ನಗರ ಪಾಲಿಕೆ ಅಧಿಕಾರಿಗಳ ಸೋಗಲ್ಲಿ ನಯವಾಗಿ ವಂಚಿಸಿದ್ದು 10 ಲಕ್ಷ
ಮೈಸೂರು, ಜೂನ್ 23 : ನಗರದಲ್ಲಿ ಮನೆಗಳವು, ಸರಗಳವು ಸೇರಿ ವಿವಿಧ ಬಗೆಯಲ್ಲಿ ವಂಚಿಸುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಜನನಿಬಿಡ ಪ್ರದೇಶದಲ್ಲಿ ಶುಕ್ರವಾರ ಹಾಡಹಗಲೇ ಭಾರೀ ವಂಚನೆ ನಡೆದಿದೆ!
"ನಾವು ನಗರಪಾಲಿಕೆ ಅಧಿಕಾರಿಗಳು. ಈ ಬಡಾವಣೆಯಲ್ಲಿ ಮನೆಗಳನ್ನು ಅಳತೆ ಮಾಡಲಾಗುತ್ತಿದೆ. ನಿಮ್ಮ ಮನೆಯನ್ನೂ ಅಳತೆ ಮಾಡಬೇಕಿದೆ" ಎಂದು ಹೇಳಿಕೊಂಡು ಬಂದ ಇಬ್ಬರು ಅಪರಿಚಿತರು, ವೃದ್ಧೆಯೊಬ್ಬರನ್ನು ವಂಚಿಸಿ 10 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 8 ಸಾವಿರ ರುಪಾಯಿ ನಗದು ದೋಚಿ ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.
ಕುವೆಂಪು ನಗರ ಎನ್ ಬ್ಲಾಕ್ ನಿವಾಸಿ, ನಿವೃತ್ತ ಪ್ರೊ.ಜಯದೇವಪ್ಪ ಪತ್ನಿ ಕೆ.ಜೆ.ಲೀಲಾದೇವಿ (65) ಖದೀಮರಿಂದ ವಂಚನೆಗೊಳಗಾಗಿ, ನಗ-ನಗದು ಕಳೆದುಕೊಂಡವರು. ಶುಕ್ರವಾರ ಇಬ್ಬರು ಅಪರಿಚಿತರು ಲೀಲಾದೇವಿ ಅವರ ಮನೆ ಬಳಿ ಬಂದು, ಮನೆಯಲ್ಲಿ ಯಾರಿದ್ದೀರಿ?' ಎಂದು ಕೂಗಿ ಕರೆದಿದ್ದಾರೆ. ಹೊರಬಂದ ಲೀಲಾದೇವಿ ಅವರಿಗೆ, ನಾವು ನಗರಪಾಲಿಕೆ ಅಧಿಕಾರಿಗಳು' ಎಂದು ಪರಿಚಯಿಸಿಕೊಂಡಿದ್ದಾರೆ.

ಮನೆ ಪರಿಶೀಲಿಸಬೇಕು ಎಂಬ ನೆಪ
"ನಿಮ್ಮ ಮನೆ ನಿಯಮಗಳ ಪ್ರಕಾರವೇ ನಿರ್ಮಿಸಲಾಗಿದೆಯೇ ಎಂದು ಪರಿಶೀಲಿಸಬೇಕಿದೆ" ಎಂದಿದ್ದಾರೆ. ವಂಚಕರು ನಯವಾಗಿ ಆಡಿದ ಮಾತನ್ನು ಲೀಲಾದೇವಿ ಅವರು ನಂಬಿ ಬಿಟ್ಟಿದ್ದಾರೆ. ನಂತರ ಮನೆಯೊಳಕ್ಕೆ ಬಂದು ಕೊಠಡಿಗಳು ಹಾಗೂ ಮನೆ ಸುತ್ತ ಅಳತೆ ಮಾಡುವಂತೆ ನಟಿಸಿದ್ದಾರೆ.
ಇದೇ ವೇಳೆ ಲೀಲಾದೇವಿ ಅವರನ್ನು ತಾರಸಿಗೂ ಕರೆದೊಯ್ದು, ಅಲ್ಲೆಲ್ಲಾ ಪರಿಶೀಲನೆ ನಡೆಸುವಂತೆ ನಟಿಸಿದ್ದಾರೆ. ಆಧಾರ್ ಕಾರ್ಡ್ ಕೇಳಿದ್ದಾರೆ. ಲೀಲಾದೇವಿ ಅವರು ಕೆಳಗಿಳಿದು ಕೊಠಡಿಯಲ್ಲಿದ್ದ ಬೀರು ತೆರೆದು ಆಧಾರ್ ಕಾರ್ಡ್ ಗಾಗಿ ಹುಡುಕುವಾಗ ಖದೀಮರು ಎಲ್ಲವನ್ನೂ ಗಮನಿಸಿದ್ದಾರೆ.
ಆ ನಂತರ ಮತ್ತೆ ತಾರಸಿಗೆ ತೆರಳಿ, ಅಲ್ಲಿದ್ದ ಒಂದು ಪೈಪ್ ನಲ್ಲಿ ಸೊಳ್ಳೆಗಳಿವೆ ಎಂದು ಹೇಳಿ ನೀರು ತರುವಂತೆ ತಿಳಿಸಿದ್ದಾರೆ. ಮನೆ ಕೆಲಸದಾಕೆ ನೀರು ತಂದುಕೊಟ್ಟಿದ್ದಾರೆ. ವಂಚಕರು ಹೀಗೆ ತಾರಸಿಯಲ್ಲಿಯೇ ಲೀಲಾದೇವಿ ಅವರಿಗೆ ಸಲಹೆ- ಸೂಚನೆ ನೀಡುವವರಂತೆ ನಟಿಸುತ್ತಾ ಕಾಲಹರಣ ಮಾಡಿದ್ದಾರೆ.

