ಚಾಮುಂಡಿಬೆಟ್ಟದಲ್ಲಿ ಜನಸಾಗರದ ನಡುವೆ ಅದ್ದೂರಿಯಾಗಿ ನಡೆದ ಶ್ರೀ ಚಾಮುಂಡೇಶ್ವರಿ ಮಹಾರಥೋತ್ಸವ
Recommended Video

ಮೈಸೂರು, ಅಕ್ಟೋಬರ್. 23: ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ಮಹಾರಥೋತ್ಸವ ಜನಸಾಗರದ ನಡುವೆ ಅದ್ಧೂರಿಯಾಗಿ ನಡೆಯಿತು. ರಥೋತ್ಸವದಲ್ಲಿ ಯದುವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ಜಿ.ಟಿ.ದೇವೇಗೌಡರು ಭಾಗವಹಿಸಿದ್ದರು.
ಆಶ್ವಯುಜ ಶುಕ್ಲ ಚತುರ್ದಶಿ ಉತ್ತರಭಾದ್ರ ದಿನವಾದ ಇಂದು ಮಂಗಳವಾರ ಮುಂಜಾನೆಯೇ 8.10 ರಿಂದ 8.10ಕ್ಕೆ ಶುಭ ವೃಶ್ಚಿಕ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಯ ರಥಾರೋಹಣ ನಡೆಯಿತು.ಇದಕ್ಕೂ ಮುನ್ನ ತೇರಡಿಯಲ್ಲಿ ನಡೆದ ಮಂಟಪೋತ್ಸವದಲ್ಲಿ ಯದುವೀರ್ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು.
ಬೆಳಗ್ಗೆಯಿಂದಲೇ ನೆರೆದಿದ್ದ ಜನಸ್ತೋಮ ರಥ ಚಲಿಸುತ್ತಿದ್ದಂತೆ ಹರ್ಷೋದ್ಘಾರದಿಂದ ಜೈಕಾರ ಹಾಕಿದರು. ಪ್ರಧಾನ ಆಗಮಿಕ ಶಶಿಶೇಖರ ದೀಕ್ಷಿತ್ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ರಥೋತ್ಸವ ಆರಂಭವಾಗುತ್ತಿದ್ದಂತೆ ಕುಶಾಲತೋಪು ಸಿಡಿಸಿ ಗೌರವ ಅರ್ಪಿಸಲಾಯಿತು. ಪೊಲೀಸರು 21 ಸುತ್ತು ಕುಶಾಲತೋಪು ಸಿಡಿಸಿದರು.
ಮಂಗಳವಾದ್ಯ, ನಂದಿಧ್ವಜ, ಜಾನಪದ ತಂಡಗಳು, ಪೊಲೀಸ್ ವಾದ್ಯ ವೃಂದಗಳೊಂದಿಗೆ ಮಹಾರಥ ದೇವಾಲಯದ ಸುತ್ತ ಒಂದು ಸುತ್ತು ಹಾಕಿತು. ಇಲ್ಲಿ ಅಕ್ಟೋಬರ್.28 ರವರೆಗೆ ನಡೆಯಲಿರುವ ಪೂಜಾ ಕಾರ್ಯಕ್ರಮಗಳ ವಿವರಗಳನ್ನು ಕೊಡಲಾಗಿದೆ...

ಸಂಜೆ ಸಿಂಹವಾಹನೋತ್ಸವ
ಅಂದಹಾಗೆ ರಥೋತ್ಸವ ನೋಡಲು ಜನಸಾಗರವೇ ಹರಿದು ಬಂದಿತ್ತು. ಸಹಸ್ರಾರು ಭಕ್ತರು ಮಹಾರಥೋತ್ಸವಕ್ಕೆ ಸಾಕ್ಷಿಯಾದರು. ಇನ್ನು ಇಂದು ಸಂಜೆ ಸಿಂಹವಾಹನೋತ್ಸವ, ಹಂಸವಾಹನೋತ್ಸವ ಹಾಗೂ ಮಂಟಪೋತ್ಸವ ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅ.28ರಂದು ಮುಡಿ ಉತ್ಸವ
ಅಕ್ಟೋಬರ್ 24ರಂದು ನಾಳೆ ಅಶ್ವಯುಜ ಪೂರ್ಣಿಮಾ ರೇವತಿ ನಕ್ಷತ್ರ ಅಶ್ವಾರೋಹಣ, ಅಕ್ಟೋಬರ್ 26ರಂದು ಸಂಜೆ ಪಂಚೋಪಚಾರ ಪೂಜೆ, ಕೈಲಾಸ ವಾಹನೋತ್ಸವ, ಅಕ್ಟೋಬರ್ 27ರಂದು ಮಹಾಭಿಷೇಕ, ಸಿಂಹವಾಹನ, ಮಂಟಪೋತ್ಸವ ಹಾಗೂ ಅಕ್ಟೋಬರ್ 28ರಂದು ಸಂಜೆ ಮುಡಿ ಉತ್ಸವ ನೆರವೇರಲಿದೆ.

ಚಾಮುಂಡೇಶ್ವರಿ ದೇವಿಗೆ ವಸಂತ ಪೂಜೆ
ಅಕ್ಟೋಬರ್ 25ರಂದು ಬೆಳಗ್ಗೆ ಚಾಮುಂಡೇಶ್ವರಿ ದೇವಿಗೆ ವಸಂತ ಪೂಜೆ, ಆವಭೃತ ತೀರ್ಥಸ್ನಾನ, ಮಂಟಪೋತ್ಸವ, ಸಾಯಂಕಾಲ 7 ಗಂಟೆಗೆ ತೆಪ್ಪೋತ್ಸವ ಮತ್ತು ಆಂದೋಳಿಕಾ ರೋಹಣ, ಧ್ವಜಾರೋಹಣ ಧಾರ್ಮಿಕ ಕೈಂಕರ್ಯವನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಕ್ತಾದಿಗಳಿಗೆ ಸಕಲ ವ್ಯವಸ್ಥೆ
ಧಾರ್ಮಿಕ ದತ್ತಿ ಇಲಾಖೆ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದ ವತಿಯಿಂದ ತಾಯಿ ಚಾಮುಂಡೇಶ್ವರಿ ಮಹಾ ರಥೋತ್ಸವ ಮತ್ತು ತೆಪ್ಪೋತ್ಸವಕ್ಕೆ ಸಕಲ ಸಿದ್ಧತೆ ಮಾಡಲಾಗಿದ್ದು, ಈ ಕೈಂಕರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುವ ನಿರೀಕ್ಷೆ ಇರುವುದರಿಂದ ಸಕಲ ವ್ಯವಸ್ಥೆ ಮಾಡಲಾಗುತ್ತಿದೆ.












Click it and Unblock the Notifications