ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದ ಮೈಸೂರು ಕಾಂಗ್ರೆಸ್ಸಿಗರು!
ಬೆಂಗಳೂರು, ಫೆ. 15: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹಿಂದ ಸಂಘಟನೆಗೆ ತವರು ಜಿಲ್ಲೆ ಮೈಸೂರಿನಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದದ್ರಾಮಯ್ಯ ಅವರು ಜೆಡಿಎಸ್ ಪಕ್ಷವನ್ನು ತೀವ್ರವಾಗಿ ವಿರೋಧಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಕೂಡ ಮೈಸೂರಿನಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮೈಸೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದಿವೆ. ಜೊತೆಗೆ ಇದೀಗ ಸಿದ್ದರಾಮಯ್ಯ ಅವರ ಹಿಂದ ಸಂಘಟನೆಗೂ ಮೈಸೂರು ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಇಚ್ಛೆಗೆ ವಿರದ್ಧವಾಗಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದನ್ನು ಸ್ಥಳೀಯ ನಾಯಕರು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಜೊತೆಗೆ ಸ್ವಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿಯೂ ಸಿದ್ದರಾಮಯ್ಯ ಅವರ ವಿರೋಧಿ ನಾಯಕರು ಹೆಚ್ಚಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಹಿಂದ ಸಂಘಟನೆ ಹಾಗೂ ಮೈಸೂರಿನಲ್ಲಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಕುರಿತು ಮಹತ್ವದ ಮಾತುಗಳನ್ನು ಆಡಿದ್ದಾರೆ.

ಅಹಿಂದಕ್ಕೆ ವಿರೋಧ!
ಅಹಿಂದ ಎಂದರೆ ಪ್ರತ್ಯೇಕ ಸಮಾವೇಶವಲ್ಲ. ಧ್ವನಿ ಇಲ್ಲದವರಿಗೆ ಧ್ವನಿ ಕೊಡುವ ವ್ಯವಸ್ಥೆ. ಈ ವ್ಯವಸ್ಥೆ ಮೇಲೆ ಯಾರಾದರೂ ರಾಜಕೀಯ ಉದ್ದೇಶ ಇಟ್ಟುಕೊಂಡಿದ್ದರೆ ಅದು ತಪ್ಪು ಎಂದು ಮಾಜಿ ಸಚಿವ ತನ್ವೀರ್ ಸೇಠ್ ಅವರು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿರುವ ಅವರು ಯಾವುದೇ ಮತದಾರ ಯಾವುದೇ ಪಕ್ಷದ ಗುಲಾಮನಲ್ಲ. ಕಾರ್ಯಕ್ರಮ ನೋಡಿ ನಮ್ಮ ಜೊತೆ ನಿಲ್ಲಬೇಕೆ ಹೊರತು ಜಾತಿಯಿಂದಲ್ಲ ಎಂದು ಅಹಿಂದ ಸಂಘಟನೆ ಕುರಿತು ತನ್ವೀರ್ ಸೇಠ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲರಿಗೂ ಸಮಾನ ಅವಕಾಶವಿದೆ
ಎಲ್ಲಾ ಜನಾಂಗಗಳಲ್ಲೂ ಬಡವರಿದ್ದಾರೆ. ಬಡವರು ಯಾರೆ ಇರಲಿ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಂದು ಜಾತಿಯನ್ನು ಪ್ರತಿನಿಧಿಸುವ ಕಾರ್ಯಾಧ್ಯಕ್ಷರು, ಅಧ್ಯಕರು ಹಾಗೂ ಪ್ರತಿಪಕ್ಷ ನಾಯಕರಿದ್ದಾರೆ. ಎಲ್ಲಾ ಜಾತಿ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವುದು ತೋರ್ಪಡಿಕೆಗಲ್ಲ, ಅದು ಕಾಂಗ್ರೆಸ್ ಪಕ್ಷದ ಸಿದ್ದಾಂತ. ಹೀಗಿರುವಾಗ ಸಂಶಯ ಯಾಕೆ ಬೇಕು? ಎಂದು ಹಿಂದ ಹೋರಾಟ ಚಿಂತನೆಗೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ನೇರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಭವಿಷ್ಯ ಏನಾಗುತ್ತೊ?
ಯಾವತ್ತು ದೀಪ ಉರಿದರೆ ಮತ್ತೊಬ್ಬರಿಗೆ ಬೆಳಕಾಗುತ್ತದೆ. ಭವಿಷ್ಯವನ್ನು ಯಾರೂ ಕಂಡಿಲ್ಲ, ಸಿದ್ದರಾಮಯ್ಯ ಅವರ ಭವಿಷ್ಯ ಏನಾಗುತ್ತದೆಯೋ ಏನೊ? ಎಂದು
ಸಿದ್ದರಾಮಯ್ಯ ಅವರ ಕುರಿತು ತನ್ವೀರ್ ಸೇಠ್ ಮಾರ್ಮಿಕವಾಗಿ ಮಾತಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡಿರುವ ವಿಚಾರವನ್ನೂ ಸೇಠ್ ಪ್ರಸ್ತಾಪಿಸಿದರು. ಆ ಮೂಲಕ ಸಿದ್ದರಾಮಯ್ಯ ಅವರಿಗೆ ಸೆಡ್ಡು ಹೊಡೆಯಲು ಶಾಸಕ ತನ್ವೀರ್ ಸೇಠ್ ಮುಂದಾಗಿದ್ದಾರೆ.
ರಾಜ್ಯ ಮಟ್ಟದಲ್ಲಿ ತೆಗೆದುಕೊಳ್ಳುವ ತೀರ್ಮಾನ ಅಲ್ಲಿಗೆ ಸೀಮಿತ. ಇದು ಮೈಸೂರಿನ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯವಾಗಿ ತೆಗೆದುಕೊಂಡ ತೀರ್ಮಾನ. ಪಕ್ಷದ ವರಿಷ್ಠರ ಗಮನಕ್ಕೆ ತಂದು ಮುಂದುವರೆಯುತ್ತಿದ್ದೇವೆ. ಈ ಹಿಂದೆ ಮಾಜಿ ಸಚಿವ ಕೃಷ್ಣ ಭೈರೆಗೌಡ ವೀಕ್ಷಕರಾಗಿ ಬಂದಿದ್ದರು. ಜೊತೆಗೆ ಮಹಾನಗರ ಪಾಲಿಕೆಯಲ್ಲಿ ಮೈತ್ರಿ ವಿಚಾರ ಸ್ಥಳೀಯ ನಾಯಕರು ಕೈಗೊಂಡಿರುವುದು. ಇದು ಶಾಸಕ ಸಾರಾ ಮಹೇಶ್ ಮಹೇಶ್, ನನ್ನ ನಡುವೆ ನಡೆದ ಒಪ್ಪಂದ. ಮೈತ್ರಿ ಮುಂದುವರೆಯುವ ವಿಶ್ವಾಸ ನನಗೆ ಇದೆ ಎಂದು ಹೇಳಿವ ಮೂಲಕ ಜೆಡಿಎಸ್ ಕಟ್ಟಾ ವಿರೋಧಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತನ್ವೀರ್ ಸೇಠ್ ರಾಜಕೀಯವಾಗಿ ಸೆಡ್ಡು ಹೊಡೆದಿದ್ದಾರೆ. ಯಾಕೆಂದರೆ ಮೈಸೂರಿನಲ್ಲಿ ನಾವು ಯಾವ ಪಕ್ಷದ ಜೊತೆಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದರು.

