ಮಲೇಷ್ಯಾದಿಂದ 6 ತಿಂಗಳ ನಂತರ ಮೈಸೂರಿಗೆ ಬಂದ ಯುವಕನ ಮೃತದೇಹ
ಮೈಸೂರು, ಜುಲೈ 8: ಉದ್ಯೋಗಕ್ಕಾಗಿ ಮಲೇಷ್ಯಾಕ್ಕೆ ಹೋಗಿ ಅಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಯುವಕನ ಮೃತದೇಹ ಆರು ತಿಂಗಳ ನಂತರ ಸ್ವಗ್ರಾಮಕ್ಕೆ ಬಂದಿದೆ. ಕುಟುಂಬಸ್ಥರು ನಿನ್ನೆಯಷ್ಟೇ ಅಂತ್ಯಕ್ರಿಯೆ ಕಾರ್ಯವನ್ನು ನಡೆಸಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ತಾಲೂಕಿನ ಕಾನ್ವೆಂಟ್ ರಸ್ತೆಯ ನಿವಾಸಿಗಳಾದ ವೆಂಕಟೇಶ್ ಹಾಗೂ ಶೋಭಾ ದಂಪತಿಯ ಮಗ ಸುಮಂತ್ (22) ಡಿಸೆಂಬರ್ ತಿಂಗಳಿನಲ್ಲಿ ಮಲೇಷ್ಯಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದನು. ಉದ್ಯೋಗಕ್ಕಾಗಿ ಮಲೇಷ್ಯಾಗೆ ಹೋಗಿದ್ದ ಆತ ಸಾವನ್ನಪ್ಪಿದ್ದು, ತಾಂತ್ರಿಕ ಕಾರಣಗಳಿಂದ ಮೃತದೇಹವನ್ನು ತರಲು ಸಮಸ್ಯೆಯಾಗಿತ್ತು. ನಿನ್ನೆ ಸುಮಂತ್ ಮೃತದೇಹ ತವರಿಗೆ ಬಂದಿದೆ. ಈ ಪ್ರಕರಣದ ಹಿನ್ನೆಲೆ ಹೀಗಿದೆ...

ಉದ್ಯೋಗಕ್ಕಾಗಿ ಮಲೇಷ್ಯಾಗೆ ಹೋಗಿದ್ದ ಸುಮಂತ್
ಡಿಪ್ಲೊಮಾ ಮುಗಿಸಿ ಹೆಚ್ಚಿನ ಸಂಬಳ ಪಡೆಯುವ ಉದ್ದೇಶದಿಂದ ಮಲೇಷ್ಯಾ ದೇಶಕ್ಕೆ ಉದ್ಯೋಗ ಹುಡುಕಿಕೊಂಡು ಹೋಗಿದ್ದಾನೆ ಸುಮಂತ್. ಮಧ್ಯವರ್ತಿಯೊಬ್ಬ ಭಾರೀ ಸಂಬಳದ ಸಂಬಳದ ಭರವಸೆ ನೀಡಿ ಮಲೇಷ್ಯಾಗೆ ಕಳಿಸಿಕೊಟ್ಟಿದ್ದರೂ ಅಲ್ಲಿ ತಿಂಗಳಿಗೆ 18 ಸಾವಿರ ಮಾತ್ರ ಸಂಬಳ ದೊರೆಯುತಿತ್ತು. ಇದರಿಂದ ಸುಮಂತ್ ಸಾಕಷ್ಟು ಬೇಸರಗೊಂಡಿದ್ದ.

ಡಿ.14ರಂದು ಮಲೇಷ್ಯಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ
ಈ ಕಡಿಮೆ ಸಂಬಳದ ವಿಷಯವನ್ನು ಸುಮಂತ್ ತನ್ನ ಪೋಷಕರ ಬಳಿ ತಿಳಿಸಿದ್ದ. ಅಷ್ಟೇ ಅಲ್ಲ ವಾಪಸ್ ಬಂದುಬಿಡುವುದಾಗಿಯೂ ಹೇಳಿಕೊಂಡಿದ್ದ. ಆದರೆ ಈ ನಡುವೆ ಸುಮಂತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿತ್ತು. ಅಲ್ಲಿ ಈತ ಮಲೇಷ್ಯಾದಲ್ಲಿ ಖಾಸಗಿ ಕಂಪನಿಯ ಗೂಡ್ಸ್ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿತ್ತು. ಈ ಮಧ್ಯೆ ಕಳೆದ ವರ್ಷ ಡಿ.14 ರಂದು ಮಲೇಷ್ಯಾದಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದು, ತಾಂತ್ರಿಕ ಕಾರಣಗಳಿಂದ ಮೃತದೇಹವನ್ನು ತಾಯ್ನಾಡಿಗೆ ತರಲು ವಿಳಂಬವಾಗಿತ್ತು.

ತನಿಖೆಗೆ ಆಗ್ರಹಿಸಿದ್ದ ಸುಮಂತ್ ಪೋಷಕರು
ಈ ನಡುವೆ ಮಗನ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಸುಮಂತ್ ಪೋಷಕರು ಇಲ್ಲಿನ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಸಂಸದ ಪ್ರತಾಪ್ ಸಿಂಹ ಅವರಿಗೂ ಮನವಿ ಮಾಡಿದ್ದರು. ನನ್ನ ಮಗನನ್ನು ಕೊಲೆ ಮಾಡಿದೆ. ಅವನು ಕೆಲಸದಲ್ಲಿದ್ದ ಜಾಗದಲ್ಲಿ ಅವನಿಗೆ ಕಿರುಕುಳವಾಗುತ್ತಿತ್ತು ಎಂದು ದೂರಿದ್ದರು. ಮಗನ ಮೃತದೇಹವನ್ನು ತವರಿಗೆ ಮರಳಿಸುವಂತೆ ಕೇಳಿಕೊಂಡಿದ್ದರು. ಹಾಗೆಯೇ ರಾಯಭಾರಿ ಕಚೇರಿಗೆ ಸಂಸದರು ಮಾಹಿತಿ ನೀಡಿದ್ದರು.

ಆರು ತಿಂಗಳ ನಂತರ ಸ್ವಗ್ರಾಮಕ್ಕೆ ಬಂತು ಮೃತದೇಹ
ಆರು ತಿಂಗಳ ಬಳಿಕ ಸೋಮವಾರ ತಮಿಳುನಾಡಿನ ತಿರುಚನಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತದೇಹವನ್ನು ತರಲಾಗಿತ್ತು. ಮಂಗಳವಾರ ಪಿರಿಯಾಪಟ್ಟಣಕ್ಕೆ ಬಂದ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನಡೆಸಿದರು. ಈ ಸಂದರ್ಭದಲ್ಲಿ ಸಂಸದರ ಸಹಾಯಕ್ಕೆ ಮೃತ ಯುವಕನ ತಾಯಿ ಶೋಭ ಕೃತಜ್ಞತೆ ಸಲ್ಲಿಸಿದರು.












Click it and Unblock the Notifications