ಗುಂಡ್ಲುಪೇಟೆ ಉಪಚುನಾವಣೆ: ಗೆಲುವು ಸುಲಭವಲ್ಲ!
ಗುಂಡ್ಲುಪೇಟೆ ಉಪಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು, ಗೆಲುವು ಯಾರಿಗೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಮೈಸೂರು, ಮಾರ್ಚ್ 30: ಏಪ್ರಿಲ್ 9, ಭಾನುವಾರದಂದು ನಡೆಯಲಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ನೆತ್ತಿಸುಡುವ ಬಿಸಿಲನ್ನೂ ಲೆಕ್ಕಿಸದೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಚುನಾವಣಾ ಪ್ರಚಾರ ಸಭೆ, ರೋಡ್ ಶೋ, ಮನೆಮನೆ ಭೇಟಿ ಎನ್ನುತ್ತ ವಿವಿಧ ರೀತಿಯಲ್ಲಿ ಮತಯಾಚನೆ ಮಾಡುತ್ತಿದ್ದಾರೆ.
ಹಿಂದಿನ ಮತದಾನದ ಲೆಕ್ಕವನ್ನಿಟ್ಟುಕೊಂಡು ರಾಜಕೀಯ ನಾಯಕರು ಸೋಲುಗೆಲುವಿನ ಬಗ್ಗೆ ಲೆಕ್ಕಹಾಕುತ್ತಿದ್ದಾರೆ. ಆದರೆ ಏನೇ ಕೂಡಿ ಕಳೆದು ಗುಣಿಸಿ ಭಾಗಿಸಿದರೂ ರಾಜಕೀಯ ನಾಯಕರು ಅಂದುಕೊಂಡಷ್ಟು ಸುಲಭದಲ್ಲಿ ಫಲಿತಾಂಶ ಹೊರಬರುವುದು ಕಷ್ಟವೇ. ಇದಕ್ಕೆ ಕಾರಣವನ್ನು ಹೇಳುವುದಾದರೆ ಕಳೆದ ಹಲವು ವರ್ಷಗಳಿಂದ ಇಲ್ಲಿ ಮತ ಚಲಾಯಿಸುತ್ತಾ ಬಂದವರು ವೃದ್ಧರು, ನಡುವಯಸ್ಕರು. ಬಹುಶಃ ಅವರು ಜಾತಿ, ವಿಶ್ವಾಸ, ನಂಬಿಕೆ, ಆಮಿಷಕ್ಕೆ ಒಳಗಾಗಿ ಮತ ಚಲಾಯಿಸಬಹುದು.[ಉಪಚುನಾವಣೆ: ಗೀತಾ ಮಹದೇವಪ್ರಸಾದ್ ಕಣ್ಣೀರು!]
ಆದರೆ ಈ ಬಾರಿ ಸುಮಾರು ಇಪ್ಪತ್ತು ಸಾವಿರದಷ್ಟು ಯುವ ಮತದಾರರು ಸೇರ್ಪಡೆಯಾಗಿದ್ದಾರೆ. ಅವರು ವಿದ್ಯಾವಂತರು. ಅವರಿಗೆ ಯೋಚಿಸುವ ಶಕ್ತಿಯಿದೆ. ಅವರಲ್ಲಿ ಹೆಚ್ಚಿನವರು ಅಭಿವೃದ್ಧಿಗೆ ಒತ್ತುಕೊಡುವುದರಿಂದ, ಮತ್ತು ಅಭಿವೃದ್ಧಿಗೆ ಒತ್ತುಕೊಡುವ ನಾಯಕನನ್ನೇ ಆಯ್ಕೆ ಮಾಡಬೇಕೆಂದು ನಿರ್ಧರಿಸುವುದರಿಂದ ಇಲ್ಲಿ ಯುವಕರೇ ನಿರ್ಣಾಯಕ ಸ್ಥಾನದಲ್ಲಿರುವುದು ನಿಜ.[ಉಪಚುನಾವಣೆ: ತಪಾಸಣೆಗೆ ಜಿಲ್ಲಾಧಿಕಾರಿ ವಾಹನವೂ ಹೊರತಾಗಿಲ್ಲ]
ಚಾಮರಾಜನಗರದ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ತೀವ್ರ ಬರದ ಕಾರಣದಿಂದಾಗಿ ಅಲ್ಲಿನ ಹೆಚ್ಚಿನ ಮಂದಿ ಹೊಟ್ಟೆಪಾಡಿಗಾಗಿ ಕೇರಳ, ಕೊಡಗು. ತಮಿಳುನಾಡು ಮುಂತಾದ ಕಡೆಗೆ ಗುಳೆಹೋಗಿದ್ದಾರೆ. ಅವರು ಬಾರದೆ ಹೋದರೆ ಒಂದಷ್ಟು ಮತಗಳು ನಷ್ಟವಾಗುವ ಸಾಧ್ಯತೆಯಿದೆ. ಹೀಗಾಗಿ ಅವರನ್ನು ಫೋನ್ ಮಾಡಿ ಕರೆಸುವ ಪ್ರಕ್ರಿಯೆಗಳು ಗುಟ್ಟಾಗಿ ನಡೆಯುತ್ತಿವೆ.[ಅದೆಲ್ಲ ಸರಿ, ಶ್ರೀನಿವಾಸ್ ಪ್ರಸಾದ್ ನಡೆ ಮಾತ್ರ ನಿಗೂಢ]