ಮೂಲೆ ಗುಪಾಗುತ್ತಾರೆ
ತಾವು ಜೆಡಿಎಸ್ ಸೇರುವ ಕುರಿತು ಎದ್ದಿರುವ ಸುದ್ದಿಗೆ ತನ್ವೀರ್ ಸೇಠ್ ಸ್ಪಷ್ಟನೆ ನೀಡಿದ್ದಾರೆ. ನಾವು ಪಕ್ಷ ಬಿಡುವಂತೆ ಕುಮ್ಮಕ್ಕು ನೀಡಲು ಹೊಸ ನಾಯಕರು ಹುಟ್ಟಿಕೊಂಡಿದ್ದಾರೆ. ಆದರೆ ನಮ್ಮನ್ನು ಮೂಲೆ ಗುಂಪು ಮಾಡಲು ಬಂದಲ್ಲಿ, ಅವರೆ ಮೂಲೆ ಗುಂಪಾಗುತ್ತಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಮೇಲೆ ಶಾಸಕ ತನ್ವೀರ್ ಸೇಠ್ ಪರೋಕ್ಷ ವಾಗ್ದಾಳಿ ನಡೆದಿದ್ದಾರೆ.
ಕಾಂಗ್ರೆಸ್ ನಮ್ಮ ಮನೆ, ನಾವು ಬೇರೆಯವರ ಮಾತು ಕೇಳುವ ಪ್ರಶ್ನೆಯೇ ಇಲ್ಲ. ಬೇರೆಯವರು ಬಂದಾಗ ನಾವು ಆತಿಥ್ಯ ನೀಡಲು ಸಿದ್ದವಾಗಿದ್ದೇವೆ. ಯಾವುದೇ ಕಾರಣಕ್ಕೂ ನಾನು ಪಕ್ಷ ಬಿಡಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಅವರು ನನ್ನನ್ನ ತಮ್ಮ ಪಕ್ಷಕ್ಕೆ ಆಹ್ವಾನಿಸಿಲ್ಲ. ಕಾಂಗ್ರೆಸ್ ತತ್ವ ಸಿದ್ದಾಂತಗಳನ್ನು ಭದ್ರವಾಗಿ ಪಾಲಿಸುತ್ತೇನೆ. ಹೀಗಾಗಿ ನನ್ನನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಲು ಯಾರೇ ಆಗಲಿ ಹಿಂಜರಿಯುತ್ತಾರೆ ಎಂದು ಮೈಸೂರಿನಲ್ಲಿ ಶಾಸಕ ತನ್ವೀರ್ಸೇಠ್ ಹೇಳಿಕೆ ನೀಡಿದ್ದಾರೆ.












Click it and Unblock the Notifications