ಮೈಸೂರಿನಲ್ಲಿ ಸೈಕ್ಲಿಂಗ್ ಚಾಂಪಿಯನ್ ಶಿಪ್ ಅರ್ಧಕ್ಕೆ ಸ್ಥಗಿತವಾಗಿದ್ದು ಯಾಕೆ?
ಮೈಸೂರು, ನವೆಂಬರ್ 04: ಮೈಸೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ರಸ್ತೆ ಸೈಕ್ಲಿಂಗ್ ಚಾಂಪಿಯನ್ ಶಿಪ್ ಅನುಮತಿ ಪಡೆಯದ ಕಾರಣಕ್ಕೆ ಅರ್ಧಕ್ಕೆ ಸ್ಥಗಿತಗೊಂಡಿತು. ಇದಕ್ಕೆ ಆಯೋಜಕರು ಏಕಾಏಕಿಯಾಗಿ ಸ್ಪರ್ಧೆಯನ್ನು ಆಯೋಜಿಸಿರುವುದೇ ಕಾರಣ ಎನ್ನುವ ಆರೋಪ ಕೇಳಿಬಂದಿದೆ.
ಮೈಸೂರಿನ ಉತ್ತನಹಳ್ಳಿ ರಿಂಗ್ ರಸ್ತೆ ಜಂಕ್ಷನ್ ಬಳಿ ಶನಿವಾರದಿಂದ ಎರಡು ದಿನ ಸ್ಪರ್ಧೆ ಆಯೋಜಿಸಲಾಗಿತ್ತು. ಆಯೋಜಕರು ಆಯುಕ್ತರ ಕಚೇರಿಗೆ ಅನುಮತಿಗಾಗಿ ನೀಡಿರುವ ಮನವಿಯನ್ನು ರಸ್ತೆ ಸುರಕ್ಷತೆ ಕಾರಣಕ್ಕೆ ರದ್ದುಪಡಿಸಲಾಗಿತ್ತು. ಆದರೆ, ಈ ಮಾಹಿತಿ ಪಡೆದುಕೊಳ್ಳದೇ ಏಕಾಎಕಿ ಸ್ಪರ್ಧೆ ಆಯೋಜಿಸಿದ್ದಾರೆ.

ಅಂತೆಯೆ ಮೊದಲ ದಿನ 9 ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಿದವು. ಆದರೆ 2ನೇ ದಿನ ಸ್ಥಳೀಯ ಪೊಲೀಸರು ಸ್ಪರ್ಧೆ ಆಯೋಜನೆಗೆ ಅನುಮತಿ ನಿರಾಕರಿಸಿದ ಕಾರಣಕ್ಕೆ ಆ ದಿನದಂದು ನಡೆಯಬೇಕಿದ್ದ ಸ್ಪರ್ಧೆಗಳು ರದ್ದಾದವು. ಇದು ಸ್ಪರ್ಧಿಗಳ ಆಕ್ರೋಶಕ್ಕೆ ಕಾರಣವಾಗಿವೆ. ಈ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 250ಕ್ಕೂ ಹೆಚ್ಚು ಸ್ಪರ್ಧಿಗಳು ಉತ್ಸಾಹದಿಂದಲೇ ಆಗಮಿಸಿದ್ದರು.
ಈ ಹಿಂದಿನಿಂದಲೂ ಸೈಕ್ಲಿಂಗ್ ನಲ್ಲಿ ತೊಡಗಿಸಿಕೊಂಡವರು ಮುಂಜಾನೆಯೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಉತ್ತನಗಳ್ಳಿ ರಿಂಗ್ ರಸ್ತೆ ಜಂಕ್ಷನ್ ಬಳಿ ಕಾದು ಕುಳಿತಿದ್ದರು. ಆದರೆ, ಪೊಲೀಸರು ಹೆದ್ದಾರಿಯಲ್ಲಿ ರಸ್ತೆ ಸುರಕ್ಷತೆ ಕಾಪಾಡುವುದು, ಸ್ಥಳೀಯರ ವಿರೋಧ, ಇಲಾಖೆಯಿಂದ ಅನುಮತಿ ಪಡೆಯದೇ ಕಾರ್ಯಕ್ರಮ ಆಯೋಜನೆ ಕಾರಣ ಮುಂದಿಟ್ಟುಕೊಂಡು ಸ್ಪರ್ಧೆ ಆಯೋಜನೆಗೆ ಅನುಮತಿ ನಿರಾಕರಿಸಿದರು.