ಬಾಗಿಲು ತೆರೆದಿದ್ದ ಮನೆಯೊಳಗೆ ನುಗ್ಗಿದ್ದಾರೆ
ಇದೇ ವೇಳೆ ಅವರದೇ ಗುಂಪಿನ ಮತ್ತಿಬ್ಬರು ಮನೆ ಬಳಿ ಬಂದು, ಬಾಗಿಲು ತೆರದಿದ್ದರಿಂದ ಸರಾಗವಾಗಿ ಒಳ ನುಗ್ಗಿ ಕೊಠಡಿಯಲ್ಲಿನ ಬೀರು ತೆರೆದು, 16 ಗ್ರಾಂಗಳ 2 ಚಿನ್ನದ ಉಂಗುರ, 48 ಗ್ರಾಂನ 8 ಜೊತೆ ಓಲೆಗಳು, 52 ಗ್ರಾಂನ ಬಳೆಗಳು, 88 ಗ್ರಾಂನ ಚಿನ್ನದ ಹಾರ, 60 ಗಾಂನ ಪೆಂಡೆಂಟ್ ಹಾರ ಹಾಗೂ ಹಾರ ಸೇರಿದಂತೆ ಒಟ್ಟು 280 ಗ್ರಾಂ (10 ಲಕ್ಷ ರುಪಾಯಿ ಮೌಲ್ಯ) ಚಿನ್ನಾಭರಣಗಳನ್ನು ಹಾಗೂ 8 ಸಾವಿರ ರುಪಾಯಿ ದೋಚಿ ಪರಾರಿಯಾಗಿದ್ದಾರೆ.
ಇಷ್ಟೆಲ್ಲಾ ಘಟನೆ ಕೇವಲ 45 ನಿಮಿಷಗಳಲ್ಲಿ ಹಾಗೂ ನೂರಾರು ಜನ, ವಾಹನಗಳು ಸಂಚರಿಸುವ ಮುಖ್ಯರಸ್ತೆಯಲ್ಲಿನ ಮನೆಯಲ್ಲೇ ನಡೆದಿದೆ. ತಮ್ಮ ಸಹಚರರು ನಗ-ನಗದು ದೋಚಿಕೊಂಡು ಪರಾರಿಯಾಗಿದ್ದು ಖಚಿತವಾದ ನಂತರ ತಾರಸಿಯಿಂದ ಮನೆಯವರೊಂದಿಗೆ ಕೆಳಕ್ಕಿಳಿದ ವಂಚಕರು, 'ಮತ್ತೊಮ್ಮೆ ಬರುತ್ತೇವೆ' ಎಂದು ಲೀಲಾದೇವಿ ಅವರಿಗೆ ತಿಳಿಸಿ ತಕ್ಷಣ ಜಾಗ ಖಾಲಿ ಮಾಡಿದ್ದಾರೆ.
ಅಷ್ಟರವರೆಗೂ ಮನೆಯೊಳಗೆ ಕಳವು ನಡೆದ ಅರಿವೇ ಇಲ್ಲದ ಲೀಲಾದೇವಿ ಅವರು 'ನಕಲಿ ಅಧಿಕಾರಿಗಳು' ನಿರ್ಗಮಿಸಿದ ಬಳಿಕ ಕೊಠಡಿಯೊಳಕ್ಕೆ ತೆರಳಿದಾಗಲೇ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಮೋಸ ಹೋಗಿದ್ದು ಅರಿವಾದ ಬಳಿಕ ಲೀಲಾದೇವಿ ಅವರು ಪಕ್ಕದ ಮನೆಯವರ ನೆರವಿನೊಂದಿಗೆ ಕುವೆಂಪುನಗರ ಪೊಲೀಸ್ ಠಾಣೆಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ.












Click it and Unblock the Notifications