ಜೆಡಿಎಸ್‌ನಲ್ಲಿದ್ದರೂ ಇಲ್ಲದಂತಿರುವ ಜಿಟಿಡಿ ಮುಂದಿನ ನಡೆ?

ಮೈಸೂರು, ಜುಲೈ 04; ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನದ ಬಳಿಕ ಜೆಡಿಎಸ್ ನಲ್ಲಿದ್ದರೂ ಇಲ್ಲದಂತೆ ಅಂತರ ಕಾಪಾಡಿಕೊಂಡು ಬಂದಿರುವ ಮೈಸೂರಿನ ಪ್ರಭಾವಿ ಒಕ್ಕಲಿಗ ನಾಯಕ, ಮಾಜಿ ಸಚಿವ ಜಿ. ಟಿ. ದೇವೇಗೌಡ ಮುಂದಿನ ನಡೆ ಏನು? ಎಂಬುದೇ ಕುತೂಹಲಕಾರಿಯಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಇದೀಗ ಮೌನ ಮುರಿದಿದ್ದು ಕ್ಷೇತ್ರದ ಮತದಾರರ ಅಭಿಪ್ರಾಯ ಕೇಳಿದ ಬಳಿಕ ಜೆಡಿಎಸ್‌ನಲ್ಲಿ ಉಳಿಯಬೇಕಾ? ಬೇಡವಾ? ಎಂಬುದನ್ನು ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.

ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್ ಪಕ್ಷದಿಂದ ನಿರ್ಗಮಿಸುವ ಸಂದೇಶವನ್ನು ಪಕ್ಷದ ಮುಖಂಡರಿಗೆ ಅರ್ಥಾತ್ ಹೆಚ್. ಡಿ. ದೇವೇಗೌಡ ಹಾಗೂ ಹೆಚ್. ಡಿ. ಕುಮಾರಸ್ವಾಮಿಗೆ ರವಾನಿಸಿದ್ದಾರೆ.

ಕಳೆದ ವಾರ ಜಿ. ಟಿ. ದೇವೇಗೌಡರು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಹಲವು ಬಾರಿ ಹೊಗಳಿದ್ದರು. ಒಂದು ವೇಳೆ ಜೆಡಿಎಸ್ ತೊರೆದರೆ ಜಿ. ಟಿ. ದೇವೇಗೌಡ ಯಾವ ಪಕ್ಷ ಸೇರಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಸೋಲಿಸಿದ್ದ ಜಿಟಿಡಿ

ಸಿದ್ದರಾಮಯ್ಯ ಸೋಲಿಸಿದ್ದ ಜಿಟಿಡಿ

ಹಾಗೆ ನೋಡಿದರೆ ಜಿ. ಟಿ. ದೇವೇಗೌಡರು ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಅವತ್ತಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಗಮನಸೆಳೆದಿದ್ದರು. ತದ ನಂತರ ಜೆಡಿಎಸ್ ಪಕ್ಷದಲ್ಲಿ ಅವರನ್ನು ಮೂಲೆ ಗುಂಪು ಮಾಡಿರುವುದು ಜೆಡಿಎಸ್‌ನಲ್ಲಿ ತಟಸ್ಥರಾಗಲು ಕಾರಣವಾಯಿತು ಎಂದರೆ ತಪ್ಪಾಗಲಾರದು.

ಯಾವ ಪಕ್ಷಕ್ಕೆ ಹೋಗಬೇಕು ಎಂಬ ತೀರ್ಮಾನ

ಯಾವ ಪಕ್ಷಕ್ಕೆ ಹೋಗಬೇಕು ಎಂಬ ತೀರ್ಮಾನ

ಸದ್ಯಕ್ಕೆ ಯಾವುದೇ ಪಕ್ಷದ ನಾಯಕರೊಂದಿಗೆ ಗುರುತಿಸಿಕೊಳ್ಳದೆ, ಸರ್ಕಾರದ ವಿರುದ್ಧವೂ ಟೀಕೆ ಮಾಡದೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿಸಿಕೊಳ್ಳುತ್ತಿರುವ ಜಿ. ಟಿ. ದೇವೇಗೌಡರು 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಮ್ಮ ಚಾಮುಂಡೇಶ್ವರಿ ಕ್ಷೇತ್ರವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಕಾರಣದಿಂದ ಕ್ಷೇತ್ರಕ್ಕೆ ಹೋಗಲಾಗುತ್ತಿಲ್ಲ ಹೀಗಾಗಿ ಅವರು ಮುಂದೆ ಯಾವ ಪಕ್ಷಕ್ಕೆ ಹೋಗಬೇಕು ಎಂಬುದನ್ನು ತೀರ್ಮಾನ ಮಾಡಲು ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಜಿಟಿಡಿ ಚಿತ್ತ ಕಾಂಗ್ರೆಸ್‌ನತ್ತ ಇದೆಯಾ?

ಜಿಟಿಡಿ ಚಿತ್ತ ಕಾಂಗ್ರೆಸ್‌ನತ್ತ ಇದೆಯಾ?