ಈಗಾಲೇ ಹಲವು ಬಾರಿ ಮೈಸೂರಿನಲ್ಲಿ ಯಶಸ್ವಿಯಾಗಿ ರಸ್ತೆ ಸೈಕ್ಲಿಂಗ್ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧಿಗಳು ತಮ್ಮ ಸಾಮರ್ಥ್ಯ ಪರೀಕ್ಷಿಸಿಕೊಂಡು ಹೆಚ್ಚಿನ ಸಾಧನೆಗೆ ತಯಾರಿ ನಡೆಸಲು ಅನುಕೂಲವಾಗುತ್ತದೆ. ಮಾತ್ರವಲ್ಲದೇ ಇಲ್ಲಿ ಉತ್ತಮ ಸಾಧನೆ ತೋರಿದವರು ಡಿಸೆಂಬರ್ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಚಾಂಪಿಯನ್ ಶಿಪ್ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆಯುತ್ತಿದ್ದರು. ಹೀಗಿದ್ದರೂ ಸ್ಪರ್ಧೆ ಆಯೋಜನೆಗೆ ಅನುಮತಿ ನಿರಾಕರಿಸಿರುವುದು ಸರಿಯಲ್ಲ ಎಂದು ಕ್ರೀಡೆ ಆಯೋಜಕರು ಆರೋಪಿಸಿದರು.
ಮೈಸೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಲೋಕೇಶ್ ಮಾತನಾಡಿ, 'ಕಳೆದ ಬಾರಿಯೂ ಆಯುಕ್ತರ ಕಚೇರಿಗೆ ಮನವಿ ನೀಡಿ ಸ್ಥಳೀಯ ಠಾಣಾಧಿಕಾರಿಗಳನ್ನು ಸಂಪರ್ಕಿಸಿ ಪಂದ್ಯ ಆಯೋಜಿಸಿದ್ದೆವು. ಹಾಗಾಗಿ ಈ ಬಾರಿಯೂ ಅನುಮತಿ ಪಡೆಯದೇ ಸ್ಪರ್ಧೆ ಆಯೋಜಿಸದಿರುವುದು ನಮ್ಮ ಕಡೆಯಿಂದ ತಪ್ಪಾಗಿದೆ' ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಂಚಾರ ವಿಭಾಗ ಎಸಿಪಿ ಪರಶುರಾಮಪ್ಪ ಅವರು, ಪಂದ್ಯ ಆಯೋಜನೆ ಹಿನ್ನೆಲೆಯಲ್ಲಿ ಆಯೋಜಕರು ನಮ್ಮನ್ನು ಸಂಪರ್ಕಿಸಿಲ್ಲ. ಕಳೆದ ಬಾರಿ ಆಯೋಜಿಸಿದ್ದಾಗಲೇ ಇನ್ನು ಮುಂದೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದರೂ ಸ್ಪರ್ಧೆ ಆಯೋಜಿಸಿದ್ದಾರೆ. ರಸ್ತೆ ಸುರಕ್ಷತೆಯ ಕಾರಣಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಟ್ಟಾರೆಯಾಗಿ ಪೊಲೀಸರಿಂದ ಅನುಮತಿ ಪಡೆಯದೆ ಮೈಸೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಸೈಕ್ಲಿಂಗ್ ಆಯೋಜಿಸಿ ಬಳಿಕ ಸ್ಪರ್ಧಿಗಳು ಬಂದ ನಂತರ ಪೊಲೀಸರ ಅನುಮತಿ ಸಿಗದೆ ರದ್ದಾಗಿರುವುದು ಸ್ಪರ್ಧಿಗಳ ಆಕ್ರೋಶಕ್ಕೆ ಕಾರಣವಾಗಿರುವುದಂತೂ ನಿಜ. ಇನ್ನಾದರೂ ಇಂತಹ ಗೊಂದಲ ಸೃಷ್ಟಿಯಾಗದಿರಲಿ. ಇದರಿಂದ ಕುತೂಹಲದಿಂದ ದೂರದ ಊರುಗಳಿಂದ ಆಗಮಿಸಿದ ಸ್ಪರ್ಧಿಗಳಿಗೂ ತೊಂದರೆ ಅನುಭವಿಸುವಂತಾಗಿದ್ದು, ಅವರ ಬಯಕೆಗೆ ತಣ್ಣೀರು ಎರಚಿದಂತಾಗಿದೆ. ಇನ್ನು ಮುಂದೆ ಈ ರೀತಿ ಆಗದಿರಲಿ ಎಂದು ಸ್ಪರ್ಧಿಗಳು ಮನವಿ ಮಾಡಿದ್ದಾರೆ.












Click it and Unblock the Notifications