ಪರಿಷತ್ ಅಖಾಡಕ್ಕಿಳಿದ ವಾಟಾಳ್ ನಾಗರಾಜ್
ಬೆಂಗಳೂರು, ಡಿಸೆಂಬರ್ 09 : ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ವಿಧಾನಪರಿಷತ್ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ಮೈಸೂರು-ಚಾಮರಾಜನಗರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಡೋಲು ಬಾರಿಸಿಕೊಂಡು ಬಂದು ಮಂಗಳವಾರ ವಾಟಾಳ್ ನಾಗರಾಜ್ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ. 'ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಒತ್ತಾಯದಿಂದಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ' ವಾಟಾಳ್ ಹೇಳಿದ್ದಾರೆ. ['ಪರಿಷತ್ ಚುನಾವಣೆ ಸೋಲಿನ ಹೊಣೆ ಹೊರುವುದಿಲ್ಲ']

ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್ ಅವರು, 'ಮುಖ್ಯಮಂತ್ರಿ, ಸಚಿವರು, ಶಾಸಕರಿಗೆ ಸಂಬಳವಿದೆ. ಆದರೆ, ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಂಭಾವನೆಯಿದ್ದು, ಇದನ್ನು ತಪ್ಪಿಸಿ ಅವರಿಗೂ ಸಂಬಳ ಸಿಗುವಂತೆ ಮಾಡಲು ಪ್ರಯತ್ನ ನಡೆಸುತ್ತೇನೆ' ಎಂದರು. [ಡಿಸೆಂಬರ್ 27ರ ವಿಧಾನಪರಿಷತ್ ಚುನಾವಣೆ ಬಗ್ಗೆ ತಿಳಿಯಿರಿ]
'ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುವಂತೆ ನನಗೆ 3 ಸಾವಿರಕ್ಕೂ ಅಧಿಕ ಕರೆಗಳು ಬಂದಿವೆ. ನಾನು ಸಹ ಗ್ರಾಮ ಪಂಚಾಯಿತಿ ಸದಸ್ಯರಿಗೆ ಪತ್ರ ಬರೆದು ಅವರ ಅಭಿಪ್ರಾಯ ಸಂಗ್ರಹಣೆ ಮಾಡಿದ ಬಳಿಕ, ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ' ಎಂದು ಹೇಳಿದರು.
'ವಿಧಾನಪರಿಷತ್ ಚುನಾವಣೆಗೆ ಗ್ರಾಮ ಪಂಚಾಯಿತಿಗಳು ತಾಯಿ ಬೇರು. ಆದರೆ, ಇಂದು ಗ್ರಾಮ ಪಂಚಾಯಿತಿಗಳಿಗೆ ಸೂಕ್ತವಾದ ಅನುದಾನ ಬಿಡುಗಡೆ ಆಗುತ್ತಿಲ್ಲ. ಆದ್ದರಿಂದ, ಅಭಿವೃದ್ಧಿ ಕುಂಠಿತವಾಗುತ್ತಿದೆ' ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.
ಕಣದಲ್ಲಿರುವ ಇತರ ಅಭ್ಯರ್ಥಿಗಳು : ಜೆಡಿಎಸ್ - ಸಂದೇಶ್ ನಾಗರಾಜು, ಬಿಜೆಪಿ - ರಘು, ಕಾಂಗ್ರೆಸ್ ಆರ್.ಧರ್ಮಸೇನ. ಪಕ್ಷೇತರ ಅಭ್ಯರ್ಥಿಗಳು : ಹೆಚ್.ಡಿ. ದೇವೇಶ್, ಅಕೀಲ್ ಅಹಮ್ಮದ್, ಆರ್. ರವೀಂದ್ರಕುಮಾರ್, ಕೆ.ಎಂ.ಪರಶಿವಮೂರ್ತಿ ಇತರರು.












Click it and Unblock the Notifications