ಮಾಧ್ವರಿಗೆ ಮಾದಿಗ ದೀಕ್ಷೆ ನೀಡುವಂತೆ ಪೇಜಾವರ ಶ್ರೀಗೆ ಸವಾಲು
ಮೈಸೂರು, ಸೆಪ್ಟೆಂಬರ್ 25 : ಮಾದಿಗರಿಗೆ ಮಾಧ್ವ ದೀಕ್ಷೆಯ ಅಗತ್ಯವಿಲ್ಲ. ಆದರೆ ಮಾಧ್ವರಿಗೆ ಮಾದಿಗ ದೀಕ್ಷೆಯ ಅಗತ್ಯವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಸಾಹಿತಿ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.
ಪೂನಾ ಒಪ್ಪಂದ 85ನೇ ವರ್ಷದ ಹಿನ್ನೆಲೆಯಲ್ಲಿ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಕೋಲೆಯಿಂದ ಸ್ವಾತಂತ್ಯದೆಡೆಗೆ...'ರಾಜ್ಯಮಟ್ಟದ ಸಮ್ಮೇಳನದ ಪೂರ್ವಭಾವಿ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಾಹ್ಮಣರದಲ್ಲಿ ಇಂದಿಗೂ ಮೇಲು - ಕೀಳೆಂಬ ಸಂಪ್ರದಾಯ ಅಸ್ತಿತ್ವದಲ್ಲಿದೆ. ಪೇಜಾವರ ಶ್ರೀಗಳು ಮಾದಿಗರಿಗೆ ದೀಕ್ಷೆ ನೀಡುವ ಸಂದರ್ಭದಲ್ಲಿ ಅಂಬೇಡ್ಕರ್ ಕೇಂದ್ರ ಮತ್ತು ಬಾಬು ಜಗಜೀವನರಾಂ ಕೇಂದ್ರಗಳು ಒಟ್ಟಿಗೆ ಸೇರಿ ಅದನ್ನು ನಿಲ್ಲಿಸಿದ್ದು ಶ್ಲಾಘನೀಯ ಎಂದು ಹೇಳಿದರು.
ದಲಿತರಿಂದ ಬ್ರಾಹ್ಮಣರನ್ನಾಗಿ ಪರಿವರ್ತಿಸುವುದರೊಂದಿಗೆ, ಬ್ರಾಹ್ಮಣರು ಕೂಡ ದಲಿತರಾಗಬೇಕಿದೆ. ಮಾಧ್ವರದು ಅಸಮಾನತೆ, ಅಸ್ಪೃಶ್ಯತೆಯ ಚಿಂತನೆಗಳಾಗಿದ್ದರೆ, ಅಸ್ಪೃಶ್ಯರದು ಸಮಾನತೆಯ ಕಡೆಗಿನ ಒಲವು ಆಗಿರುತ್ತದೆ ಎಂದು ಹೇಳಿದರು.

ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ದಲಿತ ನಾಯಕರು ಎದುರಿಸುತ್ತಿರುವ ಸಂಕಷ್ಟಗಳು ಏನೆಂಬುದರ ಬಗ್ಗೆ ಸಂಶೋಧನೆಗಳಾಗಬೇಕು. ದಲಿತ ನಾಯಕರ ಆಯ್ಕೆ ದಲಿತರಿಂದ ಆಗುತ್ತಿದೆಯೋ, ದಲಿತೇತರರಿಂದ ಆಗುತ್ತಿದೆಯೋ ಎಂಬುದು ಪ್ರಶ್ನೆಯಾಗಿದ್ದು, ಈ ನಿಟ್ಟಿನಲ್ಲಿ ಸಮಾಜಶಾಸ್ತ್ರೀಯ ಮತ್ತು ಮಾನವ ಶಾಸ್ತ್ರೀಯ ಅಧ್ಯಯನದ ಅಗತ್ಯವಿದೆ ಎಂದರು.
ಸಂಸತ್ತಿನಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಅಂಬೇಡ್ಕರ್ ಅವರು, ಸಂವಿಧಾನ ಬಹಳ ಶ್ರೇಷ್ಠ ಮತ್ತು ತುಂಬಾ ಯೋಗ್ಯವಾಗುವುದು. ಅದನ್ನು ಜಾರಿ ಮಾಡುವವರು ಯೋಗ್ಯರಾದರೆ ಮಾತ್ರ ಸರಿ. ಅಯೋಗ್ಯರ ಕೈಯಲ್ಲಿ ಸಿಕ್ಕರೆ ಆ ಸಂವಿಧಾನ ಯೋಗ್ಯವಾಗುವುದಿಲ್ಲ ಎಂದಿದ್ದರು.
ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ನಿಜವಾಗಿ ಜಾರಿಯಾಗಿದ್ದರೆ ನಮ್ಮ ಸಾಮಾಜಿಕ ಪರಿಸ್ಥಿತಿ ಬದಲಾಗಬೇಕಿತ್ತು. ಆದರೆ ಇಂದು ಧಾರ್ಮಿಕ ಅಸಮಾನತೆ, ಅಸ್ಪೃಶ್ಯತೆಯೇ ಪ್ರಧಾನವಾಗಿವೆ ಎಂದು ವಿಷಾದಿಸಿದರು.












Click it and Unblock the Notifications