ಬೈದ್ಯನಾಥ ಸನ್ನಿಧಿಗೆ ನಿತ್ಯ 1500 ಭಕ್ತಾದಿಗಳ ಪ್ರವೇಶಕ್ಕೆ ಅನುಮತಿ
ನವದೆಹಲಿ, ಅಕ್ಟೋಬರ್.26: ಜಾರ್ಖಂಡ್ ಪ್ರಸಿದ್ಧ ಬೈದ್ಯನಾಥ್ ದೇವಸ್ಥಾನಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ಸೋಮವಾರದಿಂದ ಅನುಮತಿ ನೀಡಲಾಗಿದೆ. ದಿಯೋಘರ್ ನಲ್ಲಿರುವ ದೇಗುಲಕ್ಕೆ ಪ್ರತಿನಿತ್ಯ 1500 ಭಕ್ತರು ಪ್ರವೇಶಿಸುವುದಕ್ಕೆ ಮಾತ್ರ ಅವಕಾಶ ಕಲ್ಪಿಸಿ ಕೊಡಲಾಗಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ಹಿನ್ನೆಲೆ ದೇವಸ್ಥಾನಕ್ಕೆ ಸಾರ್ವಜನಿಕ ಪ್ರವೇಶವನ್ನು ಈ ಮೊದಲ ನಿರ್ಬಂಧಿಸಲಾಗಿತ್ತು. ಕೊವಿಡ್-19 ಸೋಂಕು ಹರಡದಂತೆ ಮಾರ್ಗಸೂಚಿ ಪಾಲನೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಒಂದು ದಿನಕ್ಕೆ 1500 ಭಕ್ತಾದಿಗಳಿಗೆ ಮಾತ್ರ ಈ-ಪಾಸ್ ವಿತರಿಸಲಾಗಿತ್ತಿದ್ದು, ಪಾಸ್ ಉಳ್ಳವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.
ವಿಜಯ ದಶಮಿ ಹಬ್ಬದ ವಿಶೇಷತೆಯ ಹಿನ್ನೆಲೆ ಡೆಪ್ಯುಟಿ ಕಮಿಶನರ್ ಹಾಗೂ ಜಿಲ್ಲಾಧಿಕಾರಿಯೂ ಆಗಿರುವ ಕಮಲೇಶ್ವರ ಪ್ರಸಾದ್ ಸಿಂಗ್ ಸೂಚನೆ ಮೇರೆಗೆ ಭಕ್ತಾದಿಗಳ ಸಂಖ್ಯೆಯನ್ನು 1000 ದಿಂದ 1500ಕ್ಕೆ ಹೆಚ್ಚಿಸಲಾಗಿದೆ.

ಬೈದ್ಯನಾಥ್ ಸನ್ನಿಧಿಯಲ್ಲಿ ಶಿಷ್ಟಾಚಾರ ಪಾಲನೆ:
ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲ ಶಿಷ್ಟಾಚಾರವನ್ನು ಕಡ್ಡಾಯವಾಗಿ ಪಾಲಿಸುವುದು. ಭಕ್ತಾದಿಗಳ ನಡುವೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು. ಒಂದು ಗಂಟೆಗೆ ಕೇವಲ 125 ಭಕ್ತರ ಪ್ರಾರ್ಥನೆಗೆ ಮಾತ್ರ ಅವಕಾಶ ನೀಡುವುದಕ್ಕೆ ಸೂಚನೆ ನೀಡಲಾಗಿದೆ. ಅನ್ಯರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳು ಕೊರೊನಾವೈರಸ್ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಕ್ವಾರೆಂಟೈನ್ ಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಬಾಬಾ ಬೈದ್ಯನಾಥ ದೇವಸ್ಥಾನವು ಬಿಹಾರ ಮತ್ತು ಜಾರ್ಖಂಡ್ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಲ್ಲಿರುವ ಭಕ್ತರಿಗೆ "ಬಾಬಾ ಧಾಮ ಮಂದಿರ" ಮತ್ತು "ಬೈದ್ಯನಾಥ್ ಧಾಮ ಮಂದಿರ" ಎಂದೇ ಚಿರ ಪರಿಚಿತವಾಗಿದೆ. 12 ಜ್ಯೋತಿರ್ಲಿಂಗಗಳ ಪೈಕಿ ಬೈದ್ಯನಾಥ್ ಕೂಡಾ ಒಂದಾಗಿದ್ದು, ಶ್ರಾವಣ ಮಾಸದಲ್ಲಿ ನಡೆಯುವ ವಿಶೇಷ ಪೂಜೆಗೆ ಅತಿಹೆಚ್ಚಿನ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಈ ಬಾರಿ ಕೊರೊನಾವೈರಸ್ ಸೋಂಕಿನ ಹರಡುವಿಕೆ ಮತ್ತು ಲಾಕ್ ಡೌನ್ ಪರಿಸ್ಥಿತಿಯಿಂದಾಗಿ ದೇವಸ್ಥಾನವನ್ನು ಬಂದ್ ಮಾಡಲಾಗಿತ್ತು.












Click it and Unblock the Notifications