ಕಳಲೆ ಕೇಶವ ಮೂರ್ತಿ ಕೆಲಸ ಶುರುಮಾಡೋದು ಯಾವಾಗ?
ಫಲಿತಾಂಶ ಬಂದು 15 ದಿನಗಳು ಕಳೆದರೂ ಕಳಲೆ ಕೇಶವಮೂರ್ತಿ ಇನ್ನೂ ಜನಪರ ಕಾಯಕಕ್ಕೆ ಕೈ ಹಾಕಿಲ್ಲ ಎಂಬ ಬೇಸರ ನಂಜನಗೂಡು ಜನತೆಯಲ್ಲಿ ಮನೆಮಾಡಿದೆ.
ಮೈಸೂರು, ಏಪ್ರಿಲ್ 26 : ಇನ್ನೇನು ಗೆಲುವಿನ ಹಾರವನ್ನು ಹೆಗಲೇರಿಸಿಕೊಂಡಾಯಿತು. ಗೆಲ್ಲಿಸಿದ ಮತದಾರ ಪ್ರಭುವಿಗೆ ಅಭಿನಂದನಾ ಸಮಾವೇಶವೂ ಮುಗಿಯಿತು. ಆದರೆ ಫಲಿತಾಂಶ ಬಂದು 15 ದಿನಗಳು ಕಳೆದರೂ ಕಳಲೆ ಕೇಶವಮೂರ್ತಿ ಇನ್ನೂ ಜನಪರ ಕಾಯಕಕ್ಕೆ ಕೈ ಹಾಕಿಲ್ಲ ಎಂಬ ಬೇಸರ ನಂಜನಗೂಡು ಜನತೆಯಲ್ಲಿ ಮನೆಮಾಡಿದೆ.
ಹೌದು, ಏಪ್ರಿಲ್ 13 ರಂದು ಹೊರಬಿದ್ದ ನಂಜನಗೂಡು ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ನ ನೂತನ ಶಾಸಕ ಕಳಲೆ ಕೇಶವಮೂರ್ತಿಯವರ ಮುಂದೆ ಸವಾಲಿನ ಸರಮಾಲೆಗಳೇ ಇವೆ. ಕೇವಲ 14 ತಿಂಗಳ ಅಧಿಕಾರಾವಧಿಯಲ್ಲಿ ಎಲ್ಲ ಸವಾಲುಗಳನ್ನೂ ಸಮರ್ಥವಾಗಿ ಎದುರಿಸಿ, ಕ್ಷೇತ್ರದ ಜನತೆ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಅವರು ಉಳಿಸಿಕೊಳ್ಳಬೇಕಾಗಿದೆ. [ನಂಜನಗೂಡಿನಲ್ಲಿ ಗೆದ್ದ ಕಳಲೆ ಕೇಶವಮೂರ್ತಿ ವ್ಯಕ್ತಿಚಿತ್ರ]
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಟ್ಟಣದ ರಾಷ್ಟ್ರಪತಿ ರಸ್ತೆ, ಬಜಾರ್ ರಸ್ತೆ, ಮಹಾತ್ಮಗಾಂಧಿ ರಸ್ತೆ ಆಧುನಿಕರಣಕ್ಕಾಗಿ 16 ಕೋಟಿ ರೂ.ಗಳು ಮಂಜೂರಾಗಿದೆ ಎಂದು ಹೇಳಲಾಗಿದ್ದು, ಇದರ ಕಾಮಗಾರಿ ನಡೆಯಬೇಕಾಗಿದೆ. ಪಟ್ಟಣದ ಶ್ರೀಕಂಠೇಶ್ವರ ದೇವಾಲಯದ ಪಂಚ ಮಹಾರಥೋತ್ಸವ ಸಾಗಿ ಹೋಗುವ ರಥಬೀದಿಯ ಆಧುನಿಕರಣದ ಜವಾಬ್ದಾರಿಯೂ ಶಾಸಕರ ಮೇಲಿದೆ.
ಮಹಾತ್ಮಗಾಂಧಿ ಹಾಗೂ ರಾಷ್ಟ್ರಪತಿ ರಸ್ತೆಗಳು ಸೇರಿದಂತೆ ರಥಬೀದಿಯಲ್ಲಿ ಈಗಾಗಲೇ ಒಳಚರಂಡಿ ಹಾಗೂ ನಿರಂತರ ನೀರು ಸರಬರಾಜು ಯೋಜನೆಯ ಕೊಳವೆಗಳು ಹಾದುಹೋಗಿದ್ದು, ರಥ ಬೀದಿಯ ಆಧುನಿಕರಣಕ್ಕಾಗಿ ಇವುಗಳನ್ನು ಇಲ್ಲಿಂದ ಬದಲಾಯಿಸಲೇಬೇಕಿದೆ.

