ಕಟ್ಟೆಮಳವಾಡಿಯಲ್ಲಿ ಸೃಷ್ಟಿಯಾಗಿದೆ ಜಲಲ ಜಲಧಾರೆ...
ಮೈಸೂರು, ಜುಲೈ 5: ದಕ್ಷಿಣ ಕೊಡಗಿನಲ್ಲಿ ಮುಂಗಾರು ಚೇತರಿಕೆ ಕಂಡಿರುವ ಕಾರಣ ಲಕ್ಷ್ಮಣ ತೀರ್ಥ ನದಿಯಲ್ಲಿ ನೀರಿನ ಪ್ರಮಾಣ ಕೊಂಚಮಟ್ಟಿಗೆ ಏರಿಕೆ ಕಂಡಿದೆ. ಹೀಗಾಗಿ ಹುಣಸೂರು ತಾಲ್ಲೂಕಿನ ಕಟ್ಟೆಮಳವಾಡಿಯಲ್ಲಿರುವ ಅಣೆಕಟ್ಟೆ ಭರ್ತಿಯಾಗಿ ನೀರು ಧುಮುಕುತ್ತಿದ್ದು, ಜಲವೈಭವದ ಸುಂದರ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.
ಮಳೆ ಹಿನ್ನೆಲೆಯಲ್ಲಿ ಇರ್ಪುವಿನಲ್ಲಿ ಜಲಧಾರೆ ಮೈ ತುಂಬಿಕೊಂಡಿದ್ದು, ಅಲ್ಲಿಂದ ಹರಿದು ಮುಂದೆ ಸಾಗುವ ಲಕ್ಷ್ಮಣ ತೀರ್ಥ ನದಿ ಕಟ್ಟೆಮಳವಾಡಿಯನ್ನು ತಲುಪುವ ವೇಳೆಗೆ ಹಲವು ಉಪನದಿಗಳನ್ನು ತನ್ನೊಡಲಿಗೆ ಸೇರಿಸಿಕೊಳ್ಳುತ್ತದೆ.
ಕೃಷಿ ಉದ್ದೇಶಕ್ಕೆ ಕಟ್ಟೆಮಳವಾಡಿಯಲ್ಲಿ ಪುಟ್ಟದಾದ ಅಣೆಕಟ್ಟನ್ನು ಕಟ್ಟಲಾಗಿದ್ದು, ಅದೂ ತುಂಬಿ ಹರಿಯುತ್ತಿದೆ. ಈ ಸುಂದರ ದೃಶ್ಯವನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ. ಜೂನ್ ಮೊದಲ ವಾರದಿಂದಲೇ ದಕ್ಷಿಣ ಕೊಡಗು ಮತ್ತು ಹುಣಸೂರು ಭಾಗದಲ್ಲಿ ಮಳೆ ಸುರಿಯುತ್ತಿರುವುದರಿಂದ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ.

ಕಟ್ಟೆಮಳಲವಾಡಿ ಅಣೆಕಟ್ಟೆ ಭರ್ತಿಯಾಗಿರುವುದರಿಂದ ಕಿರಸೊಡ್ಲು, ಅಗ್ರಹಾರ, ಉಂಡವಾಡಿ ಮುಂತಾದ ಗ್ರಾಮಗಳ ಸುಮಾರು 25 ಸಾವಿರ ಎಕರೆಗೂ ಹೆಚ್ಚು ರೈತರ ಜಮೀನಿಗೆ ನೀರು ಒದಗಲಿದೆ.
ಇನ್ನೊಂದೆಡೆ ಲಕ್ಷ್ಮಣತೀರ್ಥ ನದಿಗೆ ಹುಣಸೂರು ಪಟ್ಟಣದ ತ್ಯಾಜ್ಯ ನೀರು ಸೇರುತ್ತಿರುವುದರಿಂದ ನೀರು ಹರಿಯದೆ ನಿಂತು ದುರ್ವಾಸನೆ ಬೀರುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಕೊಳಚೆ ನೀರೆಲ್ಲಾ ಹರಿದು ಹೋಗುತ್ತಿದ್ದು, ದುರ್ವಾಸನೆ ತುಂಬಿಕೊಂಡಿದೆ. ಹೀಗಾಗಿ ಜನ ಮೂಗು ಮುಚ್ಚಿಕೊಂಡು ನಡೆಯುವಂತಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಂದು ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದರೆ ನದಿ ಶುಚಿಯಾಗಲಿದೆ.
ಲಕ್ಷ್ಮಣತೀರ್ಥ ನದಿ ನೀರು ಕಟ್ಟೆಮಳವಾಡಿ ಅಣೆಕಟ್ಟೆ ಮೇಲೆ ಹರಿದು ಹೋಗುವ ವೇಳೆ ಮೀನುಗಳು ಕಾಣಿಸಿಕೊಳ್ಳುತ್ತಿದ್ದು, ಇದನ್ನು ಹಿಡಿಯಲು ಕೆಲವರು ಹರಸಾಹಸ ಪಡೆಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಈ ಪೈಕಿ ಕೆಲವರು ಹಳೆ ಕಾಲದ ಬಲೆ ಮತ್ತು ಬಿದಿರಿನ ಕುಳಿಗಳನ್ನು ಬಳಸಿ ಮೀನು ಹಿಡಿದು ಒಂದಷ್ಟು ಸಂಪಾದನೆ ಮಾಡಿಕೊಳ್ಳುತ್ತಿದ್ದಾರೆ.
ನೀರು ಹರಿಯುವ ಈ ಸುಂದರ ದೃಶ್ಯವನ್ನು ಮೊಬೈಲ್ ಮೂಲಕ ಸೆರೆಹಿಡಿಯಲು ಜನ ಮುಗಿ ಬೀಳುತ್ತಿದ್ದಾರೆ.












Click it and Unblock the Notifications