ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ನೆಲಸಮ ಮಾಡಲು ನಿಜವಾದ ಕಾರಣವೇನು?

ಮೈಸೂರು, ಫೆಬ್ರವರಿ 18: ಸಾಂಸ್ಕೃತಿಕ ನಗರಿಯ ಭವ್ಯ ಇತಿಹಾಸವನ್ನು ಸಾರುವ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್ ನೆಲಸಮಗೊಳಿಸುವ ವಿಚಾರವಾಗಿ ಪರ - ವಿರೋಧದ ಚರ್ಚೆ ಮೈಸೂರಿನಲ್ಲಿ ನಡೆಯುತ್ತಿದೆ.

ಇತ್ತ ಮಾರುಕಟ್ಟೆಯಲ್ಲಿ ಜೀವನ ನಿರ್ವಹಣೆಗೆ ಮಾರುಕಟ್ಟೆಯನ್ನು ಅವಲಂಬಿಸಿರುವ ವ್ಯಾಪಾರಿಗಳು ಮತ್ತು ಇಲ್ಲಿಗೆ ಬರುವ ಗ್ರಾಹಕರು ಕೊರತೆಗಳ ನಡುವೆಯೇ ಮಾರಾಟ ಮತ್ತು ಖರೀದಿ ನಡೆಸುತ್ತಿದ್ದಾರೆ. ಈಗ ಇರುವ ಕಟ್ಟಡ ಕೆಡವಿ ಹೊಸ ಮಾರುಕಟ್ಟೆ ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿ ಹಲವು ತಿಂಗಳುಗಳು ಕಳೆದಿವೆ. ಆದರೆ, ವಿವಿಧ ಕಾರಣಗಳಿಂದ ಸರ್ಕಾರದ ಅನುಮೋದನೆ ದೊರೆತಿಲ್ಲ. ಅತ್ತ ಪುನಃ ರ್ನಿರ್ಮಾಣವೂ ಇಲ್ಲದೆ, ಇತ್ತ ನವೀಕರಣವೂ ಸಾಧ್ಯವಾಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಶತಮಾನದ ಇತಿಹಾಸ ಹೊಂದಿರುವ ಈ ಕಟ್ಟಡಗಳು ಶಿಥಿಲಗೊಂಡು ಕುಸಿದು ಬೀಳುವ ಅಪಾಯದಲ್ಲಿವೆ. ನಗರದ ಹೃದಯಭಾಗದಲ್ಲಿರುವ ಈ ಕಟ್ಟಡಗಳ ಭವಿಷ್ಯದ ಬಗ್ಗೆ ಎದ್ದಿರುವ ಗೊಂದಲಗಳಿಗೆ ಹಲವು ವರ್ಷಗಳು ಕಳೆದರೂ ತೆರೆಬಿದ್ದಿಲ್ಲ. ಈ ಕಟ್ಟಡಗಳನ್ನು ನವೀಕರಣ ಮಾಡಬೇಕೇ ಅಥವಾ ಕೆಡವಿ ಹೊಸದಾಗಿ ನಿರ್ಮಿಸಬೇಕೇ ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯ ಮುಂದುವರೆದಿದೆ. ಜಿಲ್ಲಾಡಳಿತ ಮತ್ತು ಮೈಸೂರು ಮಹಾನಗರ ಪಾಲಿಕೆಯು ಗೊಂದಲ ನಿವಾರಣೆಗೆ ನಡೆಸಿರುವ ಪ್ರಯತ್ನಗಳಿಗೆ ಫಲ ಲಭಿಸಿಲ್ಲ.

