ಡಿಕೆಶಿಯನ್ನು ರಾಜಕೀಯವಾಗಿ ಮುಗಿಸಲು ಇಡಿ ಬಳಕೆ: ಸಿದ್ದರಾಮಯ್ಯ ವಾಗ್ದಾಳಿ
ಮೈಸೂರು, ಸೆಪ್ಟೆಂಬರ್ 1: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಇಡಿ ಬಳಕೆ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರನ್ನು ರಾಜಕೀಯದಿಂದಲೇ ದೂರ ಇಡುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು.
ಶ್ರೀನಿವಾಸಗೌಡ ಅವರಿಗೆ 5 ಕೋಟಿ ರೂ ನೀಡಲು ಬಂದಿದ್ದ ವಿಚಾರ ಕುರಿತು ಮಾತನಾಡಿ, ಸದನದಲ್ಲೇ ಎಸ್ಆರ್ ವಿಶ್ವನಾಥ್, ಅಶ್ವತ್ಥ ನಾರಾಯಣ, ಸಿಪಿ ಯೋಗೇಶ್ವರ್ ಅವರ ವಿರುದ್ಧ ಶ್ರೀನಿವಾಸಗೌಡ ದೂರು ನೀಡಿದ್ದರು. ಆದರೆ ಅವರ ವಿರುದ್ಧ ಮಾತ್ರ ಯಾಕೆ ತನಿಖೆ ನಡೆಸಿಲ್ಲ ಎಂದು ಪ್ರಶ್ನಿಸಿದರು.

ಕಾನೂನು ಎಲ್ಲರಿಗೂ ಒಂದೇ ಆಗಿರಬೇಕಲ್ಲವೇ, ಕಿರುಕುಳ ಕೊಟ್ಟು ಮಾನಸಿಕವಾಗಿ ಕುಗ್ಗಿಸುವ ಕೆಲಸವಾಗುತ್ತಿದೆ. ಕಾಂಗ್ರೆಸ್ ನಾಯಕರನ್ನು ಸೆಲೆಕ್ಟ್ ಮಾಡಿ ತನಿಖೆ ಮಾಡುತ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸರ್ಕಾರ ಇದ್ದರೆ ತಾನೇ ಟೇಕ್ ಆಫ್ ಆಗೋದು, ಕಳೆದ 20 ದಿನಗಳಿಂದ ಯಡಿಯೂರಪ್ಪ ಇದ್ದರು ಈಗ 17 ಸಚಿವರು ಸೇರ್ಪಡೆಯಾಗಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ಎಂಟಿಬಿ ನಾಗರಾಜ್ ನಮ್ಮ ಜೊತೆ ಇದ್ದು ನಮಗೇ ದ್ರೋಹ ಮಾಡಿದರು, ಎಲ್ಲದಕ್ಕೂ ಸಿದ್ದರಾಮಯ್ಯ ಎನ್ನುತ್ತಿದ್ದ ನಾಗರಾಜ್ ಈಗ ಟೀಕೆ ಮಾಡುವ ಹಂತಕ್ಕೆ ಬಂದು ನಿಂತಿದ್ದಾರೆ ಎಂದು ಹೇಳಿದರು.












Click it and Unblock the Notifications