ನಿರ್ಭಯಾ ಪ್ರಕರಣ: ಅಪರಾಧಿ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕೃತ
ನವದೆಹಲಿ, ಜನವರಿ.16: 2012ರ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ಮುಕೇಶ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ದೆಹಲಿ ಸರ್ಕಾರವು ತಿರಸ್ಕರಿಸಿದೆ. ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರಿಗೆ ಕ್ಷಮಾದಾನ ಅರ್ಜಿಯನ್ನು ರವಾನೆ ಮಾಡಲಾಗುತ್ತದೆ.
ನಾಲ್ವರು ಅಪರಾಧಿಗಳ ಪೈಕಿ ಒಬ್ಬ ಅಪರಾಧಿ ಮುಕೇಶ್ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದು, ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರ ಗೃಹ ಸಚಿವಾಲಯಕ್ಕೆ ಅರ್ಜಿಯನ್ನು ಕಳುಹಿಸಲಾಗುತ್ತದೆ. ಅಲ್ಲಿಂದ ಮುಂದೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಈ ಕ್ಷಮಾದಾನ ಅರ್ಜಿಯನ್ನು ರವಾನೆ ಮಾಡಲಾಗುತ್ತದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರೆ ಮಾತ್ರ ನಾಲ್ವರು ಅಪರಾಧಿಗಳಿಗೆ ಜನವರಿ.22ರ ಬೆಳಗ್ಗೆ 7 ಗಂಟೆಗೆ ಗಲ್ಲುಶಿಕ್ಷೆ ಪಕ್ಕಾ ಆಗಲಿದೆ. ಇಲ್ಲದಿದ್ದರೆ ಮತ್ತೆ ವಿಳಂಬವಾಗುವ ಸಾಧ್ಯತೆಗಳಿವೆ.

ಗಲ್ಲುಶಿಕ್ಷೆ ವಿಧಿಸಬೇಕಾದ್ರೆ ಅರ್ಜಿ ಇತ್ಯರ್ಥವಾಗಬೇಕು
ಮಾದಾನದ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಇತ್ಯರ್ಥವಾಗುವವರೆಗೂ ಗಲ್ಲುಶಿಕ್ಷೆ ಜಾರಿಗೊಳಿಸುವುದು ಸಾಧ್ಯವಾಗುವುದಿಲ್ಲ. ಹೀಗೆಂದು ದೆಹಲಿ ಸರ್ಕಾರ, ದೆಹಲಿ ಹೈಕೋರ್ಟ್ಗೆ ಬುಧವಾರ ತಿಳಿಸಿದೆ. ಇದರಿಂದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ಜಾರಿಗೊಳಿಸುವಲ್ಲಿ ವಿಳಂಬವಾಗಲಿದೆ.

ತಿಹಾರ್ ಜೈಲಿನ ನಿಯಮದ ಬಗ್ಗೆ ಗೊತ್ತಿದೆಯೇ?
ದೆಹಲಿ ತಿಹಾರ್ ಕಾರಾಗೃಹದ ನಿಯಮ ಮತ್ತು ಸುಪ್ರೀಂಕೋರ್ಟ್ ನ ಈ ಹಿಂದಿನ ಆದೇಶಗಳ ಅನ್ವಯ ಕ್ಷಮಾದಾನದ ಅರ್ಜಿಗಳು ಬಾಕಿ ಉಳಿದಿದ್ದಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿಗೊಳಿಸುವ ಹಾಗಿಲ್ಲ. ಬದಲಿಗೆ ಸ್ವಯಂಚಾಲಿತವಾಗಿಯೇ ಗಲ್ಲುಶಿಕ್ಷೆಗೆ ತಡೆ ಬೀಳುತ್ತದೆ. ಈ ಬಗ್ಗೆ ದೆಹಲಿ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯ ದೆಹಲಿ ಹೈಕೋರ್ಟ್ನಲ್ಲಿ ಬುಧವಾರ ನಡೆದ ವಿಚಾರಣೆ ವೇಳೆ ಮಾಹಿತಿ ನೀಡಿವೆ.

ಒಬ್ಬರ ಅರ್ಜಿಯಿಂದ ನಾಲ್ವರಿಗೂ ಗಲ್ಲುಶಿಕ್ಷೆ ವಿಧಿಸುವಂತಿಲ್ಲ
ತಿಹಾರ್ ಜೈಲಿನ ನಿಯಮಾವಳಿ ಪ್ರಕಾರ ಒಬ್ಬನಿಗಿಂತ ಅಧಿಕ ಅಪರಾಧಿಗಳಿದ್ದು, ಈ ಪೈಕಿ ಒಬ್ಬ ಅಪರಾಧಿ ಕ್ಷಮಾದಾನ ಸಲ್ಲಿಸಿದರೂ ಮುಗಿಯಿತು. ಆ ಕ್ಷಮಾದಾನ ಅರ್ಜಿ ಇತ್ಯರ್ಥವಾಗುವವರೆಗೂ ಆ ಪ್ರಕರಣದ ಯಾವ ಅಪರಾಧಿಗೂ ಗಲ್ಲುಶಿಕ್ಷೆ ವಿಧಿಸುವಂತಿಲ್ಲ.

ನಾಲ್ವರು ಅಪರಾಧಿಗಳಿಗೆ ಡೆತ್ ವಾರಂಟ್ ಜಾರಿಗೊಳಿಸಿದ್ದ ಕೋರ್ಟ್
ದೆಹಲಿ ನಿರ್ಭಯಾ ಪ್ರಕರಣದ ಅಪರಾಧಿಗಳಾದ ಮುಕೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31)ಗೆ ಜನವರಿ 22ರ ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸಲು ಪಟಿಯಾಲಾ ಹೌಸ್ ಕೋರ್ಟ್ ಡೆತ್ ವಾರಂಟ್ ಜಾರಿಗೊಳಿಸಿದೆ. 2017ರಲ್ಲಿ ಸುಪ್ರೀಂಕೋರ್ಟ್ ನಿರ್ಭಯಾ ಪ್ರಕರಣದ ಎಲ್ಲಾ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ನೀಡಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ಪ್ರಕರಣದ ಒಬ್ಬ ಅಪರಾಧಿ ರಾಮ್ ಸಿಂಗ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮತ್ತೊಬ್ಬ ಬಾಲಾಪರಾಧಿ ಆದ ಕಾರಣ ಬಿಡುಗಡೆಗೊಳಿಸಲಾಗಿತ್ತು.












Click it and Unblock the Notifications