ಸಿಎಂ ಸಿದ್ದರಾಮಯ್ಯಗೆ ದೇವರ ಮೇಲೆ ನಂಬಿಕೆ ಹೆಚ್ಚಾಗಲು ಕಾರಣ ತಿಳಿಸಿದ ಹೆಚ್ಡಿಕೆ
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ಸಿಎಂಗೆ ನೋಟಿಸ್ ಕೂಡ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಇತ್ತೀಚೆಗೆ ದೇವರ ಮೇಲೆ ಭಕ್ತಿ ಹೆಚ್ಚಾಗಿದೆ ಎಂದು ಹೇಳಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಅದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮುಡಾ ಪ್ರಕರಣ ಮುನ್ನಲೆಗೆ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೇವರ ಮೇಲೆ ಅಪಾರ ಭಕ್ತಿ ಬಂದಿದೆ ಎಂದಿರುವ ಅವರು, ಈಗ ಅವರಿಗೆ ದೇವರು, ಮಠಗಳು ನೆನಪಾಗಿವೆ ಎಂದು ಹೇಳಿದ್ದಾರೆ.

ಮುಡಾ ಪ್ರಕರಣದಲ್ಲಿ ತಮ್ಮ ಹೆಸರು ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ, ಹಣೆಗೆ ಕುಂಕುಮ ಕೂಡ ಹಾಕಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಅವರು ಹಣೆಗೆ ಕುಂಕುಮ ಹಾಕಿಸಿಕೊಳ್ಳುತ್ತಿರಲಿಲ್ಲ, ಈಗ ಹುಡುಕಿಕೊಂಡು ಹೋಗಿ ದೇವರ ದರ್ಶನ ಮಾಡುತ್ತಿದ್ದಾರೆ, ಇದೆಲ್ಲಾ ಮುಡಾ ಪ್ರಕರಣದ ಪ್ರಭಾವ ಎಂದು ಹೇಳಿದರು.
ತಪ್ಪಿನ ಮೇಲೆ ತಪ್ಪು ಮಾಡುತ್ತಿದೆ
ರಾಜ್ಯ ಸರಕಾರ ಒಂದು ತಪ್ಪು ಮುಚ್ಚಿಕೊಳ್ಳಲು ಮತ್ತೊಂದು ತಪ್ಪು ಮಾಡುತ್ತಿದೆ, ಮುಡಾ, ವಕ್ಫ್ ವಿಚಾರದಲ್ಲಿ ತಪ್ಪಿನ ಮೇಲೆ ತಪ್ಪು ಮಾಡಿದ್ದು, ಅವರ ಸ್ಥಿತಿ ಈಗ ದೀಪಕ್ಕೆ ಸಿಕ್ಕ ಪತಂಗದ ರೀತಿಯಾಗಿದೆ. ಕಾಂಗ್ರೆಸ್ನ ಈ ಹಗರಣಗಳು ಉಪ ಚುನಾವಣೆ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳುವುದಿಲ್ಲ, ಉಪ ಚುನಾವಣೆ ನಡೆಯುವುದೇ ಬೇರೆ ರೀತಿ, ಅಲ್ಲಿ ಹಣಬಲ, ವೈಯಕ್ತಿಕ ಬಲ, ಅಧಿಕಾರ ದುರುಪಯೋಗ ಎಲ್ಲವೂ ಇರುತ್ತದೆ ಎಂದರು. ಇಷ್ಟೆಲ್ಲಾ ಇದ್ದರೂ ಮೂರು ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಟಿಡಿ ಯಾಕೆ ಪ್ರಚಾರಕ್ಕೆ ಬಂದಿಲ್ಲ
ಉಪ ಚುನಾವಣೆ ಪ್ರಚಾರಕ್ಕೆ ಜೆಡಿಎಸ್ ಹಿರಿಯ ನಾಯಕ ಜಿ.ಟಿ. ದೇವೇಗೌಡ ಯಾಕೆ ಬಂದಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಉಪ ಚುನಾವಣೆಯಲ್ಲಿ ಪ್ರಚಾರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜಿ.ಟಿ. ದೇವೇಗೌಡರು ಎರಡನೇ ಹಂತದ ನಾಯಕರಿಗೆ ಅವಕಾಶ ಕಲ್ಪಿಸಿದ್ದಾರೆ. ಈ ವಿಚಾರದಲ್ಲಿ ಏನಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ, ಮತ್ಯಾಕೆ ನನ್ನನ್ನುಕೇಳುತ್ತೀರಾ ಎಂದು ಪ್ರಶ್ನೆ ಮಾಡಿದರು.
ಎಚ್.ಡಿ. ದೇವೇಗೌಡರು ಇನ್ನೂರು ಡ್ಯಾಂ ಕಟ್ಟಿಸದೇ ಇದ್ದರೆ ಕೆರೆ ತುಂಬಿಸಲು ಹೇಗೆ ಸಾಧ್ಯವಾಗುತ್ತಿತ್ತು, ಕೆರೆ ತುಂಬಿಸುವ ಯೋಜನೆಗೆ 105 ಕೋಟಿ ರೂಪಾಯಿ ಕೊಟ್ಟಿದ್ದ ಅಂದಿನ ಸಿಎಂ ಸದಾನಂದ ಗೌಡ ನಾನು ಭಗೀರಥ ಎಂದು ಕರೆದುಕೊಂಡಿದ್ದರು, ಯೋಗೇಶ್ವರ್ ತುಂಬಿಸಿರೋದು ಕೇವಲ 17 ಕೆರೆಗಳು ನಾನು 107 ಕೆರೆಗಳನ್ನು ತುಂಬಿಸಿದ್ದೇನೆ, ಇದಕ್ಕೆಲ್ಲ ಮೂಲ ಪುರುಷ ದೇವೇಗೌಡರು ಎಂದರು.












Click it and Unblock the Notifications