ಜನ ಯಾಕೆ ಮೋದಿ ಮೋದಿ ಅಂತಾರೋ ಐ ಡೋಂಟ್ ನೋ: ಸಿದ್ದರಾಮಯ್ಯ
Recommended Video
ಮೈಸೂರು, ಜೂನ್ 13: ರೂಪಾಯಿ ಮೌಲ್ಯ ಸಂಪೂರ್ಣ ಕುಸಿದಿದೆ, ಆರ್ಥಿಕ ಪರಿಸ್ಥಿತಿ ಎಕ್ಕುಟ್ಟೋಗಿದೆ, ಆದರೂ ಜನ ಯಾಕೆ 'ಮೋದಿ ಮೋದಿ ಅಂತಾರೋ, ಐ ಡೋಂಟ್ ನೋ ವೈ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನರೇಂದ್ರ ಮೋದಿ ಐದು ವರ್ಷ ಸರಕಾರವನ್ನು ನಡೆಸಿದರು, ಆದರೆ ದೇಶದ ಆರ್ಥಿಕ ಬೆಳವಣಿಗೆ ಸುಧಾರಿಸಿಲ್ಲ. ಅಪನಗದೀಕರಣದಿಂದ ದೇಶಕ್ಕೆ ಏನಾದರೂ ಲಾಭವಾಯಿತಾ, ನೀವೆಲ್ಲಾ ಮಾಧ್ಯಮದವರು ಮೋದಿಯವರಲ್ಲಿ ಈ ಪ್ರಶ್ನೆಯನ್ನು ಕೇಳಬೇಕು ಎಂದು ಸಿದ್ದರಾಮಯ್ಯ ಪತ್ರಕರ್ತರಿಗೆ ಸಲಹೆಯನ್ನು ನೀಡಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಬಿಜೆಪಿ ಸರಕಾರದಿಂದ ಸಾಧ್ಯವಿಲ್ಲ ಮತ್ತು ಕಳೆದ ಐದು ವರ್ಷದಲ್ಲಿ ಅದಕ್ಕೆ ಬೇಕಾದ ಯಾವ ಹೆಜ್ಜೆಯನ್ನು ಮೋದಿ ಸರಕಾರ ಇಡಲಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬರೀ ಭಾಷಣ, ಸುಳ್ಳು, ಡ್ರಾಮಾ, ಭಾವನಾತ್ಮಕವಾಗಿ ಮಾತನಾಡುವುದು.. ಹೀಗೆ.. ಇದರಿಂದಲೇ ಐದು ವರ್ಷ ಕಾಲ ಕಳೆದುಬಿಟ್ಟರು ಎಂದು ಮೋದಿ ಸರಕಾರವನ್ನು ಲೇವಡಿ ಮಾಡಿರುವ ಸಿದ್ದರಾಮಯ್ಯ, ದೇಶದ ಬಗ್ಗೆ ಇವರಿಗೆ ಚಿಂತೆಯೇ ಇಲ್ಲ. ಯಾವ ವಿಭಾಗದಲ್ಲೂ ದೇಶ ಅಭಿವೃದ್ದಿಯನ್ನು ಕಂಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿಯೇ ಸೋಲು ಅನುಭವಿಸಿ ಮುಖಭಂಗಕ್ಕೊಳಗಾಗಿದ್ದ ಸಿದ್ದರಾಮಯ್ಯ, ಲೋಕಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವು ಸಾಧಿಸುವ ಮೂಲಕ ಮತ್ತೆ ಬೀಗುವ ನಿರೀಕ್ಷೆ ಹೊಂದಿದ್ದರು. ಆದರೆ, ಅವರ ನಿರೀಕ್ಷೆ ಹುಸಿಗೊಂಡಿತ್ತು.
ಲೋಕಸಭಾ ಚುನಾವಣೆಯ ಸೋಲನ್ನು ವಿನಯಪೂರ್ವಕವಾಗಿ ಸ್ವೀಕರಿಸಿರುವುದಾಗಿ ಹೇಳಿದ್ದ ಸಿದ್ದರಾಮಯ್ಯ, ಇದು ಪ್ರಜಾಪ್ರಭುತ್ವದ ಸೌಂದರ್ಯ. ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರೂ ಚುನಾವಣೆ ಮುಗಿದ ಮೇಲೆ ಪಕ್ಷಾತೀತವಾಗಿ ನಮ್ಮ ರಾಜ್ಯದ ಪ್ರತಿನಿಧಿಗಳಾಗಿರುತ್ತಾರೆ, ಅವರೆಲ್ಲರಿಗೂ ಅಭಿನಂದನೆಗಳು ಎಂದು ಪ್ರತಿಕ್ರಿಯಿಸಿದ್ದರು.












Click it and Unblock the Notifications