ಮೈಸೂರು: ಸರಳ ಸಜ್ಜನ ಪತ್ರಕರ್ತ ಕೃಷ್ಣ ವಟ್ಟಂ ವಿಧಿವಶ
ಮೈಸೂರು, ಆಗಸ್ಟ್ 12: ಹಿರಿಯ ಹಾಗೂ ಸರಳ ಸಜ್ಜನ ಪತ್ರಕರ್ತ ಕೃಷ್ಣ ವಟ್ಟಂ ( 83 ವರ್ಷ) ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಕೃಷ್ಣ ವಟ್ಟಂ ಅವರು ಕೇವಲ ಕಿರಿಯ ಪತ್ರಕರ್ತರಿಗೆ ಮಾತ್ರವಲ್ಲದೆ, ಮೂರು ತಲೆಮಾರಿನ ರಾಜಕಾರಣಿಗಳಿಗೆ ಮಾರ್ಗದರ್ಶಿಯಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂತಾಪ ಸಂದೇಶದಲ್ಲಿ ಹೇಳಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ ಕೃಷ್ಣ ವಟ್ಟಂ ಅವರನ್ನು ಜೆ.ಎಸ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ ಕಮಲಮ್ಮ, ಪುತ್ರಿಯರಾದ ಸರಸ್ವತಿ, ಪಾರ್ವತಿ ಹಾಗೂ ಪುತ್ರ ಶಾಮ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
1933 ರಲ್ಲಿ ಬಳ್ಳಾರಿಯಲ್ಲಿ ಶ್ಯಾಮರಾಯರ ಪುತ್ರನಾಗಿ ಜನಿಸಿದ ಇವರು ಸುಮಾರು 60 ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಪತ್ರಿಕಾ ರಂಗಕ್ಕೆ ಕಾಲಿರಿಸಿದ ಇವರು ಬೆಂಗಳೂರು, ಮೈಸೂರಿನಲ್ಲಿ ಕಾರ್ಯನಿರ್ವಹಿಸಿದ್ದರು.
ನಂತರ ಕನ್ನಡಿಗರ ಪ್ರಜಾನುಡಿ, ಮೈಸೂರು ಮೇಲ್ ಪತ್ರಿಕೆ ಸಂಪಾದಕರಾಗಿ ಹಾಗೂ ಖಾಸಗಿ ಸುದ್ದಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದರು. ಇವರಿಗೆ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿ ಸಂಘದ ಏಳಿಗೆಗೆ ದುಡಿದಿದ್ದರು. ನೂರಾರು ಮಂದಿ ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದರು.
ಅಂತಿಮ ದರ್ಶನ ಪಡೆದ ಗಣ್ಯರು: ಮೃತರ ನಿವಾಸಕ್ಕೆ ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು ಮತ್ತು ದಿನ ಪತ್ರಿಕೆಯ ಸಂಪಾದಕರು, ಪತ್ರಕರ್ತರು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್, ಚಲನಚಿತ್ರ ನಟ ಪ್ರಕಾಶ್ ರೈ, ಶಾಸಕರಾದ ವಾಸು, ಎಂ ಕೆ ಸೋಮಶೇಖರ್, ಮೇಯರ್ ಲಿಂಗಪ್ಪ, ಮಾಜಿ ಸಚಿವ ರಾಮದಾಸ್, ನಗರಪಾಲಿಕೆ ಜಿ.ಪಂ ಸದಸ್ಯರು, ರಾಜಕಾರಣಿಗಳು ಸೇರಿದಂತೆ ನೂರಾರು ಮಂದಿ ತೆರಳಿ ಅಂತಿಮ ನಮನ ಸಲ್ಲಿಸಿದರು.
ಸಿಎಂ ಸಿದ್ದರಾಮಯ್ಯರಿಂದ ಸಂತಾಪ: ಕೃಷ್ಣ ವಟ್ಟಂ ಅವರ ಮನೆಗೆ ತೆರಳಿ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಮೇಲೆ ಮಾತನಾಡಿದ ಸಿದ್ದರಾಮಯ್ಯ, ಮೈಸೂರಿನಲ್ಲಿ ಪತ್ರಕರ್ತರಾಗಿ ಆರು ದಶಕಗಳ ಕಾಲ ಸೇವೆ ಸಲ್ಲಿಸಿ, ಸಾಂಸ್ಕೃತಿಕ ನಗರಿಯ ಅವಿಭಾಜ್ಯ ಅಂಗವಾಗಿದ್ದ ಕೃಷ್ಣ ವಟ್ಟಂ ಅವರು ಕೇವಲ ಕಿರಿಯ ಪತ್ರಕರ್ತರಿಗೆ ಮಾತ್ರವಲ್ಲದೆ, ಮೂರು ತಲೆಮಾರಿನ ರಾಜಕಾರಣಿಗಳಿಗೆ ಮಾರ್ಗದರ್ಶಿಯಾಗಿದ್ದರು ಎಂದು ಹೇಳಿದರು.
ಕ್ಯಾನ್ಸರ್ ನಿಂದ ಬಳಲುತ್ತಿದ್ದರೂ, ವೃತ್ತಿಗೆ ಚ್ಯುತಿ ಬಾರದೆ ಕರ್ತವ್ಯ ನಿರ್ವಹಿಸಿದ ಕೃಷ್ಣ ವಟ್ಟಂ ತಮ್ಮ 25 ವರ್ಷಗಳ ಹೋರಾಟವನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದರು. ಮೈಸೂರು ಅಭಿವೃದ್ಧಿಯ ತುಡಿತ ಅವರ ನಾಡಿ ಮಿಡಿತದಲ್ಲಿ ಮಿಳಿತವಾಗಿತ್ತು. ಕೃಷ್ಣ ವಟ್ಟಂ ಅವರ ನಿಧನದಿಂದ ತಾವು ಆಪ್ತ ಮಿತ್ರನೋರ್ವನನ್ನು ಕಳೆದು ಕೊಂಡಂತಾಗಿದೆ ಎಂದರು.
ಆರ್ ಲಿಂಗಪ್ಪ -ಮಹಾಪೌರರು: ಕೃಷ್ಣವಟ್ಟಂ ನಿಧನ ಆಘಾತ ತಂದಿದೆ. ಹಿರಿಯ ಮಹಾನ್ ಚೇತನರನ್ನು ಕಳೆದುಕೊಂಡ ಪತ್ರಿಕಾರಂಗ ಅನಾಥವಾಗಿದೆ. ಇದರಿಂದ ವೈಯಕ್ತಿಕವಾಗಿ ನನಗೆ ದು:ಖವಾಗಿದೆ. ಇವರ ಆತ್ಮಕ್ಕೆ ಚಿರಶಾಂತಿಯನ್ನು ಮತ್ತು ಮೃತರ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ನೀಡಲೆಂದು ಪ್ರಾರ್ಥಿಸುತ್ತೇನೆ.