ಸವಾಲುಗಳ ಸರಮಾಲೆ
ನಂಜನಗೂಡನ್ನು ಪ್ರವಾಸಿ ಕೇಂದ್ರವಾಗಿಸಬೇಕೆಂಬುದು ಬಹುದಿನದ ಬೇಡಿಕೆ. ಪಟ್ಟಣದ ಒಳಚರಂಡಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಅದರ ವೆಚ್ಚ 25 ಕೋಟಿ ರೂ.ಗಳು ದಾಟಿದ್ದರೂ ಕಾಮಗಾರಿ ಪೂರ್ಣವಾಗಿಲ್ಲ. ಇದನ್ನು ಪೂರ್ಣಗೊಳಿಸಲು 4.5 ಕೋಟಿ ರೂ.ಗಳ ಬೇಡಿಕೆ ಮುಂದಿಟ್ಟಿದ್ದು, ಅದು ಮಂಜೂರಾಗಿದೆ ಎನ್ನಲಾಗಿದೆ. ಈ ಕಾಮಗಾರಿಯ ವ್ಯಾಪ್ತಿ 3008 ಮ್ಯಾನ್ ಹೋಲ್ ಗಳಲ್ಲಿ ಸುಮಾರು 1500 ಕ್ಕೂ ಹೆಚ್ಚು ಮ್ಯಾನ್ ಹೋಲ್ ಗಳು ಕಳಪೆ ಕಾಮಗಾರಿಯಿಂದಾಗಿ ಕುಸಿದು ಬಿದ್ದಿದ್ದು, ಈಗ ಅವುಗಳ ದುರಸ್ತಿ ಮಾಡದೆ ಕಾಮಗಾರಿಯನ್ನು ಚಾಲನೆಗೊಳಿಸುವಂತಿಲ್ಲ.

ನಿರಂತರ ನೀರು ಸರಬರಾಜು ಯೋಜನೆ
2013ರಲ್ಲಿ ಪಾರಂಭವಾಗಿರುವ ನಿರಂತರ ನೀರು ಸರಬರಾಜು ಯೋಜನೆ 2015ರ ಮಾರ್ಚ್ ಗೆ ಪೂರ್ಣಗೊಳ್ಳಬೇಕಿತ್ತು. ಕುಂಟುತ್ತ ನಡೆದ ಕಾಮಗಾರಿಯ ಅವಧಿಯನ್ನು ಈಗಾಗಲೇ 4 ಬಾರಿ ವಿಸ್ತರಿಸಿದ್ದು, ಈಗ 5ನೇ ಬಾರಿಗೆ ಅವಧಿ ವಿಸ್ತರಣೆಗಾಗಿ ಬೇಡಿಕೆ ಇಡಲಾಗಿದೆ. 28.56 ಕೋಟಿ ರೂ. ವೆಚ್ಚದ ಈ ಕಾಮಗಾರಿಗಾಗಿ ಈಗಾಗಲೇ 21 ಕೋಟಿ ರೂ.ಗಳು ಖರ್ಚಾಗಿದ್ದು, ಪಟ್ಟಣದ 4 ವಿಭಾಗಗಳಲ್ಲಿ 1, 2ನೇ ವಿಭಾಗಗಳಿಗೆ ನೀರಿನ ಪ್ರಾರಂಭಿಕ ಚಾಲನೆ ನೀಡಲಾಗಿದೆ. 3ನೇ ವಿಭಾಗದಲ್ಲಿ ಗ್ರಾಮ ಪಂಚಾಯಿತಿ ಹಾಗೂ ನಗರಸಭೆಯ ಮಧ್ಯೆ ಎದ್ದಿರುವ ವಿವಾದ ಹಾಗೆಯೇ ಉಳಿದಿದೆ. ಹಾಗಾಗಿ ನಿರಂತರ ನೀರು ಸರಬರಾಜು ಯಾವಾಗ ಎಂಬ ಸಮಸ್ಯೆ ಕಾಡುತ್ತಿದೆ.[ನೆಗೆದುಬಿದ್ದು ನೆಲ್ಲಿಕಾಯಿಯಾದ ಕರ್ನಾಟಕ ಗುಪ್ತಚರ ವರದಿ]