ಚುನಾವಣಾ ಆಯೋಗ ಪ್ರಕಾರ ಕ್ಷೇತ್ರದಲ್ಲಿ 2,00,862 ಮತದಾರರು ಇದ್ದು, ಈ ಪೈಕಿ 1,00,701 ಮಹಿಳೆಯರು ಮತದಾನದ ಹಕ್ಕನ್ನು ಹೊಂದಿದ್ದರೆ, 1,00,144 ಪುರುಷ ಮತದಾರರಿದ್ದಾರೆ.[ಲೂಟಿ ಹಣದಿಂದ ಓಟು ಕೇಳಿದರೆ ಸುಮ್ಮನಿರೋಲ್ಲ: ಬಿಎಸ್ ವೈ]
ಇವರಲ್ಲಿ ಯುವ ಮತದಾರರು ಇರುವುದರಿಂದ ಅವರ ಆಲೋಚನೆಗಳು ವಿಭಿನ್ನವಾಗಿರುವುದರಿಂದ ಸ್ವಲ್ಪ ಮಟ್ಟಿಗೆ ಅಚ್ಚರಿಯ ಫಲಿತಾಂಶ ಬಂದರೂ ಬರಬಹುದು. ಮಹದೇವಪ್ರಸಾದ್ ಅವರು ಸ್ಪರ್ಧಿಸಿದ್ದ 2013ರ ಚುನಾವಣೆಯಲ್ಲಿ ಈಗಿನ ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ 7,675 ಮತಗಳ ಅಂತರದಿಂದ ಮಹದೇವ್ ಪ್ರಸಾದ್ ವಿರುದ್ಧ ಸೋಲು ಕಂಡಿದ್ದರು. ಅವತ್ತು ಬಿ.ಎಸ್.ಯಡಿಯೂರಪ್ಪ ಅವರ ಕೆಜಿಪಿಯಿಂದ ಸ್ಪರ್ಧಿಸಿ ಪೈಪೋಟಿ ನೀಡಿದ್ದ ನಿರಂಜನ್ ಕುಮಾರ್ ಅವರು 66,048 ಮತ ಪಡೆದುಕೊಂಡಿದ್ದರೆ ಕಾಂಗ್ರೆಸ್ ನ ಮಹದೇವ್ ಪ್ರಸಾದ್ 73,723 ಮತಗಳನ್ನು ಪಡೆದಿದ್ದರು.[ಇದು ಉಪಚುನಾವಣೆ ದಸರಾ! ಮೈಸೂರು ಹೋಟೆಲುಗಳು ಹೌಸ್ ಫುಲ್]
ಕಳೆದ ಕೆಲವು ಚುನಾವಣೆಗಳನ್ನು ಗಮನಿಸಿದರೆ ಬಿಜೆಪಿ ಅಭ್ಯರ್ಥಿ ನಿರಂಜನಕುಮಾರ್ ಪ್ರಬಲ ಪೈಪೋಟಿಯನ್ನೇ ನೀಡುತ್ತಾ ಬಂದಿರುವುದು ಕಾಣುತ್ತಿದೆ. ಈ ಬಾರಿಯ ಅನುಕಂಪದ ಅಲೆ ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವಪ್ರಸಾದ್ ಗೆ ವರದಾನ ಆದರೂ ಆಗಬಹುದು.
ಲಿಂಗಾಯಿತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಇದು ಇಬ್ಬರು ಅಭ್ಯರ್ಥಿಗಳ ನಡುವೆ ಹಂಚಿಹೋಗುವುದರಿಂದ ಸಣ್ಣಪುಟ್ಟ ಸಮುದಾಯದ ಮತಗಳಷ್ಟೆ ಅಭ್ಯರ್ಥಿಗಳನ್ನು ಕಾಪಾಡಲಿದೆ. ಇಲ್ಲಿ ಏನೇ ಲೆಕ್ಕಾಚಾರ ಮಾಡಿದರೂ ಅಭ್ಯರ್ಥಿಗಳಿಗೆ ಗೆಲುವು ಸುಲಭದ್ದಲ್ಲ ಎಂಬುದಂತೂ ಸತ್ಯ. ಒಟ್ಟಿನಲ್ಲಿ ಏಪ್ರಿಲ್ 13, ಗುರುವಾರದಂದು ಹೊರಬೀಳುವ ಫಲಿತಾಂಶ ಮಾತ್ರವೇ ಗೆಲುವು ಯಾರಿಗೆ ಎಂಬುದನ್ನು ನಿಖರವಾಗಿ ಹೇಳಲಿದೆ.