ಪ್ರವಾಸಿಗರಿಗೆ ಮೈಸೂರೆಂದರೆ ಅದೇಕೆ ಅಷ್ಟು ಇಷ್ಟವಾಗುತ್ತೆ?
ಮೈಸೂರೇ ಹಾಗೆ.. ಅದು ತನ್ನದೇ ಆದ ಕೆಲವು ವಿಶೇಷತೆಗಳೊಂದಿಗೆ ದೇಶ-ವಿದೇಶಿಗರ ಮನಸೆಳೆಯುತ್ತದೆ. ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಪಾರಂಪರಿಕ ನಗರಿ, ನಿವೃತ್ತರ ಸ್ವರ್ಗ ಎಂದೆಲ್ಲ ಕರೆಯಿಸಿಕೊಳ್ಳುವ ಈ ಸುಂದರ ನಗರಿ ದಸರಾ ಸಂದರ್ಭ ಮದುವಣಗಿತ್ತಿಯಂತೆ ಕಂಗೊಳಿಸುತ್ತದೆ.. ಎಲ್ಲೆಡೆ ದಸರಾ ಕಳೆ ಕಂಡು ಬರುತ್ತದೆ. ಆದರೆ ದಸರಾ ಮುಗಿದ ತಕ್ಷಣ ಸಂಭ್ರಮ ಮುಗಿಯುವುದಿಲ್ಲ ಅದು ಹಾಗೆಯೇ ಉಳಿದು ಬಿಡುತ್ತದೆ.
ಹಾಗೆನೋಡಿದರೆ ಮೈಸೂರು ಸಂಸ್ಥಾನವನ್ನಾಳಿದ ಅರಸರು ಇಲ್ಲಿಗೆ ನೀಡಿರುವ ಕೊಡುಗೆ ಅಪಾರ. 1399ರಿಂದ 1950ರವರೆಗೆ ಸುಮಾರು 550 ವರ್ಷಗಳ ಕಾಲ 25 ಮಂದಿ ಮಹಾರಾಜರು ಈ ಸಂಸ್ಥಾನವನ್ನು ಆಳಿದ್ದಾರೆ. ಇವರಲ್ಲಿ ಅನೇಕ ರಾಜರು ಮೇಧಾವಿಗಳೂ, ಶೂರರೂ, ಸ್ವತಃ ಸಾಹಿತಿಗಳೂ, ಕವಿಗಳು, ದೇಶಭಕ್ತರೂ, ಆಡಳಿತದಲ್ಲಿ ಮಹಾದಕ್ಷರೂ ಆಗಿದ್ದರಿಂದ ಕಲೆ, ಸಂಸ್ಕೃತಿ ಬೆಳೆಯಲು ಸಾಧ್ಯವಾಯಿತು. ಕೇವಲ ಪಾಳೇಗಾರ ಮಟ್ಟದಲ್ಲಿದ್ದ ಮೈಸೂರನ್ನು ತಮ್ಮ ಧೈರ್ಯ ಪರಾಕ್ರಮಗಳಿಂದ ರಾಜ್ಯಮಟ್ಟಕ್ಕೆ ಕೊಂಡೊಯ್ದು ಇಡೀ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಕೀರ್ತಿಯನ್ನು ಬೆಳಗಿಸಿದ್ದು ಇಲ್ಲಿನ ಮಹಾರಾಜರ ಸಾಧನೆಯಾಗಿದೆ. [ಮೈಸೂರು ಮಹಾರಾಜರ 550 ವರ್ಷಗಳ ಭವ್ಯ ಇತಿಹಾಸ]
ಮೈಸೂರು ಹೆಸರಿನ ಪೌರಾಣಿಕ ಹಿನ್ನೆಲೆ : ಈಗಿನ "ಮೈಸೂರು" ಎಂಬ ಹೆಸರು ಹೇಗೆ ಬಂತು ಎಂಬುವುದನ್ನು ನಾವು ನೋಡಿದರೆ ಪುರಾಣದ ಕಥೆಯೊಂದು ಬಿಚ್ಚಿಕೊಳ್ಳುತ್ತದೆ. ಪೌರಾಣಿಕ ಯುಗದಲ್ಲಿ ಮಹಿಷಾಸುರನೆಂಬ ಅಸುರ ಇಲ್ಲಿದ್ದನೆಂದೂ ಆತ ತನ್ನ ತಪಸ್ಸಿನ ಮೂಲಕ ಶಿವನಿಂದ ಅಧಿಕ ಶಕ್ತಿಯನ್ನು ಪಡೆದಿದ್ದನಂತೆ. ಹೀಗಾಗಿ ದೇವತೆಗಳು ಸೇರಿದಂತೆ ಜನರನ್ನು ವಿವಿಧ ರೀತಿಯ ತೊಂದರೆ ನೀಡಿ ಹಿಂಸಿಸುತ್ತಿದ್ದನಂತೆ. ಈತನ ಉಪಟಳ ತಾಳಲಾರದೆ ಜನರು ಶ್ರೀ ಚಾಮುಂಡೇಶ್ವರಿಯಲ್ಲಿ ಮೊರೆಯಿಟ್ಟರಂತೆ ಆಗ ಚಾಮುಂಡೇಶ್ವರಿ ಮಹಿಷಾಸುರನೊಂದಿಗೆ ಯುದ್ದ ಮಾಡಿದಳಂತೆ.
