ರಾಜ, ಕನ್ನಿಮೋಳಿಗೆ 7 ವರ್ಷ ಜೈಲು ಭೀತಿ
ನವದೆಹಲಿ, ಅ.31: 2ಜಿ ತರಂಗ ಗುಚ್ಛ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಟೆಲಿಕಾಂ ಎ.ರಾಜ ಮತ್ತು ಕನ್ನಿಮೋಳಿ ಹಾಗೂ ಎಲ್ಲಾ 19 ಆರೋಪಿಗಳ ವಿರುದ್ಧ ಪೊಲೀಸರು ಪಟಿಯಾಲ ಕೋರ್ಟ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಆರೋಪ ಸಾಬೀತಾದರೆ 7 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ.
ಬಹುಕೋಟಿ 2ಜಿ ತರಂಗಾಂತರ ಪ್ರಕರಣದಲ್ಲಿ ಸುಮಾರು 200 ಕೋಟಿ ರು ಹವಾಲಾ ಹಣವನ್ನು ಲಂಚ ರೂಪದಲ್ಲಿ ಬಳಸಲಾಗಿದೆ ಎಂದು ಮಾಜಿ ಟೆಲಿಕಾಂ ಸಚಿವ ಎ.ರಾಜಾ ಮತ್ತು ಕನ್ನಿಮೋಳಿ ಅವರ ವಿರುದ್ಧ ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ.

ರಾಜಾ, ಕನ್ನಿಮೋಳಿ, ಸ್ವಾನ್ ಟೆಲಿಕಾಮ್ ನ ಪ್ರವರ್ತಕರಾದ ಶಾಹಿದ್ ಉಸ್ಮಾನ್ ಮತ್ತು ವಿನೋದ್ ಗೊಯೆಂಕಾ, ಕರುಣಾನಿಧಿ ಪತ್ನಿ ದಯಾಳು ಅಮ್ಮಾಳ್ ಸೇರಿದಂತೆ ಪ್ರಕರಣದ ಎಲ್ಲಾ 19 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಾಗಿದೆ. ಐಪಿಸಿ ಸೆಕ್ಷನ್ 120-ಬಿ (ಅಪರಾಧ ಹಿನ್ನಲೆ) ಹವಾಲಾ ಹಣ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಚಾರ್ಜ್ ಶೀಟ್ ದಾಖಲು ಮಾಡಲಾಗಿದೆ.
ಮಾಜಿ ಟೆಲಿಕಾಮ್ ಸಚಿವ ಎ.ರಾಜಾ ಮತ್ತು ಕರುಣಾನಿಧಿ ಅವರ ಮಗಳಾದ ಕನ್ನಿಮೋಳಿ ಅವರು ಒಟ್ಟು 9 ಸಂಸ್ಥೆಗಳಿಂದ ಅಕ್ರಮವಾಗಿ ಹಣ ಪಡೆದ ಆರೋಪವಿದ್ದು, ಈ ಹಿಂದೆ ಕಳೆದ ಆಗಸ್ಟ್ 20ರಂದು ಇದೇ ಪ್ರಕರಣ ಸಂಬಂಧ ಕರುಣಾನಿಧಿ ಪತ್ನಿ ದಯಾಳು ಅಮ್ಮಾಳ್ ಅವರಿಗೆ ದೆಹಲಿಯ ಸಿಬಿಐ ವಿಶೇಷ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅಮ್ಮಾಳ್ ಅವರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶರಾಗಿದ್ದ ಒ.ಪಿ.ಸೈನಿ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದರು.












Click it and Unblock the Notifications