ಸಿಖ್ ಹತ್ಯಾಕಾಂಡ : ಒಬ್ಬರಿಗೆ ಗಲ್ಲು, ಮತ್ತೊಬ್ಬರಿಗೆ ಜೀವಾವಧಿ ಶಿಕ್ಷೆ
ನವದೆಹಲಿ, ನವೆಂಬರ್ 20: ಮಾಜಿ ಪ್ರಧಾನಿ ಇಂದಿರಾಗಾಂಧಿ ಹತ್ಯೆ ಬಳಿಕ 1984ರಲ್ಲಿ ದೇಶದ ವಿವಿಧೆಡೆ ನಡೆದ ಸಿಖ್ ನರಮೇಧ, ಹಿಂಸಾಚಾರ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮಂಗಳವಾರ(ನವೆಂಬರ್ 20)ದಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರಿಗೆ ಗಲ್ಲು ಶಿಕ್ಷೆ ಹಾಗೂ ಮತ್ತೊಬ್ಬರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
1984ರಲ್ಲಿ ದೆಹಲಿಯ ಮಹಿಪಾಲ್ಪುರ್ ಪ್ರದೇಶದಲ್ಲಿ ಇಬ್ಬರು ಸಿಖ್ಖರನ್ನು ಕೊಂದ ಆರೋಪದ ಮೇಲೆ ಯಶ್ ಪಾಲ್ ಸಿಂಗ್ ಎಂಬ ಅಪರಾಧಿಗೆ ಗಲ್ಲು ಶಿಕ್ಷೆ ಘೋಷಿಸಲಾಗಿದೆ.ಮತ್ತೊಬ್ಬ ಅಪರಾಧಿ ನರೇಶ್ ಸೆಹ್ರಾವತ್ ಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
1984ರ ಸಿಖ್ ಹತ್ಯಾಕಾಂಡ : ಸಜ್ಜನ್ ಕುಮಾರ್ ಗೆ ನಿರೀಕ್ಷಣಾ ಜಾಮೀನು
ಇಬ್ಬರ ಮೇಲೆ ಕ್ರಿಮಿನಲ್ ಸಂಚು, ಗಲಭೆ, ಅಕ್ರಮ ಶಸ್ತ್ರಾಸ್ತ್ರ, ಕೊಲೆ, ಕೊಲೆ ಯತ್ನ ಸೇರಿದಂತೆ ಐಪಿಸಿ ಸೆಕ್ಷನ್ 452,302,307,324,395,436 ಹಾಗೂ 149 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆ ನಡೆದು ಮೂರು ದಶಕಗಳ ನಂತರ 2017ರ ಏಪ್ರಿಲ್ ನಲ್ಲಿ ಯಶ್ ಪಾಲ್ ಹಾಗೂ ನರೇಶ್ ಗೆ ಹೊಸದಾಗಿ ಸಮನ್ಸ್ ನೀಡಲಾಗಿತ್ತು.
1984ರ ಅಕ್ಟೋಬರ್ 31ರಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ ನಡೆದಿದ್ದ ಸಿಖ್ ನರಮೇಧ ಪ್ರಕರಣದಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡರು ಸೇರಿದಂತೆ ಅನೇಕ ಮಂದಿ ಮೇಲೆ ಗಲಭೆ, ಹತ್ಯೆ ಪ್ರಕರಣಗಳು ದಾಖಲಾಗಿವೆ.