ದೆಹಲಿ ಸಮೀಕ್ಷೆ: 20 ಕ್ಷೇತ್ರದ ಚುನಾವಣೆಯಲ್ಲಿ ಕೇಜ್ರಿಗೆ ಭಾರೀ ಮುಖಭಂಗ!
Recommended Video

ಲಾಭದಾಯಕ ಹುದ್ದೆ ಹೊಂದಿದ ಆರೋಪದ ಹಿನ್ನಲೆಯಲ್ಲಿ ದೆಹಲಿ ಆಡಳಿತ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸುವ ಚುನಾವಣಾ ಆಯೋಗದ ಶಿಫಾರಸ್ಸಿಗೆ ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.
ಹೀಗಾಗಿ, ಆಮ್ ಆದ್ಮಿ ಪಕ್ಷಕ್ಕೆ ಇರುವ ಕೊನೆಯ ಭರವಸೆ ಈಗ ಉಳಿದಿರುವುದು ನ್ಯಾಯಾಂಗ ಒಂದೇ. ಸೋಮವಾರದಿಂದ (ಜ 22) ಆಮ್ ಆದ್ಮಿ ಪಕ್ಷದ ಅರ್ಜಿಯ ವಿಚಾರಣೆ ಆರಂಭಗೊಳ್ಳಲಿದೆ. ಒಂದು ವೇಳೆ ಅಲ್ಲೂ ಆಮ್ ಆದ್ಮಿ ಪಕ್ಷಕ್ಕೆ ಸೋಲಾದರೆ, ಇಪ್ಪತ್ತು ಕ್ಷೇತ್ರಗಳಲ್ಲಿ ಮತ್ತೆ ಚುನಾವಣೆ ಆರು ತಿಂಗಳೊಳಗೆ ನಡೆಯಬೇಕಾಗಿದೆ.
ಈ ಇಪ್ಪತ್ತು ಕ್ಷೇತ್ರಗಳಲ್ಲಿ ಚುನಾವಣೆ ನಡೆದರೆ, ಆ ಕ್ಷೇತ್ರಗಳ ಸದ್ಯದ ಮತದಾರರ ನಾಡಿಮಿಡಿತ 'ಈಗ' ಹೇಗಿದೆ ಎಂದು ಸಿವೋಟರ್ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ಪ್ರಕಾರ ಆಮ್ ಆದ್ಮಿ ಪಕ್ಷಕ್ಕೆ ಅಲ್ಲಿ ಭಾರೀ ಮುಖಭಂಗವಾಗಲಿದೆ.
ಆಡಳಿತಾತ್ಮಕ ವಿಚಾರವಾಗಿ ಒಂದಲ್ಲಾ ಒಂದು ಕಾರಣಕ್ಕೆ ಕೇಂದ್ರ ಸರಕಾರದ ವಿರುದ್ದ ತಕರಾರು ತೆಗೆಯುತ್ತಲೇ ಬರುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಂಡ್ ಕೋ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿಲ್ಲ.
ಕಾರಣ, ಕೆಲವೊಂದು ಸಮೀಕ್ಷೆಗಳ ಪ್ರಕಾರ, ಚುನಾವಣೆ ಗೆದ್ದಾಗ ಪಕ್ಷಕ್ಕಿದ್ದ ಜನಪ್ರಿಯತೆ ಈಗ ಇಲ್ಲ ಎನ್ನುವುದು.. ಸಿವೋಟರ್ - ಎಬಿಪಿ ನ್ಯೂಸ್ ನಡೆಸಿದ ಲೇಟೆಸ್ಟ್ ಸಮೀಕ್ಷೆಯಲ್ಲೂ ಇದೇ ಅಂಶ ವ್ಯಕ್ತವಾಗಿದೆ. 20 ಕ್ಷೇತ್ರದ ಚುನಾವಣೆಯಲ್ಲಿ, ಆಮ್ ಆದ್ಮಿ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು? ಮುಂದೆ ಓದಿ..

ಉತ್ತರಪ್ರದೇಶ ಮೂಲದ ಪ್ರಶಾಂತ್ ಪಟೇಲ್ ಎನ್ನುವ ವಕೀಲರು
ಲಾಭದಾಯಕ ಹುದ್ದೆ ಹೊಂದಿದ ಆರೋಪದಡಿ ಉತ್ತರಪ್ರದೇಶ ಮೂಲದ ಪ್ರಶಾಂತ್ ಪಟೇಲ್ ಎನ್ನುವ ವಕೀಲರು, ರಾಷ್ಟ್ರಪತಿಗೆ ದೂರು ಸಲ್ಲಿಸಿದ್ದರು. ರಾಷ್ಟ್ರಪತಿ ಭವನ ಈ ದೂರನ್ನು ಚುನಾವಣಾ ಆಯೋಗಕ್ಕೆ ರವಾನಿಸಿತ್ತು. ಜೂನ್ 2015ರಲ್ಲಿ ಸಲ್ಲಿಸಲಾಗಿದ್ದ ಈ ಅರ್ಜಿಯ ವಿಚಾರಣೆ ನಡೆಸಿದ್ದ ಚುನಾವಣಾ ಆಯೋಗ, ಇಪ್ಪತ್ತು ಶಾಸಕರನ್ನು ಅನರ್ಹಗೊಳಿಸುವ ತೀರ್ಮಾನಕ್ಕೆ ಬಂದು ರಾಷ್ಟ್ರಪತಿಯವರ ಅಂಕಿತಕ್ಕೆ ಕಳುಹಿಸಿತ್ತು. ರಾಷ್ಟ್ರಪತಿಗಳು ಈ ಶಿಫಾರಸಿಗೆ ಈಗ ಸಹಿ ಹಾಕಿದ್ದಾರೆ.