ಆದರೆ ಯುದ್ದದ ಸಮಯದಲ್ಲಿ ಆತನ ದೇಹದಿಂದ ಒಂದು ತೊಟ್ಟು ರಕ್ತ ಬಿದ್ದರೂ ಆ ನೆಲದಿಂದ ಸಹಸ್ರ ರಾಕ್ಷಸರು ಹುಟ್ಟುತ್ತಿದ್ದರಂತೆ. ಮಹಿಷಾಸುರನ ಈ ಶಕ್ತಿಯನ್ನು ತಿಳಿದ ಚಾಮುಂಡೇಶ್ವರಿಯ ಸಹೋದರಿ ಉತ್ತನಳಮ್ಮ ತನ್ನ ವಿಶಾಲವಾದ ನಾಲಿಗೆಯನ್ನು ಚಾಚಿ ಆತನ ರಕ್ತ ನೆಲಕ್ಕೆ ಬೀಳದಂತೆ ನೋಡಿಕೊಂಡಳಂತೆ. ಆ ಸಂದರ್ಭ ಚಾಮುಂಡೇಶ್ವರಿ ಉಗ್ರರೂಪ ತಾಳಿ ಮಹಿಷಾಸುರನನ್ನು ಸಂಹರಿದಳಂತೆ.
ಮಹಿಷಾಸುರ ನೆಲೆಸಿದ ಊರು "ಮಹಿಷೂರು" ಆಯಿತೆಂದೂ ಕ್ರಮೇಣ ಬಾಯಿಯಿಂದ ಬಾಯಿಗೆ ಮೈಸೂರಾಗಿ ಬದಲಾಯಿತೆಂದು ಹೇಳಲಾಗುತ್ತಿದೆ. ಹತ್ತನೇ ಶತಮಾನದಿಂದಲೂ ಮೈಸೂರು ಎಂದೇ ಕರೆಯುತ್ತಾ ಬರಲಾಗಿದೆ. ಮೈಸೂರು ನಗರ ಮತ್ತು ಸುತ್ತಮುತ್ತ ದೊರೆತ ಹಳೆಯ ಶಾಸನಗಳ ಪ್ರಕಾರ ಮೈಸೂರು ಸುಮಾರು 70 ಹಳ್ಳಿಗಳಿಂದ ಕೂಡಿ "ಮೈಸೂರು ನಾಡು" ಎಂದು ಕರೆಯಲ್ಪಡುತ್ತಿತ್ತು. [ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ-LIVE]
ಮೈಸೂರು ಸುತ್ತಮುತ್ತ : ಮೈಸೂರು ಬೆಟ್ಟ, ಅರಮನೆ, ಸುಂದರ ಉದ್ಯಾನವನ, ಕೆರೆ, ಪಾರಂಪರಿಕ ಕಟ್ಟಡಗಳಿಂದ ಹಾಗೂ ದೊಡ್ಡ ದೊಡ್ಡ ರಸ್ತೆಗಳಿಂದ ಕೂಡಿದ ಸುಂದರ ನಗರವಾಗಿದೆ. ದೊಡ್ಡ ದೊಡ್ಡ ಕೈಗಾರಿಕೆಗಳು ಇಲ್ಲಿ ಇಲ್ಲವಾದರೂ ಉತ್ತಮ ವ್ಯಾಪಾರ ಕೇಂದ್ರವಾಗಿದೆ. ಜೊತೆಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಎಲ್ಲ ರೀತಿಯ ಕಾಲೇಜುಗಳು ಇಲ್ಲಿವೆ. ಸಮುದ್ರಮಟ್ಟದಿಂದ ಸುಮಾರು 2525 ಅಡಿ ಎತ್ತರದಲ್ಲಿದ್ದು, ಬೇಸಿಗೆಯಲ್ಲಿ ಹೆಚ್ಚು ಸೆಖೆಯೂ ಇಲ್ಲದೆ, ಚಳಿಗಾಲದಲ್ಲಿ ಹೆಚ್ಚು ಚಳಿಯೂ ಇಲ್ಲದೆ ಆಹ್ಲಾದಕರ ವಾತಾವರಣದಿಂದ ಕೂಡಿರುತ್ತದೆ.
ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ, ಸುಂದರ ಬೃಂದಾವನದ ಕೃಷ್ಣರಾಜಸಾಗರ ಜಲಾಶಯ, ಮೃಗಾಲಯ, ಚಾಮುಂಡಿಬೆಟ್ಟ, ಸುಂದರ ಕೆರೆಗಳಲ್ಲದೆ, ವಿವಿಧ ಐತಿಹಾಸಿಕ ದೇವಾಲಯಗಳು, ಮಸೀದಿಗಳು, ಚರ್ಚ್ಗಳು ಪ್ರವಾಸಿ ತಾಣಗಳಾಗಿವೆ. ಮೈಸೂರಿಗೆ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು, ದೂರದಿಂದ ಬರುವ ಪ್ರವಾಸಿಗರಿಗೆ ಸ್ವರ್ಗವಾಗಿದೆ. ಮೈಸೂರು ಮಸಾಲೆ, ಮೈಸೂರು ಪಾಕ, ಮೈಸೂರು ಮಲ್ಲಿಗೆ, ಮೈಸೂರು ಪೇಟ, ಮೈಸೂರು ವೀಳ್ಯದೆಲೆ ಎಲ್ಲವೂ ಮೈಸೂರಿನ ವಿಶೇಷತೆಗೆ ಸಾಕ್ಷಿಯಾಗಿವೆ. [ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ]