ಜಂಬೂಸವಾರಿ ನಡೆಯಲು ಕೆಲವೇ ಕ್ಷಣಗಳಿರುವಾಗ ವಾಟಾಳ್ ನಾಗರಾಜ್ ಪ್ರತಿಭಟನೆ
ಮೈಸೂರು, ಅಕ್ಟೋಬರ್ 26: ವಿಜೃಂಭಣೆಯಿಂದ ದಸರಾ ಜಂಬೂಸವಾರಿಯನ್ನು ನಡೆಸದ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಮೈಸೂರಿನ ಅಶೋಕ ರಸ್ತೆಯ ಪುರಭವನದ ಎದುರು ವಿನೂತನ ಚಳವಳಿ ನಡೆಸಲು ಮುಂದಾದ ಕನ್ನಡ ಚಳವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, "ರಾಜ್ಯ ಸರ್ಕಾರ ಜಂಬೂಸವಾರಿಯನ್ನು ಅರಮನೆ ಒಳಗೆ ಬಂಧಿಸಿದೆ. ಚಾಮುಂಡಿ ತಾಯಿಯನ್ನು ಯಡಿಯೂರಪ್ಪ ಅವರ ಸರ್ಕಾರ ಬಂಧಿಸಿದೆ. ನಾನು ಸಾರೋಟು, ಚಾಮುಂಡಿ ಭಾವಚಿತ್ರ ಹಾಗೂ ವಾದ್ಯಗಳೊಂದಿಗೆ ವಿನೂತನ ರೀತಿಯಲ್ಲಿ ದಸರಾ ಆಚರಿಸಿ ಮೈಸೂರು ಪರಂಪರೆ ಉಳಿಸಲು ಮಾಡಿದ ಪ್ರಯತ್ನಕ್ಕೆ ಅಡ್ಡಿಪಡಿಸಿದ್ದಾರೆ. ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದರೂ ಬುದ್ಧಿ ಬಂದಿಲ್ಲʼ ಎಂದು ಕಿಡಿಕಾರಿದರು.
ಯಡಿಯೂರಪ್ಪ ಅವರೇ ನಿಮ್ಮ ದರ್ಪ ಬಿಡಿ, ನಾನು ನಿಮ್ಮ ನೀತಿ ವಿರೋಧಿಸುತ್ತೇನೆ. ನಾನು ಪೊಲೀಸ್ ಪರ. ನಿಮಗೆ ಪೊಲೀಸ್ ಬಗ್ಗೆ ಗೌರವ ಮತ್ತು ಪ್ರೀತಿ ಇದ್ದರೆ ಔರಾದ್ಕರ್ ವರದಿ ಜಾರಿ ಮಾಡಿ. ನೀವು ಅಧಿಕಾರದಿಂದ ಕೆಳಗೆ ಇಳಿದರೆ ನಿಮ್ಮನ್ನು ಒಂದು ಬೀದಿ ನಾಯಿ ಸಹ ಕೇಳುವುದಿಲ್ಲ. ಸಾರ್ವಜನಿಕರಿಗೆ ಚಾಮುಂಡಿ ಹಬ್ಬ ಮಾಡಲು ಅವಕಾಶ ನೀಡದಿರುವುದು ತೀವ್ರ ಖಂಡನೀಯ ಎಂದರು.

"ಅರಮನೆ ಒಳಗೆ ಜಂಬೂಸವಾರಿ ವೀಕ್ಷಿಸಲು ಅವಕಾಶ ನೀಡಿರುವ 300 ಜನರಿಗೆ ಕೊರೊನಾ ಬರುವುದಿಲ್ಲವಾ? ಸರ್ಕಾರ ಇಂದು 1 ಲಕ್ಷ ಜನರಿಗೆ ಸೂಕ್ತ ಮುಂಜಾಗ್ರತೆ ವಹಿಸಿ ಜಂಬೂಸವಾರಿ ವೀಕ್ಷಿಸಲು ಅವಕಾಶ ನೀಡಬಹುದಿತ್ತು. ರಾಜ್ಯದಲ್ಲಿ ದಿನ ಸಾವಿರಾರು ಜನರು ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದಾರೆ. ಕೋವಿಡ್ ನಿಯಂತ್ರಣ ಮಾಡಲು ಸರ್ಕಾರ ವಿಫಲವಾಗಿದೆʼ ಎಂದು ಹರಿಹಾಯ್ದರು.

ಉತ್ತರ ಕರ್ನಾಟಕ ಇಂದು ನೆರೆ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂ. ಪರಿಹಾರ ಮಾಡಬೇಕು. ಈಶಾನ್ಯ ಕ್ಷೇತ್ರದ ಶಿಕ್ಷಕರು ನನಗೆ ಬೆಂಬಲವನ್ನು ನೀಡುವರು ಎಂದು ಹೇಳುತ್ತಾ, ಜನಪ್ರತಿನಿಧಿಗಳಿಗೆ ಧಿಕ್ಕಾರ ಕೂಗಿದರು. ಮೈಸೂರು ನಗರದ ಲಷ್ಕರ್ ಠಾಣೆ ಪೊಲೀಸರು ಮುಂಜಾಗ್ರತೆ ವಹಿಸಿ ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದರು.












Click it and Unblock the Notifications