ತಂಬಾಕು ಬ್ಯಾರನ್ಗೆ ಬೆಂಕಿ, ರೈತನಿಗೆ ಭಾರೀ ನಷ್ಟ
ಮೈಸೂರು, ಜುಲೈ 29 : ತಂಬಾಕು ಹದ ಮಾಡುತ್ತಿದ್ದ ಬ್ಯಾರನ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಲಕ್ಷಾಂತರ ರು. ಮೌಲ್ಯದ ತಂಬಾಕು ನಾಶವಾದ ಘಟನೆ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕಚುವಿನಹಳ್ಳಿಯಲ್ಲಿ ನಡೆದಿದೆ.
ಅಲ್ಲಿನ ನಿವಾಸಿ ತಂಬಾಕು ಬೆಳೆಗಾರ ಶಾಂತೇಗೌಡ ಎಂಬುವರೇ ಬೆಂಕಿ ಅವಘಡದಿಂದ ಲಕ್ಷಾಂತರ ರು. ಮೌಲ್ಯದ ತಂಬಾಕು ನಾಶ ಮಾಡಿಕೊಂಡವರು. ಶಾಂತೇಗೌಡ ಅವರು ತಮಗೆ ಸೇರಿದ ಸಿಂಗಲ್ ಬ್ಯಾರನ್ನಲ್ಲಿ ಹೊಗೆಸೊಪ್ಪು ಹದಗೊಳಿಸುತ್ತಿದ್ದರು.

ಆದರೆ ಮಧ್ಯರಾತ್ರಿಯಲ್ಲಿ ಇದ್ದಕ್ಕಿದ್ದಂತೆ ಬ್ಯಾರನ್ನಲ್ಲಿ ಬೆಂಕಿ ಹತ್ತಿ ಉರಿಯತೊಡಗಿದೆ. ಇದನ್ನು ನೋಡಿದ ಗ್ರಾಮಸ್ಥರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿ ಬೆಂಕಿ ಆರಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿ ಹತ್ತಿ ಉರಿದಿದ್ದರಿಂದ ಹದಗೊಳಿಸಲು ಹಾಕಿದ್ದ ತಂಬಾಕು ನಾಶವಾಗಿದೆ.
ಕೊನೆಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರಾದರೂ ಆದಾಗಲೇ ತಂಬಾಕು ಬೆಂಕಿಗೆ ಆಹುತಿಯಾಗಿತ್ತು.
ಬೆಂಕಿ ಅವಘಡದಿಂದ ಸುಮಾರು ಮೂರು ಲಕ್ಷ ರು.ನಷ್ಟು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಸಾಲ ಮಾಡಿ ತಂಬಾಕು ಬೆಳೆಸಿ ಅದು ಫಸಲಿಗೆ ಬಂದು ಇನ್ನೇನು ಮಾರಾಟ ಮಾಡಿ ಒಂದಷ್ಟು ಆದಾಯ ಪಡೆಯುವ ಹಂತದಲ್ಲೇ ಇಂತಹ ಅವಘಡ ಸಂಭವಿಸಿದ್ದರಿಂದ ಬೆಳೆಗಾರ ಶಾಂತೇಗೌಡ ಚಿಂತಾಕ್ರಾಂತರಾಗಿದ್ದಾರೆ.












Click it and Unblock the Notifications