ನಂಜನಗೂಡು ಪಾರ್ಲೆಜಿ ಕಾರ್ಖಾನೆಯಲ್ಲಿ ವಾಟರ್ ಟ್ಯಾಂಕ್ ಸಿಡಿದು ಸಾವು
ನಂಜನಗೂಡು, ಜುಲೈ 12 : ತಾಲೂಕಿನ ಹೊರವಲಯದಲ್ಲಿರುವ ತಾಂಡ್ಯ ಕೈಗಾರಿಕಾ ಪ್ರದೇಶಕ್ಕೆ ಸೇರಿದ ಅಡಕನಹಳ್ಳಿ ಕೈಗಾರಿಕಾ ವಲಯದಲ್ಲಿರುವ ಪಾರ್ಲೆಜಿ ಆಗ್ರೋ ಪ್ರೈವೆಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ವಾಟರ್ ಟ್ಯಾಂಕ್ ಸಿಡಿದು, ಒಬ್ಬ ಕಾರ್ಮಿಕ ಮೃತ ಪಟ್ಟು, ಐವರು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.
ಪಾರ್ಲೆಜಿ ಬಿಸ್ಕೆಟ್ ತಯಾರಿಕೆ ಕಾರ್ಖಾನೆಯಲ್ಲಿ ಕೆಲವು ವರ್ಷಗಳಿಂದಲೂ ಹಲವು ಕಾಮಗಾರಿಗಳು ನಡೆಯುತ್ತಿದ್ದು, ಬಿಹಾರಿ ಮೂಲದ ವೇದ ಇಂಜಿನಿಯರಿಂಗ್ ವರ್ಕ್ಸ್ ಕಂಟ್ರಾಕ್ಟ್ ನ ಏಜೆಂಟ್ ಸಂಸ್ಥೆಯಿಂದ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ಕರೆಯಿಸಿ, ಅವರಿಂದಲೇ ಕಾಮಗಾರಿ ನಡೆಸಲಾಗುತ್ತಿತ್ತು.
ಲಾರಿ ಹಿಂದಕ್ಕೆ ತೆಗೆಯುವಾಗ ಬೈಕ್ ಗೆ ಡಿಕ್ಕಿಯಾಗಿ ಅಣ್ಣ -ತಂಗಿ ಸಾವು
ಬುಧವಾರ ರಾತ್ರಿ 7.30ರ ಸಮಯದಲ್ಲಿ ಕಾರ್ಖಾನೆಯಲ್ಲಿದ್ದ ಡೊಡ್ಡ ವಾಟರ್ ಟ್ಯಾಂಕ್ ಆಕಸ್ಮಿಕವಾಗಿ ಸಿಡಿದು, ಬಿಹಾರ ಮೂಲದ ಅರುಣಕುಮಾರಪ್ರಸಾದ್ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ. ಆರ್.ಆಸ್ಪತ್ರೆಗೆ ರವಾನಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಅಭಯ್, ಪ್ರದ್ಯುಮ್ನ ಕುಮಾರ್, ಅರ್ಜುನ್, ಸುಮಿತ್ ಕುಮಾರ್ ಅವರನ್ನು ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಖಾನೆ ಮಾಲೀಕರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪೊಲೀಸರು ಕೇಸು ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.