ಲ್ಯಾನ್ಸ್ ಡೌನ್ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ಕೆಡವಿ ಅದೇ ಮಾದರಿಯಲ್ಲಿ ಹೊಸದಾಗಿ ನಿರ್ಮಿಸುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಧಾರವನ್ನು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಇತಿಹಾಸ ತಜ್ಞರು ಮತ್ತು ಸಾರ್ವಜನಿಕರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಎರಡು ಕಟ್ಟಡಗಳ ಭವಿಷ್ಯ ನಿರ್ಧರಿಸಲು ನೇಮಿಸಿದ್ದ ಸಮಿತಿಗಳು ತದ್ವಿರುದ್ಧ ವರದಿಗಳನ್ನು ನೀಡಿರುವುದೇ ಗೊಂದಲ ಉಂಟಾಗಲು ಕಾರಣ. ಈಗ ಇರುವ ಕಟ್ಟಡ ಶಿಥಿಲಗೊಂಡಿದ್ದು, ಸಂಪೂರ್ಣವಾಗಿ ಕೆಡವಿ ಪಾರಂಪರಿಕ ಶೈಲಿಯಲ್ಲಿ ಹೊಸ ಕಟ್ಟಡ ನಿರ್ಮಿಸಲು ಪಾರಂಪರಿಕ ಕಟ್ಟಡಗಳ ರಾಜ್ಯ ಕಾರ್ಯಪಡೆಯ ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ನೇಮಿಸಿದ್ದ ಪಾರಂಪರಿಕ ಸಮಿತಿಯು ಭಿನ್ನ ವರದಿ ನೀಡಿದ್ದು, ಕಟ್ಟಡವನ್ನು ನೆಲಸಮ ಮಾಡುವ ಬದಲು ನವೀಕರಣ ಮಾಡಬೇಕೆಂದು ತಿಳಿಸಿತ್ತು.

ಇದರ ನಡುವೆ ದೇವರಾಜ ಮಾರುಕಟ್ಟೆ ವ್ಯಾಪಾರಸ್ಥರ ಸಂಘದವರ ತಜ್ಞರ ಸಮಿತಿ ಕಟ್ಟಡವನ್ನು ಪರಿಶೀಲಿಸಿ ವರದಿ ಸಲ್ಲಿಸಿತ್ತು. ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬಹುದು ಎಂಬ ವರದಿಯನ್ನು ಸಮಿತಿ ನೀಡಿತ್ತು. ಈ ವರದಿ ಸರ್ಕಾರದ ಅಂಗಳದಲ್ಲಿದ್ದು, ಮುಂದಿನ ತೀರ್ಮಾನ ಹೊರಬೀಳಬೇಕಾಗಿದೆ. ಮುಂದೆ ಓದಿ...

ವೈಜ್ಞಾನಿಕವಾಗಿ ನವೀಕರಣ

ವೈಜ್ಞಾನಿಕವಾಗಿ ನವೀಕರಣ

ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ನವೆಂಬರ್ ತಿಂಗಳಲ್ಲಿ ಲ್ಯಾನ್ಸ್ ಡೌನ್ ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸರ್ಕಾರ ರಚಿಸಿದ್ದ ಪಾರಂಪರಿಕ ಸಮಿತಿ ನವೆಂಬರ್‌ನಲ್ಲಿ ತನ್ನ ಅಂತಿಮ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿತ್ತು. ಅಗತ್ಯ ಇರುವ ಕಡೆ ದುರಸ್ತಿ ಹಾಗೂ ನವೀಕರಣ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಯಾವುದೇ ಕಾರಣಕ್ಕೂ ಮಾರುಕಟ್ಟೆ ಹಾಗೂ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಬಾರದು. ಅದರ ಬದಲು ವೈಜ್ಞಾನಿಕವಾಗಿ ನವೀಕರಣ ಕೈಗೊಂಡರೆ ಕಟ್ಟಡಗಳು ಉಳಿಯುತ್ತವೆ ಎಂದು ವರದಿಯಲ್ಲಿ ತಿಳಿಸಿದೆ.