ಅರವಿಂದ್ ಕೇಜ್ರಿವಾಲ್ ಸರಕಾರಕ್ಕೆ ಯಾವುದೇ ತೊಂದರೆಯಿಲ್ಲ
ಇಪ್ಪತ್ತು ಶಾಸಕರನ್ನು ಅನರ್ಹಗೊಂಡರೂ ಅರವಿಂದ್ ಕೇಜ್ರಿವಾಲ್ ಸರಕಾರಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ, ಸಿವೋಟರ್ ಮತ್ತು ಎಬಿಪಿ ನ್ಯೂಸ್ ನಡೆಸಿದ ಸಮೀಕ್ಷೆಯ ಪ್ರಕಾರ ಆಮ್ ಆದ್ಮಿ ಪಕ್ಷ ಕನಿಷ್ಠ ಹನ್ನೆರಡು ಕ್ಷೇತ್ರವನ್ನು ಕಳೆದುಕೊಳ್ಳಲಿದೆ.

ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ಎಂಟೆಂಟು ಸ್ಥಾನವನ್ನು ಗೆದ್ದರೆ, ಕಾಂಗ್ರೆಸ್ ನಾಲ್ಕು
ಇಪ್ಪತ್ತು ಕ್ಷೇತ್ರದಲ್ಲಿ ಚುನಾವಣೆ ನಡೆದರೆ, ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ಎಂಟೆಂಟು ಸ್ಥಾನವನ್ನು ಗೆದ್ದರೆ, ಕಾಂಗ್ರೆಸ್ ನಾಲ್ಕು ಸ್ಥಾನದಲ್ಲಿ ಜಯಗಳಿಸಲಿದೆ. ಹಾಗಾಗಿ, ತನ್ನ ಸುಪರ್ದಿಯಲ್ಲಿರುವ ಇಪ್ಪತ್ತು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಕನಿಷ್ಠ ಹನ್ನೆರಡು ಸ್ಥಾನದಲ್ಲಿ ಸೋಲು ಅನುಭವಿಸಲಿದೆ.

ಎಲ್ಲಾ ಇಪ್ಪತ್ತು ಕ್ಷೇತ್ರಗಳಲ್ಲಿ ಸೋಲು ಅನುಭವಿಸಲಿದೆ
ಆದರೆ, ಕೆಲವೊಂದು ಮೂಲಗಳ ಪ್ರಕಾರ ಆಮ್ ಆದ್ಮಿ ಪಕ್ಷ ನಡೆಸಿದ ಆಂತರಿಕ ಸಮೀಕ್ಷೆ ದೆಹಲಿ ಸಿಎಂ ಕೇಜ್ರಿವಾಲ್ ಅವರ ಕೈಗೆ ಭಾನುವಾರ (ಜ 21) ಸೇರಿದೆ. ಅದರ ಪ್ರಕಾರ, ಆಪ್ ಎಲ್ಲಾ ಇಪ್ಪತ್ತು ಕ್ಷೇತ್ರಗಳಲ್ಲಿ ಸೋಲು ಅನುಭವಿಸಲಿದೆ. ಬಿಜೆಪಿ ಮತ್ತು ಕಾಂಗ್ರೆಸ್, ಚುನಾವಣೆಯ ಸಂಪೂರ್ಣ ಲಾಭ ಪಡೆದುಕೊಳ್ಳಲಿದೆ.

ಅಲ್ಕಾ ಲಂಬಾ, ಅನಿಲ್ ಬಾಜ್ಪೇಯಿ, ಅವತಾರ್ ಸಿಂಗ್, ಆದರ್ಶ್ ಶಾಸ್ತ್ರಿ
ಒಂದು ವೇಳೆ, ಪಕ್ಷದ ವಿವಾದೀತ ಶಾಸಕರಾದ ಅಲ್ಕಾ ಲಂಬಾ, ಅನಿಲ್ ಬಾಜ್ಪೇಯಿ, ಅವತಾರ್ ಸಿಂಗ್, ಆದರ್ಶ್ ಶಾಸ್ತ್ರಿ ಮುಂತಾದ ಹಾಲೀ ಶಾಸಕರಿಗೆ ಟಿಕೆಟ್ ನೀಡದೇ ಇದ್ದಲ್ಲಿ, ಆಮ್ ಆದ್ಮಿ ಪಕ್ಷ ಸ್ವಲ್ಪ ಮರ್ಯಾದೆ ಉಳಿಸಿಕೊಳ್ಳಬಹುದು ಎಂದು ಪಕ್ಷದ ರೆಬೆಲ್ ಮುಖಂಡ ಕಪಿಲ್ ಮಿಶ್ರಾ ಹೇಳಿದ್ದಾರೆ, ಟ್ವಿಟ್ಟರ್ ನಲ್ಲಿ ಡಂಗುರ ಸಾರುತ್ತಿದ್ದಾರೆ.












Click it and Unblock the Notifications