ನನ್ನ ರಾಮದಾಸ್ ನಡುವೆ ಕ್ರೆಡಿಟ್ ವಾರ್ ಇಲ್ಲ: ಪ್ರತಾಪ ಸಿಂಹ
ಮೈಸೂರು, ಜೂ13: ''ಮೋದಿ ಅವರು ಯೋಗ ಮಾಡುವ ವೇದಿಕೆ. ರಾಜಕೀಯ ವೇದಿಕೆಯಲ್ಲ. ನನ್ನನ್ನು ಸೇರಿದಂತೆ ಸ್ಥಳೀಯ ಯಾವ ಶಾಸಕರಿಗೂ ಮೋದಿ ಅವರ ವೇದಿಕೆಯಲ್ಲಿ ಸ್ಥಾನ ಇರುವುದಿಲ್ಲ,'' ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಜೂ. 21ಕ್ಕೆ ಮೈಸೂರಿಗೆ ಆಗಮನ ಹಿನ್ನೆಲೆಯಲ್ಲಿ ಪ್ರಧಾನಿ ಜೊತೆ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಆಯುಷ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶ ಇರುತ್ತದೆ. ನಾವೆಲ್ಲಾ ರಾಜಕಾರಣಿಗಳು ವೇದಿಕೆಯ ಕೆಲಭಾಗದ ಒಂದು ಬದಿಯಲ್ಲಿರುತ್ತೇವೆ. ಇದರಲ್ಲಿ ಯಾವ ಬದಲಾವಣೆಗಳು ಇಲ್ಲ ಎಂದರು. ನನ್ನ ಮತ್ತು ರಾಮದಾಸ್ ನಡುವೆ ಈ ವಿಚಾರದಲ್ಲಿ ಕ್ರೆಡಿಟ್ ವಾರ್ ನಡೆಯುತ್ತಿಲ್ಲ. ಮೋದಿ ಅವರ ವೇದಿಕೆ ಮುಂಭಾಗ 7 ಸಾವಿರ ಜನರಿಗೆ ಅವಕಾಶ ಇರುತ್ತದೆ.
ಒಟ್ಟಾರೆ ಅರಮನೆಯ ಎಲ್ಲಾ ಭಾಗವೂ ಸೇರಿ 15 ಸಾವಿರ ಜನರಿಗೆ ಅವಕಾಶವಾಗಬಹುದು. ಆದರೆ ಎಲ್ಲರಿಗೂ ಮೋದಿ ಅವರು ಕಾಣುವುದಿಲ್ಲ.ಈಗಾಗಲೇ ನೋಂದಣಿ ಆರಂಭವಾಗಿದೆ. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಯೋಗ ಮಾಡಲು ಅವಕಾಶ ಎಂದರು.
ಸ್ವಾಗತದ ಬ್ಯಾನರ್ ಬೇಡ
ಮೋದಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್ಗಳನ್ನು ಯಾರು ಹಾಕಬೇಡಿ. ಸರ್ಕಾರವೇ ಮೋದಿ ಅವರ ಸ್ವಾಗತದ ಬ್ಯಾನರ್ಗಳನ್ನು ಹಾಕುತ್ತೇವೆ. ನಮ್ಮ ಪಕ್ಷದವರೇ ಇರಲಿ, ಸಂಘ ಸಂಸ್ಥೆಗಳು ಯಾವುದೇ ಫ್ಲೆಕ್ಸ್ಗಳನ್ನು ಹಾಕಿ ನಗರದ ಸೌಂದರ್ಯ ಹಾಳುಮಾಡಬೇಡಿ ಎಂದು ಹೇಳಿದರು.
ಬಹಿರಂಗ ಚರ್ಚೆಗೆ ಕಾಂಗ್ರೆಸ್ ಆಹ್ವಾನ
ದಕ್ಷಿಣ ಪದವೀಧರ ಚುನಾವಣೆ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ರಾಮಕೃಷ್ಣನಗರದ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಮತ ಚಲಾವಣೆ ಮಾಡಿದರು. ಮೈಸೂರು ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಆಹ್ವಾನ ವಿಚಾರದ ಬಗ್ಗೆ ಮಾತನಾಡಿದ ಅವರು, ನಾಳೆ ಇದರ ಬಗ್ಗೆ ಸವಿಸ್ತಾರವಾಗಿ ಮಾಧ್ಯಮಗಳ ಜೊತೆ ಮಾತನಾಡುತ್ತೇನೆ.