ಬಹುತೇಕ ವ್ಯಾಪಾರಿಗಳ ವಿರೋಧ

ಬಹುತೇಕ ವ್ಯಾಪಾರಿಗಳ ವಿರೋಧ

ದೇವರಾಜ ಮಾರುಕಟ್ಟೆಯ ಒಂದು ಭಾಗ 2016ರ ಆಗಸ್ಟ್‌ನಲ್ಲಿ ಕುಸಿದಿತ್ತು. ನವೀಕರಣ ಕಾಮಗಾರಿ ವೇಳೆ ಈ ಅವಘಡ ಸಂಭವಿಸಿತ್ತು. ಒಂದು ಭಾಗದ ಎಂಟು ಅಂಗಡಿಗಳು ನೆಲಸಮಗೊಂಡಿದ್ದವು. ಇದರಿಂದ ನವೀಕರಣ ಕಾಮಗಾರಿ ಕೈಬಿಡಲಾಗಿತ್ತು. ಮಾರುಕಟ್ಟೆ ಪುನರ್‌ನಿರ್ಮಾಣಕ್ಕೆ ಬಹುತೇಕ ವ್ಯಾಪಾರಿಗಳ ವಿರೋಧವಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಇಲ್ಲಿಂದ ಎಬ್ಬಿಸಬಾರದು ಎಂಬುದು ಅವರ ಪ್ರಮುಖ ಬೇಡಿಕೆ. ಲ್ಯಾನ್ಸ್ ಡೌನ್ ಕಟ್ಟಡವನ್ನು 1892ರಲ್ಲಿ ನಿರ್ಮಿಸಲಾಗಿದೆ. ಅಂದಿನ ಗವರ್ನರ್ ಜನರಲ್ ಲಾರ್ಡ್ ಲ್ಯಾನ್ಸ್ ಡೌನ್ ಅವರ ಮೈಸೂರು ಭೇಟಿಯ ಸ್ಮರಣೆಗಾಗಿ ಕಟ್ಟಡಕ್ಕೆ ಅದೇ ಹೆಸರು ಇಡಲಾಗಿದೆ. ಈ ಐತಿಹಾಸಿಕ ಕಟ್ಟಡದ ಗೋಡೆ 350 ಮಿ.ಮೀ.ನಷ್ಟು ದಪ್ಪವಿದೆ. ನೆಲ ಮಹಡಿ ಮತ್ತು ಮೊದಲ ಮಹಡಿಯಲ್ಲಿ ಒಟ್ಟು 97 ಮಳಿಗೆಗಳಿವೆ. 2012ರ ಆಗಸ್ಟ್‌ನಲ್ಲಿ ಈ ಕಟ್ಟಡದಲ್ಲಿರುವ ಅಂಗಡಿಯ ಛಾವಣಿ ಕುಸಿದು ನಾಲ್ಕು ಮಂದಿ ಮೃತಪಟ್ಟಿದ್ದರು. ಜೋರು ಮಳೆಗೆ ಕಟ್ಟಡದ ಮೇಲ್ಭಾಗದಲ್ಲಿ ನೀರು ನಿಂತಿದ್ದರಿಂದ ಕುಸಿದಿತ್ತು.ಆ ಬಳಿಕ ಕಟ್ಟಡದಲ್ಲಿರುವ ಇತರ ಅಂಗಡಿಗಳನ್ನು ಸ್ಥಳಾಂತರಿಸಲಾಗಿತ್ತು.

ದಿನಬಾಡಿಗೆ ಆಧಾರದಲ್ಲಿ ವ್ಯಾಪಾರ

ದಿನಬಾಡಿಗೆ ಆಧಾರದಲ್ಲಿ ವ್ಯಾಪಾರ

ದೇವರಾಜ ಮಾರುಕಟ್ಟೆಯಲ್ಲಿ ಪ್ರಸ್ತುತ 822 ಮಳಿಗೆಗಳು ಇವೆ. ಈ ಮಳಿಗೆಗಳು 15X20 ಅಡಿ, 12X15 ಅಡಿ ಹೀಗೆ ವಿವಿಧ ವಿಸ್ತೀರ್ಣ ಹೊಂದಿವೆ. ಈ ಮಳಿಗೆಗಳ ವ್ಯಾಪಾರಿಗಳು ತಿಂಗಳ ಬಾಡಿಗೆ ಕೊಡುತ್ತಿದ್ದಾರೆ. ಮಳಿಗೆಗಳ ವಿಸ್ತೀರ್ಣ ಮತ್ತು ಸ್ಥಿತಿಗತಿಗಳ ಆಧಾರದಲ್ಲಿ ಬಾಡಿಗೆ ನಿರ್ಧರಿಸಲಾಗಿದೆ. ಇದಲ್ಲದೆ ದಿನ ಬಾಡಿಗೆ ವ್ಯಾಪಾರದಲ್ಲಿ ತೊಡಗಿಕೊಂಡಿರುವ ಸುಮಾರು 300 ವ್ಯಾಪಾರಿಗಳು ಇದ್ದಾರೆ. ವೀಳ್ಯದೆಲೆ ಬ್ಲಾಕ್, ತುಳಸಿ ಬ್ಲಾಕ್ ನಲ್ಲಿನ ವ್ಯಾಪಾರಿಗಳು ದಿನಬಾಡಿಗೆ ಆಧಾರದಲ್ಲಿ ವ್ಯಾಪಾರ ಮಾಡುತ್ತಾರೆ.

