'ಪಾರಂಪರಿಕ ಕಟ್ಟಡ ಕೆಡವಿದರೆ ಮೈಸೂರು ಸಾಂಸ್ಕೃತಿಕ ನಗರಿಯಾಗಿರಲ್ಲ'
ಮೈಸೂರು, ಫೆಬ್ರವರಿ 12: ಪಾರಂಪರಿಕ ಕಟ್ಟಡಗಳನ್ನು ಉಳಿಸಬೇಕಾಗಿರುವುದು ನಾಗರೀಕರ ಕರ್ತವ್ಯ. ಇದು ನಮ್ಮ ಉಳಿವು ಅಳಿವಿನ ಅಸ್ಮಿತೆಯ ಪ್ರಶ್ನೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.
ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದ ಪಾಲಿಕೆಯ ನಿಯೋಗವು ಯದುವೀರ್ ಅವರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚಿಸಿತು. ಈ ವೇಳೆ ಮಾತನಾಡಿರುವ ಯದುವೀರ್, ಕಟ್ಟಡ ಕೆಡವಿ ಹೊಸತಾಗಿ ನಿರ್ಮಿಸಬೇಕು ಎಂದೇನಿಲ್ಲ. ಈ ಕುರಿತು ಹೆಚ್ಚಿನ ಚಿಂತನೆ ನಡೆಸಬೇಕು.ಪಾರಂಪರಿಕ ಕಟ್ಟಡಗಳಾದ ಲ್ಯಾನ್ಸ್ ಡೌನ್, ದೇವರಾಜ ಮಾರುಕಟ್ಟೆ ಕೆಡವಿ ಹೊಸತಾಗಿ ಕಟ್ಟುವುದಕ್ಕಿಂತ, ಪುನರುಜ್ಜೀವನಗೊಳಿಸುವುದು ಒಳಿತು ಎಂದರು.
ಪಾರಂಪರಿಕ ಕಟ್ಟಡಗಳ ನೆಲಸಮ ವಿಚಾರ:ಅಸಮಾಧಾನ ವ್ಯಕ್ತಪಡಿಸಿದ ಯದುವೀರ್
ಪಾರಂಪರಿಕ ಕಟ್ಟಡಗಳೆಂದರೆ ಅವು ಕೇವಲ ಇಟ್ಟಿಗೆ, ಸಿಮೆಂಟ್ ಮಾತ್ರವಲ್ಲ. ಮೈಸೂರಿಗರಿಗೆ ಅದು ಅಸ್ಮಿತೆಯ ಸಂಗತಿ. ಆದ್ದರಿಂದ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ. ಶಿಥಿಲಗೊಂಡಿದೆ ಎಂಬ ನೆಪ್ಪವೊಡ್ಡಿ ನಗರದ ಎಲ್ಲಾ ಪಾರಂಪರಿಕ ಕಟ್ಟಡಗಳನ್ನ ಈ ರೀತಿ ಕೆಡವುತ್ತಾ ಹೋದರೆ ಮೈಸೂರನ್ನು ಸಾಂಸ್ಕೃತಿಕ ನಗರಿ ಎನ್ನಲು ಏನೂ ಉಳಿಯುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ತಜ್ಞರ ವರದಿಗಳ ಪ್ರಕಾರ ಈ ಎರಡು ಪಾರಂಪರಿಕ ಕಟ್ಟಡಗಳನ್ನ ಪುನರುಜ್ಜೀವನಗೊಳಿಸಲು ಅವಕಾಶವಿದೆ. ಇದಕ್ಕಾಗಿ ಹಲವಾರು ರೀತಿಯ ತಂತ್ರಜ್ಞಾನಗಳು ಚಾಲ್ತಿಯಲ್ಲಿವೆ ಎಂದು ಯದುವೀರ್ ತಿಳಿಸಿದ್ದಾರೆ.