ಎತ್ತ ಸಾಗಿದೆ ಸಸ್ಯಕಾಶಿ ಯೋಜನೆ
2 ವರ್ಷಗಳ ಹಿಂದೆ ಮುಖ್ಯಮಂತ್ರಿಗಳೇ ಶಂಕುಸ್ಥಾಪನೆ ನೆರವೇರಿಸಿದ ದಕ್ಷಿಣ ಕಾಶಿಯ ಸಸ್ಯ ಕಾಶಿ' ಎಂಬ ಯೋಜನೆ ನೆನೆಗುದಿಗೆ ಬಿದ್ದು ವರ್ಷವೇ ಕಳೆದುಹೋಗಿದೆ. 4 ಕೋಟಿ ರೂ.ಗಳ ವೆಚ್ಚದ ಹೈಟೆಕ್ ಸರ್ಕಾರಿ ಬಸ್ ನಿಲ್ದಾಣದ ಕಾಮಗಾರಿ ಹಣವಿಲ್ಲದೆ ಅರ್ಧಕ್ಕೆ ನಿಂತಿದೆ. ಸರ್ಕಾರ ಕಾಲೇಜು ವಿದ್ಯಾರ್ಥಿನಿಯರ ವಸತಿ ಗೃಹ ಈಗ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಸ್ವಂತ ಕಟ್ಟಡದ ನಿರ್ಮಾಣ, ಸಂಚಾರಿ ಪೊಲೀಸ್ ಠಾಣಾ ಕಟ್ಟಡ ನಿರ್ಮಾಣವಾಗಬೇಕಿದೆ. ಶ್ರೀಕಂಠೇಶ್ವರ ದೇವಸ್ಥಾನದ 2ನೇ ಹಂತದ ಅಭಿವೃದ್ಧಿ ಪೂರ್ಣಗೊಳ್ಳಬೇಕಿದೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ ಮುಖ್ಯಾಂಶಗಳು]

ಕಬಿನಿ ನದಿಯ ಸ್ವಚ್ಛತೆ ಎಂದು?
ಕಪಿಲಾ ನದಿಯ ಸ್ನಾನಘಟ್ಟ ಇಂದು ಕೊಳೆತು ನಾರುತ್ತಿದ್ದು, ಇದರ ಸ್ವಚ್ಛತೆಯೂ ಆಗಬೇಕಿದೆ. ಹುಲ್ಲಹಳ್ಳಿ ಬಳಿಯಿಂದ ಕಪಿಲಾ ನೀರನ್ನು ಎತ್ತಿ ಬಹು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ವರ್ಷದೊಳಗಾದರೂ ಈ ಯೋಜನೆಯ ನೀರನ್ನು ಆಯಾ ಗ್ರಾಮಗಳಿಗೆ ತಲುಪಿಸಬೇಕಾದ ಹೊಣೆಗಾರಿಕೆಯೂ ನೂತನ ಶಾಸಕರ ಹೆಗಲೇರಿದೆ.[ಉಪ ಚುನಾವಣೆ ಫಲಿತಾಂಶದ ಬಗ್ಗೆ ತಕರಾರು ತೆಗೆಯುವಂತೆಯೇ ಇಲ್ಲ]

ಅಧಿಕಾರ ಹೂವಿನ ಹಾದಿಯಲ್ಲ
ಕೇಶವಮೂರ್ತಿರವರ ಪಾಲಿಗೆ ಶಾಸಕತ್ವದ ಅವಧಿ ಉಳಿದಿರುವುದು 14 ತಿಂಗಳು. ಆದರೆ, ಅಧಿಕಾರ ಹೂವಿನ ಹಾದಿಯಲ್ಲ, ಅವರು ಎಷ್ಟರ ಮಟ್ಟಿಗೆ ಜನತೆಯ ನಂಬಿಕೆಯನ್ನು ಉಳಿಸಿಕೊಳ್ಳುತ್ತಾರೆ ಹಾಗೂ ಸರ್ಕಾರ ಅವರಿಂದ ಎಷ್ಟು ಯೋಜನೆಗಳನ್ನು ಪೂರ್ಣಗೊಳಿಸುತ್ತದೆ ಎಂಬುದನ್ನು ಕಾದುನೋಡಬೇಕಿದೆ.[ನಂಜನಗೂಡಲ್ಲಿ ಕಾಂಗ್ರೆಸಿಗೆ ಭರ್ಜರಿ ಗೆಲುವು, ಮುಗ್ಗರಿಸಿದ ಬಿಜೆಪಿ]












Click it and Unblock the Notifications