ಉಳಿಸುವುದಕ್ಕಿಂತಲೂ ಕೆಡವುದರಲ್ಲಿ ಆಸಕ್ತಿ

ಉಳಿಸುವುದಕ್ಕಿಂತಲೂ ಕೆಡವುದರಲ್ಲಿ ಆಸಕ್ತಿ

ಐತಿಹಾಸಿಕ ಮಹತ್ವ ಹೊಂದಿರುವ ಕಟ್ಟಡಗಳನ್ನು ಉಳಿಸಿಕೊಳ್ಳುವ ಆಸಕ್ತಿ ಯಾರಿಗೂ ಇಲ್ಲದಂತೆ ಕಾಣುತ್ತಿದೆ ಎಂದು ದೇವರಾಜ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪೈಲ್ವಾನ್ ಮಹದೇವ ಹೇಳಿಕೆ ಕೊಟ್ಟಿದ್ದಾರೆ. ಪಾಲಿಕೆಯವರು ದೇವರಾಜ ಮಾರುಕಟ್ಟೆಯ ಎಲ್ಲ ಮುಖ್ಯದ್ವಾರಗಳಲ್ಲಿ ಕಟ್ಟಡ ತೀರಾ ದುಸ್ಥಿತಿಯಲ್ಲಿದ್ದು, ಯಾವ ಕ್ಷಣದಲ್ಲಾದರೂ ಕುಸಿದು ಬೀಳಬಹುದು ಎಂಬ ಎಚ್ಚರಿಕೆ ಫಲಕವನ್ನು 2005ರಲ್ಲೇ ಹಾಕಿದ್ದರು. ತೀರಾ ದುಸ್ಥಿತಿಯಲ್ಲಿರುವ ಕಟ್ಟಡ ಬೀಳಲು ಇಷ್ಟು ವರ್ಷ ಬೇಕೇ? ಲ್ಯಾನ್ಸ್ಡೌನ್ ಕಟ್ಟಡದ ಶೇ.75 ದುರಸ್ತಿ ಕೆಲಸ ನಡೆದಿದೆ. ದೇವರಾಜ ಮಾರುಕಟ್ಟೆಯ 300 ಅಂಗಡಿಗಳನ್ನು ದುರಸ್ತಿ ಮಾಡಿದ್ದಾರೆ. ಇನ್ನುಳಿದ ಭಾಗವನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಈ ಎರಡು ಕಟ್ಟಡಗಳು ಇರುವ ಜಾಗಕ್ಕೆ ಭಾರೀ ಬೆಲೆಯಿದೆ. ಅದರ ಮೇಲೆ ಕೆಲವರ ಕಣ್ಣು ಬಿದ್ದಿದೆ. ಆದ್ದರಿಂದ ಉಳಿಸುವುದಕ್ಕಿಂತಲೂ ಕೆಡವುದರಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಪಾರಂಪರಿಕ ನಗರ ಎಂದು ಬೊಬ್ಬೆ ಹಾಕುವವರು ನಗರದ ಪರಂಪರೆಯನ್ನು ಕಾಪಾಡಲು ಮುಂದಾಗಬೇಕು. ಮಳೆ ಬಂದಾಗ ಮೈಸೂರು ಅರಮನೆ ಕೂಡ ಅಲ್ಲಲ್ಲಿ ಸೋರುತ್ತದೆ. ಆ ಕಾರಣ ನೀಡಿ ಅರಮನೆಯನ್ನು ಕೆಡವಲು ಸಾಧ್ಯವೇ? ಇತಿಹಾಸದ ಬಗ್ಗೆ ಅರಿವು ಇಲ್ಲದವರಿಗೆ ಮಾತ್ರ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ ಎಂದು ಪೈಲ್ವಾನ್ ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+