ಪಶ್ಚಿಮ ಬಂಗಾಳದಲ್ಲಿ ಗುಡುಗು ಸಿಡಿಲಿಗೆ 26 ಮಂದಿ ಸಾವು; ಮೋದಿ ಪರಿಹಾರ ಘೋಷಣೆ
ನವದೆಹಲಿ, ಜೂನ್ 08: ಪಶ್ಚಿಮ ಬಂಗಾಳದ ಮೂರು ಜಿಲ್ಲೆಗಳಲ್ಲಿ ಸೋಮವಾರ ಸಿಡಿಲು ಬಡಿದು ಒಟ್ಟು 26 ಮಂದಿ ಸಾವನ್ನಪ್ಪಿರುವುದಾಗಿ ರಾಜ್ಯ ವಿಪತ್ತು ನಿರ್ವಹಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುರ್ಷಿದಾಬಾದ್ ಹಾಗೂ ಹೂಗ್ಲಿ ಜಿಲ್ಲೆಯಲ್ಲಿ ತಲಾ ಒಂಬತ್ತು ಮಂದಿ ಹಾಗೂ ಪೂರ್ವ ಮಿಡ್ನಾಪುರದಲ್ಲಿ ಇಬ್ಬರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ಇನ್ನೂ ಮೂರು ಮಂದಿಗೆ ಗಾಯವಾಗಿದ್ದು, ಜಂಗೀಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಿಡಿಲಿನಿಂದ ಸಂಭವಿಸಿರುವ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬದವರಿಗೆ ಪಿಎಂಎನ್ ಆರ್ ಎಫ್ ನಿಂದ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ನೀಡಲು ಅನುಮೋದನೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು "ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ಮಿಂಚು-ಸಿಡಿಲಿನಿಂದ ತಮ್ಮ ಹತ್ತಿರದ ಬಂಧು ಬಾಂಧವರನ್ನು ಕಳೆದುಕೊಂಡವರ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಗಾಯಗೊಂಡಿರುವವರು ಆದಷ್ಟು ಶೀಘ್ರ ಗುಣಮುಖರಾಗಲಿ'' ಎಂದು ಹೇಳಿದ್ದಾರೆ.
ಸೋಮವಾರ ಸಂಜೆ ನಂತರ ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಮಿಂಚು ಗುಡುಗು ಸಹಿತ ಭಾರೀ ಮಳೆಯಾಗಿದೆ. ಪೂರ್ವ ಮಿಡ್ನಾಪುರ, ಸೌತ್ 24 ಪರಗಣ, ಕೋಲ್ಕತ್ತಾ, ಹೂಗ್ಲಿ, ಹೌರಾಹ್, ಮುರ್ಷಿದಾಬಾದ್, ಪುರುಲಿಯಾ, ಬಂಕುರಾ, ನಾದಿಯಾ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅನುಭವವಾಗಿದೆ.












Click it and Unblock the Notifications