ಸತ್ಯ ಗೆಲ್ಲಲಿದೆ ಎಂದಿರುವ ಸಜ್ಜನ್ ಕುಮಾರ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
ನವದೆಹಲಿ, ಡಿಸೆಂಬರ್ 18 : ಸಿಖ್ ವಿರೋಧಿ ದಂಗೆ ಮತ್ತು ಹತ್ಯಾಕಾಂಡ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಕಾಂಗ್ರೆಸ್ ಧುರೀಣ ಸಜ್ಜನ್ ಕುಮಾರ್ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಗೌರವಾನ್ವಿತ ದೆಹಲಿ ಹೈಕೋರ್ಟ್ ನನ್ನ ವಿರುದ್ಧ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
34 ವರ್ಷಗಳ ಹಿಂದೆ 1984ರ ನವೆಂಬರ್ 1ರಿಂದ 4ರವರೆಗೆ ನಡೆದಿದ್ದ ಸಿಖ್ ವಿರೋಧಿ ದಂಗೆಯಲ್ಲಿ, ಎಲ್ಲ ಸರ್ದಾರ್ಜಿಗಳನ್ನು ಕೊಂದು ಹಾಕಲು ಸಜ್ಜನ್ ಕುಮಾರ್ ಅವರು ಬೆಂಬಲಿಗರಿಗೆ ಕರೆ ನೀಡಿದ್ದರು ಮತ್ತು ಆ ನರಮೇಧದಲ್ಲಿ ಅಧಿಕೃತವಾಗಿ 2,800 ಜನರು ಹತರಾಗಿದ್ದರು.

ಸತ್ಯಕ್ಕೆ ಎಂದಿಗೂ ಗೆಲುವು
ಇದಕ್ಕೂ ಮೊದಲು ತೀರ್ಪು ಬಂದ ನಂತರ, ಸತ್ಯದ ಮಾರ್ಗದಲ್ಲಿ ನಡೆಯುವಾಗ ಕಠಿಣ ಪರಿಸ್ಥಿತಿಗಳು ಬರುವುದು ಸಹಜ. ಆದರೆ, ನಾವು ಸಾಗುತ್ತಿರುವ ದಾರಿಯಿಂದ ಹಿಂದೆ ಸರಿಯಬಾರದು. ಏಕೆಂದರೆ, ಗೆಲುವು ಯಾವತ್ತಿದ್ದರೂ ಸತ್ಯದ್ದೇ ಆಗಿರುತ್ತದೆ. ಸಜ್ಜನ್ ಕುಮಾರ್ ಅವರು ಬಡವರ ದನಿಯಾಗಿದ್ದಾರೆ. ಸಜ್ಜನ್ ಕುಮಾರ್ ನಿಮ್ಮ ಸಂಗಾತಿಯಾಗಿದ್ದಾರೆ. ನಾನು ಸೋಲನ್ನು ಒಪ್ಪಿಕೊಳ್ಳುವುದಿಲ್ಲ, ಎಂದಿದ್ದರೂ ಸತ್ಯದ್ದೇ ಗೆಲುವಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದರು.

ಇಂದಿರಾ ಹತ್ಯೆ ನಂತರದ ನರಮೇಧ
1984ರ ಅಕ್ಟೋಬರ್ 31ರಂದು ಬೆಳಿಗ್ಗೆ 9.30ರ ಸುಮಾರಿಗೆ ಇಂದಿರಾ ಗಾಂಧಿ ಅವರ ಹತ್ಯೆಯಾದ ಮರುದಿನ, ನವೆಂಬರ್ 1ರಂದು ಸಜ್ಜನ್ ಕುಮಾರ್ ಅವರು ಬಹಿರಂಗವಾಗಿ 'ನಮ್ಮ ತಾಯಿ ಹತ್ಯೆಯಾಗಿದ್ದಾರೆ, ಎಲ್ಲ ಸರ್ದಾರರನ್ನು ಕೊಲ್ಲಿರಿ' ಎಂದು ಕರೆ ನೀಡಿದ್ದರು. ಇದಕ್ಕೆ ಹಲವಾರು ಮಹಿಳೆಯರು ಸಾಕ್ಷಿಯಾಗಿದ್ದ ಕಾರಣ 34 ವರ್ಷಗಳ ನಂತರ ಅವರಿಗೆ ಶಿಕ್ಷೆಯಾಗಿದೆ. ಅವರು ಕರೆ ನೀಡಿದ ನಂತರ, ದೆಹಲಿಯಲ್ಲಿಯೇ ಕಂಡಕಂಡಲ್ಲಿ ಸಿಖ್ ರನ್ನು ಹುಡುಕಿ ಅಮಾನವೀಯವಾಗಿ ಹತ್ಯೆ ಮಾಡಲಾಗಿತ್ತು. ದೆಹಲಿಯೊಂದರಲ್ಲಿಯೇ ಎರಡು ಸಾವಿರಕ್ಕೂ ಹೆಚ್ಚು ಸಿಖ್ ರು ಹತ್ಯೆಗೀಡಾಗಿದ್ದರು.

