ನಂಜನಗೂಡಿನಲ್ಲಿ ಕಾಡಾನೆ ತುಳಿತದಿಂದ ಆದಿವಾಸಿ ಯುವಕ ಸಾವು
ಮೈಸೂರು, ಅಕ್ಟೋಬರ್ 21; ಕಾಡಾನೆಯೊಂದು ನಡೆಸಿದ ದಾಳಿಯಿಂದಾಗಿ ಆದಿವಾಸಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು ನಂಜನಗೂಡು ಜಿಲ್ಲೆಯಲ್ಲಿನ ವೆಂಕಟಗಿರಿ ಆದಿವಾಸಿ ಕಾಲೋನಿಯ ಕೆಂಪ ಮತ್ತು ಚಿಕ್ಕಮ್ಮ ಎಂಬುವರ ಪುತ್ರ ಗಣೇಶ (25) ಎಂದು ಗುರುತಿಸಲಾಗಿದೆ.
ನಂಜನಗೂಡು ಸಮೀಪದ ಡೋರನಕಟ್ಟೆ ಕಾಲೋನಿಯ ಸಮೀಪ ಈ ಘಟನೆ ನಡೆದಿದೆ. ಈತ ನಿನ್ನೆ ಬಂಕಹಳ್ಳಿ ಗ್ರಾಮದಿಂದ ಕೆಲಸವನ್ನು ಮುಗಿಸಿಕೊಂಡು ತನ್ನ ಮನೆಗೆ ಹಿಂದಿರುಗುತ್ತಿದ್ದ. ಈ ಸಂದರ್ಭದಲ್ಲಿ ವೆಂಕಟಗಿರಿ ಕಾಲೋನಿ ಮತ್ತು ಡೋರನಕಟ್ಟೆ ಕಾಲೋನಿಯ ಮಧ್ಯೆ ಕಾಡಾನೆಯ ತುಳಿತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಏಕಾಏಕಿ ಕಾಡಾನೆಯು ಎದುರಾಗಿದ್ದು, ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ದಾಳಿಗೆ ಸಿಲುಕಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಹೆಡಿಯಾಲ ಅರಣ್ಯ ಇಲಾಖೆಯ ಎಸಿಎಫ್ ರವಿಕುಮಾರ್, ಆರ್.ಎಫ್.ಒ ಮಂಜುನಾಥ್ ಅವರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿದ ನಂತರ ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಅರಣ್ಯ ಅಧಿಕಾರಿಗಳು ಮೃತನ ಕುಟುಂಬದವರಿಗೆ ಭರವಸೆ ನೀಡಿದ್ದಾರೆ.












Click it and Unblock the Notifications