ಟಿಪ್ಪು ಓರ್ವ ಮಾದರಿ ನಾಯಕ - ಬಿ. ಟಿ. ಲಲಿತಾ ನಾಯಕ್
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸ್ಮರಣಾರ್ಥ ನಗರದಲ್ಲಿ ಇಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಟಿಪ್ಪು ಸಮಾವೇಶದ ಮೆರವಣಿಗೆಗೆ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಚಾಲನೆ ನೀಡಿದರು.
ಮೈಸೂರು, ಮೇ 4: ಟಿಪ್ಪು ಸುಲ್ತಾನ್ ಎಲ್ಲರ ಮನದಲ್ಲೂ ಅಚ್ಚಳಿಯದಂತೆ ರಾಜ್ಯವನ್ನಾಳಿದ ಮಾದರಿ ನಾಯಕ ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಹೇಳಿದ್ದಾರೆ.
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸ್ಮರಣಾರ್ಥ ನಗರದಲ್ಲಿ ಇಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಟಿಪ್ಪು ಸಮಾವೇಶದ ಮೆರವಣಿಗೆಗೆ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಬ್ರಿಟಿಷರನ್ನು ಶತ್ರುಗಳು ಎಂದು ಮೊದಲು ಗುರುತಿಸಿದ್ದೇ ಟಿಪ್ಪು ಸುಲ್ತಾನ್. ಎಲ್ಲರೂ ತಮ್ಮ ಮಕ್ಕಳ ರಕ್ಷಣೆಗೆ ದೇಶವನ್ನೇ ಒತ್ತೆಯಿಟ್ಟರೆ, ಟಿಪ್ಪು ತನ್ನ ಮಕ್ಕಳನ್ನೆ ಒತ್ತೆಯಿಟ್ಟು ದೇಶಕ್ಕಾಗಿ ಹೋರಾಟ ಮಾಡಿದ. ದೇಶನ್ನಾಳಿದ ರಾಜಮಹಾರಾಜರೆಲ್ಲರೂ ಒಂದಲ್ಲಾ ಒಂದು ತಪ್ಪು ಮಾಡಿರುತ್ತಾರೆ. ಹಾಗೆಯೇ ಟಿಪ್ಪು ಸಹ ತಪ್ಪು ಮಾಡಿರಬಹುದು. ಒಂದೆರಡು ತಪ್ಪುಗಳಿಗೆ ಅವನ ಒಳ್ಳೆಯ ಕಾರ್ಯಗಳನ್ನು ಮರೆ ಮಾಚಬಾರದು ಎಂದರು.
ರೈತರಿಗೆ, ಮಹಿಳೆಯರಿಗೆ, ಸಮಾಜಕ್ಕೆ ಆತನ ಕೊಡುಗೆ ಅಪಾರ. ಇಂದು ರೈತರಿಗೆ ನಿಗದಿಯಾದ ಭೂಮಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ನುಂಗಿ ಹಾಕುವ ಭೂಗಳ್ಳರಿಗೆ, ರಾಜಕಾಣಿಗಳಿಗೆ ಟಿಪ್ಪು ಸಿಂಹಸ್ವಪ್ನವಾಗಿ ನಿಲ್ಲುತ್ತಾನೆ. ಟಿಪ್ಪುವನ್ನು ಮತಾಂಧನೆಂದು ಬಿಂಬಿಸುವವರು ಮೊದಲು ಆತನ ಬಗ್ಗೆ ತಿಳಿದು ಬಳಿಕ ಮಾತನಾಡಬೇಕು. ಇತಿಹಾಸ ತಿರುಚುವ ಕೆಲಸ ಮಾಡಬಾರದು ಎಂದು ಹೇಳಿದರು.
ಇನ್ನು ಪುರಭವನದಿಂದ ಆರಂಭವಾದ ಮೆರವಣಿಗೆ ಅರಮನೆ ವೃತ್ತ, ಹಾರ್ಡಿಂಜ್ ವೃತ್ತದ ಮೂಲಕ ಸಾಗಿ ವಸ್ತುಪ್ರದರ್ಶನ ಆವರಣದಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಕಲಾವಿದರು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಟಿಪ್ಪು ಕುರಿತು ವಸ್ತು ಪ್ರದರ್ಶನವೂ ನಡೆಯಿತು. ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರು ಮಹಾದೇವ, ಹಿರಿಯ ರಾಜಕಾರಣಿ ಎಕೆ ಸುಬ್ಬಯ್ಯ ಹಾಗೂ ಇತರರು ಉಪಸ್ಥಿತರಿದ್ದರು.