ಹಲವಾರು ನಗರಗಳಲ್ಲಿ ಉಳಿಸಿಕೊಳ್ಳಲಾಗಿದೆ
ಜೈಪುರ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಕುಸಿಯುವ ಹಂತದಲ್ಲಿದ ಕಟ್ಟಡಗಳನ್ನ ಉಳಿಸಿಕೊಳ್ಳಲಾಗಿದೆ ಎಂದ ಯದುವೀರ್ ಒಡೆಯರ್ ಅದೇ ರೀತಿ ಮೈಸೂರಿನ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಹಾಗೂ ದೇವರಾಜ ಮಾರುಕಟ್ಟೆಗಳನ್ನು ಉಳಿಸಿಕೊಳ್ಳಬೇಕು ಎಂದರು.
ಯಾಕಿಷ್ಟು ಆಸಕ್ತಿ ತೋರುತ್ತಿದೆ?
ಅರಮನೆ ವತಿಯಿಂದ ಪಾರಂಪರಿಕ ಕಟ್ಟಡ ಸಂರಕ್ಷಣೆ ಸಂಬಂಧ ತಜ್ಞರ ವರದಿ ತರಿಸಿಕೊಳ್ಳಲಾಗಿದೆ. ಎರಡರಲ್ಲೂ ಕಟ್ಟಡಗಳನ್ನು ಯತಾಸ್ಥಿತಿಯಲ್ಲಿ ಉಳಿಸಿಕೊಂಡು ಬಳಕೆಗೆ ಅವಕಾಶ ನೀಡಬಹುದು ಎಂದೇ ಉಲ್ಲೇಖಿಲಾಗಿದೆ. ಆದರೆ ಮಹಾನಗರ ಪಾಲಿಕೆ ಕೆಡವುದರಲ್ಲಿ ಯಾಕಿಷ್ಟು ಆಸಕ್ತಿ ತೋರುತ್ತಿದೆ ಎಂಬುದಕ್ಕೆ ನನ್ನ ಬಳಿ ಉತ್ತರವಿಲ್ಲ ಎಂದರು ಯದುವೀರ್.
ಮೈಸೂರಿನ ಪಾರಂಪರಿಕ ಕಟ್ಟಡಗಳ ನೆಲಸಮಕ್ಕೆ ವಿರೋಧ
ಸರ್ಕಾರದ ಸಹಕಾರ ಅಗತ್ಯ
ಸರ್ಕಾರ ಬಯಸಿದರೆ ಈ ವಿಚಾರವಾಗಿ ನಾನು ಚರ್ಚಿಸಲು ಸಿದ್ಧನಿದ್ದೇನೆ ಎಂದ ಯದುವೀರ್, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ನಿಟ್ಟಿನಲ್ಲಿ ನಾವು ಸರ್ಕಾರದ ಜೊತೆಯಲ್ಲೇ ಮುಂದುವರೆಯಬೇಕು. ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಬೇಕೆಂಬ ಭಾವನೆ ಜನರಲ್ಲಿದೆ. ಇದಕ್ಕೆ ಸರ್ಕಾರದ ಸಹಕಾರ ಅಗತ್ಯವಾಗಿಬೇಕು.
ಪಾರಂಪರಿಕ ಕಟ್ಟಡಗಳ ಬಗ್ಗೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?
ಸರ್ಕಾರದೊಟ್ಟಿಗೆ ಮಾತನಾಡುತ್ತೇನೆ
ಅರಮನೆ ವತಿಯಿಂದ ತರಿಸಿಕೊಳ್ಳಲಾಗಿರುವ ತಜ್ಞರ ವರದಿಯಲ್ಲೂ, ಕಟ್ಟಡಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು, ಬಳಕೆಗೆ ಅದನ್ನು ರಿಪೇರಿ ಕಾರ್ಯ ಮಾಡಿ ಮುಂದುವರೆಸಬೇಕೆಂದು ಒತ್ತಾಯಿಸುವ ಕುರಿತಾಗಿಯೂ ಸರ್ಕಾರದೊಟ್ಟಿಗೆ ಮಾತನಾಡುತ್ತೇನೆ ಎಂದು ಯದುವೀರ್ ಮೇಯರ್ ಗೆ ತಿಳಿಸಿದರು.