ಶರಣಾಗಲು ಡಿಸೆಂಬರ್ 31ರವರೆಗೆ ಕಾಲಾವಕಾಶ
ಸಜ್ಜನ್ ಕುಮಾರ್ ಅವರು ನ್ಯಾಯಾಲಯಕ್ಕೆ ಶರಣಾಗಲು ಡಿಸೆಂಬರ್ 31ರವರೆಗೆ ದೆಹಲಿ ಹೈಕೋರ್ಟ್ ಕಾಲಾವಕಾಶ ನೀಡಿದೆ. ಇದೀ ತೀರ್ಪಿನಲ್ಲಿ ಇನ್ನಿಬ್ಬರು ಆರೋಪಿಗಳಾದ ಮಾಜಿ ಶಾಸಕ ಮಹೇಂದರ್ ಯಾದವ್ ಮತ್ತು ಕಿಶನ್ ಖೋಖರ್ ಅವರ ಶಿಕ್ಷೆಯನ್ನು 3 ವರ್ಷಗಳಿಂದ 10 ವರ್ಷಕ್ಕೆ ಹೆಚ್ಚಿಸಿದೆ.
ಸಜ್ಜನ್ ಕುಮಾರ್ ಅವರ ಹೊರತಾಗಿ ನಿವೃತ್ತ ವಾಯುಸೇನಾ ಅಧಿಕಾರಿ ಕ್ಯಾಪ್ಟನ್ ಭಾಗಮಲ್, ಗಿರಿಧಾರಿ ಲಾಲ್ ಮತ್ತು ಕಾಂಗ್ರೆಸ್ ನ ಮಾಜಿ ಕಾರ್ಪೊರೇಟರ್ ಬಲ್ವಾನ್ ಖೋಖರ್ ಅವರಿಗೆ ಕೂಡ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಸಾಕ್ಷಿ
ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳಾದ ಚಾಮ್ ಕೌರ್, ನಿರ್ಪ್ರೀತ್ ಕೌರ್ ಮತ್ತು ಜಗ್ದೀಶ್ ಕೌರ್ ಮುಂತಾದವರು ಸಜ್ಜನ್ ಕುಮಾರ್ ಷಡ್ಯಂತ್ರದ ಬಗ್ಗೆ ಸಾಕ್ಷಿ ನೀಡಿದ್ದರಿಂದ ಸಜ್ಜನ್ ಕುಮಾರ್ ಗೆ ತಪ್ಪಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಚಾಮ್ ಕೌರ್ ಅವರು ತನ್ನ ಮಗ ಮತ್ತು ತಂದೆಯನ್ನು ಹತ್ಯಾಕಾಂಡದಲ್ಲಿ ಕಳೆದುಕೊಂಡಿದ್ದರೆ, ನಿರ್ಪ್ರೀತ್ ಕೌರ್ ಅವರು ತನ್ನ ತಂದೆಯ ಸಾವನ್ನು ಕಣ್ಣಾರೆ ಕಂಡಿದ್ದಾರೆ. ಹಾಗೆಯೆ, ಜಗ್ದೀಶ್ ಕೌರ್ ಅವರು ಕೂಡ ತಮ್ಮ ಮಗ ಮತ್ತು ಗಂಡನನ್ನು ಕಳೆದುಕೊಂಡಿದ್ದರು. ಸಜ್ಜನ್ ಕುಮಾರ್ ವಿರುದ್ಧ ದೂರು ನೀಡಿದ್ದರಿಂದ ನಿರ್ಪ್ರೀತ್ ಕೌರ್ ಮುಂತಾದವರು ಸಾಕಷ್ಟು ಸಂಕಷ್ಟಗಳನ್ನು ಕೂಡ ಅನುಭವಿಸಿದ್ದಾರೆ. ಅವರನ್ನು ಟಾಡಾ ಕಾಯ್ದೆಯಡಿ ಸುಳ್ಳು ಸಾಕ್ಷ್ಯ ಸೃಷ್ಟಿಸಿ ಬಂಧಿಸಲಾಗಿತ್ತು. ಆದರೆ, ಕಡೆಗೂ ಸತ್ಯಕ್ಕೆ ಜಯ ಸಂದಿದೆ ಎಂದು ನ್ಯಾಯಾಲಯವೇ ಹೇಳಿದೆ.












Click it and Unblock the Notifications