ಇಂದು ಚುನಾವಣೆ ನಡೆಯುತ್ತಾ ಇದೆ. ಹೀಗಾಗಿ ಈ ವಿಚಾರದಲ್ಲಿ ಮಾತನಾಡುವುದಿಲ್ಲ. ಆದರೆ ಒಂದು ಮಾತು ಸತ್ಯ. ಯಾರೇ ಚರ್ಚೆಗೆ ಬರಲಿ ಅವರನ್ನು ಸೋಲಿಸುವುದು ಈ ಪ್ರತಾಪ್ ಸಿಂಹ ಮಾತ್ರ.
ಯಾರು ಚರ್ಚೆಗೆ ಬರಬೇಕು, ಏನು ಚರ್ಚೆಯಾಗಬೇಕೆ ಎಂಬುದನ್ನ ನಾಳೆ ಮಾಧ್ಯಮಗಳ ಮುಂದೆ ಹೇಳುತ್ತೇನೆ ಎಂದರು.
13 ಸಾವಿರ ನೋಂದಣಿ ಆಗಿದೆ
ಯೋಗ ತಾಲೀಮಿನ ಬಳಿಕ ಮಾತನಾಡಿದ ಪ್ರತಾಪ್ ಸಿಂಹ, ಯೋಗದಲ್ಲಿ 7 ರಿಂದ 8 ಸಾವಿರ ಜನರು ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ರಾಮದಾಸ್ ಅವರು, ಈಗಾಗಲೇ 13 ಸಾವಿರ ನೋಂದಣಿ ಆಗಿದೆ ಎಂದು ಹೇಳಿದರು. ಇದರಿಂದ ಸಿಡಿಮಿಡಿಗೊಂಡ ಪ್ರತಾಪ್ ಸಿಂಹ, ನಾನು ಮಾತನಾಡುತ್ತಿದ್ದೇನೆ, ರಾಮದಾಸ್ ಜೀ ಸಮಾಧಾನವಾಗಿರಬೇಕು ಎಂದು ರಾಮದಾಸ್ ಮಧ್ಯ ಪ್ರವೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜಟಾಪಟಿಗೆ ತೆರೆ ಎಳೆಯುವ ಪ್ರಯತ್ನ
ಇದಾದ ಬಳಿಕ ಪತ್ರಕರ್ತರ ಜೊತೆ ರಾಮದಾಸ್ ಮಾತನಾಡಿ, ಪ್ರತಾಪ್ ಸಿಂಹ ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಸ್ಪಷ್ಟನೆ ನೀಡಲು ಯತ್ನಿಸಿದೆ ಅಷ್ಟೇ. ನಮ್ಮ ನಡುವೆ ಯಾವುದೇ ಮನಃಸ್ತಾಪ ಇಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಜಟಾಪಟಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಇದರಿಂದ ಯೋಗದಿನದ ಆಯೋಜನೆ, ಅದರ ಕ್ರೆಡಿಟ್ ತೆಗೆದುಕೊಳ್ಳಲು ಬಿಜೆಪಿಯ ನಾಯಕರ ನಡುವೆಯೇ ಪೈಪೋಟಿ ನಡೆದಿದೆ ಎನ್ನುವುದು ಬಹಿರಂಗವಾಗಿದೆ. ಇಡೀ ಕಾರ್ಯಕ್ರಮ ನನ್ನ ಉಸ್ತುವಾರಿಯಲ್ಲಿಯೇ ಆಗಬೇಕು. ಮೋದಿ ಅವರು ಬರುವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದು, ಅದರ ಪೂರ್ಣ ಶ್ರೇಯ ನನಗೆ ಸೇರಬೇಕು ಎನ್ನುವ ತುಡಿತದಲ್ಲಿ ಪ್ರತಾಪ್ ಸಿಂಹ ಇದ್ದಾರೆ ಎಂಬುದು ಕೆಲವರ ಅಭಿಪ್ರಾಯ.
Recommended Video