ಸೋಮವಾರಪೇಟೆಯಲ್ಲಿ ಒಂಟಿ ಮನೆ ಕಳ್ಳರನ್ನು ಬಂಧಿಸಿದ ಪೊಲೀಸರು
ಮಡಿಕೇರಿ, ಫೆಬ್ರವರಿ 12: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಲೇ ಒಂಟಿ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ಕಳ್ಳತನ ಮಾಡುತಿದ್ದ ಅಂತರ್ ಜಿಲ್ಲಾ ಮನೆಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರಪೇಟೆ ಸಮೀಪದ ಬಿಳಿಗೇರಿ ಗ್ರಾಮದಲ್ಲಿ ಎರಡು ಮನೆಗಳ ಬೀಗ ಮುರಿದು ಲಕ್ಷಾಂತರ ರುಪಾಯಿ ಹಾಗೂ ಒಡವೆಗಳನ್ನು ಕಳವು ಮಾಡಿದ್ದ ಖತರ್ನಾಕ್ ಕಳ್ಳರು ಪೊಲೀಸರ ಅತಿಥಿಯಾಗಿದ್ದಾರೆ.
ಈ ಗ್ಯಾಂಗಿನ ಪ್ರಮುಖ ಆರೋಪಿ ಸತೀಶ್ ಎಂಬಾತನು ಶಿವಮೊಗ್ಗ ಮೂಲದವನಾಗಿದ್ದು, ಕೆಲವು ವರ್ಷಗಳಿಂದ ಇಲ್ಲಿನ ತೋಟವೊಂದರಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಸಂಭಾವಿತನಂತಿದ್ದ ಈತ ಬೀಗ ಹಾಕಿರುವ ಅಕ್ಕ ಪಕ್ಕದ ತೋಟಗಳ ಒಂಟಿ ಮನೆಗಳನ್ನು ಗುರ್ತಿಸಿಕೊಂಡು, ನಂತರ ತನ್ನ ಸಹಚರರಾದ ಕಿರಣ್ ಮತ್ತು ಚಂದ್ರಶೇಖರ್ ಎಂಬುವವರನ್ನು ಕರೆಸಿಕೊಂಡು ರಾತ್ರಿ ವೇಳೆ ಮೂವರೂ ಬೀಗ ಒಡೆದು ನಗ ನಾಣ್ಯ ದೋಚುತಿದ್ದರು.

ಕಳೆದ ಮೂರು ತಿಂಗಳ ಹಿಂದೆ ಬಿಳಿಗೇರಿ ಗ್ರಾಮದ ಕರುಂಬಯ್ಯ ಮತ್ತು ಪೊನ್ನಪ್ಪ ಅವರ ಮನೆಯ ಬೀಗ ಒಡೆದು 3.64 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಆಗಿದ್ದರು. ಎರಡು ತಂಡ ರಚಿಸಿದ್ದ ಪೋಲೀಸರು ಕೃತ್ಯ ನಡೆಸಿದ್ದ ಮೂರೂ ಜನರನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಬಂಧಿತ ಆರೋಪಿಗಳನ್ನು ಸತೀಶ್ (32), ಕಿರಣ್ (23) ಚಂದ್ರಶೇಖರ್.ಕೆ (23) ಎಂದು ಗುರುತಿಸಲಾಗಿದೆ. ಬಂಧಿತರಿಂದ 3,64,800 ರೂ. ಮೌಲ್ಯದ 96 ಗ್ರಾಂ ಚಿನ್ನಾಭರಣ, 128 ಗ್ರಾಂ ತೂಕದ ಬೆಳ್ಳಿ, 1 ಮೊಬೈಲ್ ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಸ್ಪ್ಲೆಂಡರ್ ಬೈಕ್ ಹಾಗೂ ಮನೆ ಬೀಗ ಒಡೆಯಲು ಬಳಸಿದ್ದ 2 ಕಬ್ಬಿಣದ ರಾಡ್ ನ್ನು ವಶಪಡಿಸಿಕೊಳ್ಳಲಾಗಿದೆ. ಮೊಕದ್ದಮೆ ದಾಕಲು ಮಾಡಿಕೊಂಡಿರುವ ಸೋಮವಾರಪೇಟೆ ಪೋಲೀಸರು ಮುಂದಿನ ತನಿಖೆ ನಡೆಸುತಿದ್ದಾರೆ.












Click it and Unblock the Notifications