ಪಡುವಂತೆ ನಾವು ಹೆಗಲಿಗೆ ಹೆಗಲು ಕೊಟ್ಟು ಭಾರತಕ್ಕಾಗಿ ಕೆಲಸ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.
|
ಕ್ವಿಟ್ ಇಂಡಿಯಾದಿಂದ ನ್ಯೂ ಇಂಡಿಯಾವರೆಗೆ...
ಕ್ವಿಟ್ ಇಂಡಿಯಾದಿಂದ ಹೊಸ ಭಾರತದವರೆಗೆ ನಮ್ಮ ದೇಶ ಹಲವು ದೂರದವರೆಗೆ ಪಯಣಿಸಿದೆ. ಈಗ 'ಸಂಕಲ್ಪ್ ಸೆ ಸಿದ್ಧಿ' ಮೂಲಕ ಹೊಸ ಭಾರತವನ್ನು ಕಟ್ಟುವ ಹೊಣೆ ನಮ್ಮ ಮೇಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಟ್ವೀಟ್ ಮಾಡಿದ್ದಾರೆ.
|
ಆರೋಗ್ಯಕರ ಭಾರತ ನಿರ್ಮಾಣ...
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಹೊಗೆ ರಹಿತ ಮತ್ತು ಆರೋಗ್ಯಕರ ಜೀವನದ ಭರವಸೆ ನೀಡಲಾಗಿದೆ. 2022 ರ ಹೊತ್ತಿಗೆ ಆರೋಗ್ಯಕರ ಭಾರತವನ್ನು ಕಟ್ಟುವ ಸಂಕಲ್ಪ ಮಾಡೋಣ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.
|
ಸಂಕಲ್ಪಸಿದ್ಧಿಗೆ ಪಣತೊಡೋಣ...
2022 ರ ಹೊತ್ತಿಗೆ ಹೊಸ ಭಾರತವನ್ನು ಕಟ್ಟುವುದು ನಮ್ಮ ಸಂಕಲ್ಪ. ಈ ಸಂಕಲ್ಪ ಸಿದ್ಧಿಗಾಗಿ ನಾವು ನಮ್ಮ ತನು, ಮನ, ದನ ಮತ್ತು ಆತ್ಮವನ್ನು ದೇಶ ಸೇವೆಗೆ ನೀಡಬೇಕಿದೆ ಎಂದು ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಟ್ವೀಟ್ ಮಾಡಿದ್ದಾರೆ.