ಜಿ. ಟಿ. ದೇವೇಗೌಡರ ನಡೆನುಡಿ ಗಮನಿಸಿದರೆ ಅವರ ಚಿತ್ತ ಕಾಂಗ್ರೆಸ್‌ನತ್ತ ಇದೆಯಾ? ಎಂಬ ಸಂಶಯ ಕಾಡುವುದಂತು ಸತ್ಯ. ಈ ಹಿಂದೆ ಅವರು ಸಿದ್ದರಾಮಯ್ಯ ಜತೆಗೂ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲದೆ, ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಈ ನಡುವೆ ಮತದಾರರ ಅಭಿಪ್ರಾಯ ಕೇಳದೆ ಬಿಜೆಪಿಗೆ ಹೋಗಿ ಸೋತಿದ್ದೇನೆ ಮತ್ತೆ ಆ ತಪ್ಪು ಮಾಡುವುದಿಲ್ಲ ಎನ್ನುವ ಮೂಲಕ ಬಿಜೆಪಿಯತ್ತ ಮುಖ ಮಾಡಲ್ಲ ಎಂಬುದನ್ನು ಬಹಿರಂಗವಾಗಿಯೇ ಹೇಳಿದ್ದಾರೆ.

ರಾಜಕೀಯ ವಲಯದಲ್ಲಿ ಚರ್ಚೆ ಶುರು

ರಾಜಕೀಯ ವಲಯದಲ್ಲಿ ಚರ್ಚೆ ಶುರು

ಜಿ. ಟಿ. ದೇವೇಗೌಡರು ಜೆಡಿಎಸ್‌ನಲ್ಲಿಯೇ ಉಳಿಯುತ್ತಾರಾ? ಕಾಂಗ್ರೆಸ್‌ಗೆ ಹೋಗುತ್ತಾರಾ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಏನೇ ಆದರೂ ಮುಂದಿನ ಚುನಾವಣೆ ಹೊತ್ತಿಗೆ ಅವರು ಜೆಡಿಎಸ್ ನಲ್ಲಿ ಇರಲ್ಲ ಎಂಬುದು ಅವರ ಮಾತಿನಿಂದಲೇ ಸ್ಪಷ್ಟವಾಗುತ್ತಿದೆ. ಇದುವರೆಗೆ ಜೆಡಿಎಸ್ ಪಕ್ಷದ ಯಾವುದೇ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದೆ ಅಂತರ ಕಾಯ್ದು ಕೊಂಡೇ ಬರುತ್ತಿರುವುದರೊಂದಿಗೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರನ್ನು ಟೀಕಿಸದೆ ಮೌನವಾಗಿದ್ದುಕೊಂಡೇ ತಮ್ಮ ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಿರುವ ಅವರು ತಮ್ಮ ಪುತ್ರ ಹರೀಶ್ ಗೌಡರನ್ನು 2023ರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ತಯಾರಿಯಲ್ಲಿದ್ದಾರೆ. ಆದರೆ ಯಾವ ಕ್ಷೇತ್ರ? ಎಂಬುದು ಮಾತ್ರ ಪಕ್ಕವಾಗಿಲ್ಲ. ಆದರೂ ಕೆ. ಆರ್. ನಗರದಿಂದ ಸ್ಪರ್ಧಿಸುವ ಇಂಗಿತವನ್ನು ಈ ಹಿಂದೆ ಹರೀಶ್ ಗೌಡ ಹೊರಹಾಕಿದ್ದರು.

Recommended Video

    Rockline Venkatesh : ಅಂಬರೀಶ್ ಬಗ್ಗೆ ಮಾತನಾಡೋದಕ್ಕೆ ಅವರು ಯಾರು? | Oneindia Kannada
    ಸಾ. ರಾ. ಮಹೇಶ್ ಎದುರಾಳಿ

    ಸಾ. ರಾ. ಮಹೇಶ್ ಎದುರಾಳಿ

    ಒಂದು ವೇಳೆ ಅದು ನಿಜವೇ ಆದರೆ ಜಿಟಿಡಿ ಚುನಾವಣೆ ಹೊತ್ತಿಗೆ ಪಕ್ಷ ತೊರೆಯುವುದಂತು ದೃಢವಾಗಲಿದೆ. ಏಕೆಂದರೆ ಕೆ. ಆರ್. ನಗರ ಜೆಡಿಎಸ್‌ನ ಭದ್ರಕೋಟೆ ಜತೆಗೆ ಸಾ. ರಾ. ಮಹೇಶ್ ಜೆಡಿಎಸ್ ನಿಂದಲೇ ಸ್ಪರ್ಧಿಸಿ ಗೆಲುವು ಪಡೆಯುತ್ತಾ ಬರುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸಾ. ರಾ. ಮಹೇಶ್ ವಿರುದ್ಧ ಸ್ಪರ್ಧಿಸುವ ಧೈರ್ಯವನ್ನು ಹರೀಶ್ ಗೌಡರು ಮಾಡಬೇಕಾದರೆ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದ ಸೇರ್ಪಡೆಯಿಂದಷ್ಟೆ ಸಾಧ್ಯ ಎಂಬುದನ್ನು ತಳ್ಳಿಹಾಕುವಂತಿಲ್ಲ.

    ಇದೆಲ್ಲದರ ನಡುವೆ ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯತ್ತ ಹೆಚ್ಚಿನ ಗಮನಹರಿಸಿರುವ ಜಿ. ಟಿ. ದೇವೇಗೌಡರು ತಮ್ಮ ಬೆಂಬಲಿಗರನ್ನು ಆಯಕಟ್ಟಿನಲ್ಲಿ ನಿಲ್ಲಿಸಿ, ಗೆಲ್ಲಿಸುವ ಮೂಲಕ ತಳಮಟ್ಟದಿಂದ ತಮ್ಮ ಪರವಾದ ಅಲೆಯನ್ನು ಸೃಷ್ಟಿಸಿ ಮುಂದಿನ ಚುನಾವಣೆಗೆ ಸರ್ವ ರೀತಿಯಲ್ಲಿಯೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದಂತು ಸತ್ಯ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+