ತಿ.ನರಸೀಪುರದಲ್ಲಿ ಬೀದಿಗೆ ಬಿದ್ದ ಕುಟುಂಬಗಳ ಗೋಳು ಕೇಳೋರಿಲ್ಲ!
ಕಟ್ಟಿಕೊಂಡಿದ್ದ ಮನೆಗಳನ್ನು ಸರಕಾರ ಕೆಡವಿ ಹಾಕಿದ್ದರಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ ಜನಾಂಗದ ನಾಲ್ಕು ಕುಟುಂಬಗಳು ತಿ ನರಸೀಪುರದ ಬೀದಿ ಬದಿಯ ಮುರುಕು ಗುಡಿಸಲಲ್ಲೇ ಜೀವನ ಮಾಡುವಂತಾಗಿದೆ.
ಮೈಸೂರು, ಏಪ್ರಿಲ್ 13: ಸೂರಿಗಾಗಿ ಕಳೆದೊಂದು ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ ಜನಾಂಗದ ನಾಲ್ಕು ಕುಟುಂಬಗಳು ತಿ ನರಸೀಪುರದ ಬೀದಿ ಬದಿಯ ಮುರುಕು ಗುಡಿಸಲಲ್ಲೇ ಜೀವನ ಮಾಡುವಂತಾಗಿದೆ.
ಇವರ ಪ್ರತಿಭಟನೆಗಳನ್ನು ತಾಲೂಕು ಆಡಳಿತವಾಗಲೀ, ಜಿಲ್ಲಾಡಳಿತವಾಗಲೀ, ಜನಪ್ರತಿನಿಧಿಗಳಾಗಲೀ ಆಲಿಸಿಲ್ಲ. ಪರಿಣಾಮ ತಮಗೆ ಸೂರು ಕೊಡಿ ಎಂದು ಪರಿಶಿಷ್ಟ ಪಂಗಡದ ರಂಗಸ್ವಾಮಿ, ಅಲುಮೇಲಮ್ಮ, ಮಹದೇವಮ್ಮ ಮತ್ತು ವೆಂಕಟೇಶ್ ಎಂಬ ನಾಲ್ಕು ಕುಟುಂಬಗಳು ಎಂದು ಮಹಾತ್ಮರ ಭಾವಚಿತ್ರಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ. ಆದರೆ ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.[ಫಲಿತಾಂಶ : ನೆಗೆದುಬಿದ್ದ ಗುಪ್ತಚರ ಇಲಾಖೆಯ ವರದಿ]
ತಿ.ನರಸೀಪುರ ಪಟ್ಟಣದ ತ್ರಿವೇಣಿ ಸಂಗಮದ ನದಿಯ ತಟದಲ್ಲಿರುವ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಸರ್ವೆ ನಂ 30.31ರಲ್ಲಿ ಸುಮಾರು ಎಪ್ಪತ್ತು, ಎಂಭತ್ತು ವರ್ಷಗಳಿಂದ ಈ ಕುಟುಂಬಗಳು ವಾಸವಿವೆ. ಮೀನು ಹಿಡಿಯುವ ಕುಲ ಕಸುಬಿನೊಂದಿಗೆ ಈ ಕುಟುಂಬಗಳ ಜನರು ಜೀವನ ಸಾಗಿಸುತ್ತಿದ್ದಾರೆ.
ನಿರ್ಮಿಸಿದ್ದ ಮನೆಯನ್ನೂ ಕೆಡವಿದರು
ಮೀನುಗಾರಿಕೆ ಇಲಾಖೆಯಿಂದ ಮನೆ ನಿರ್ಮಿಸಿಕೊಳ್ಳಲು ಸಹಾಯ ಧನ ಮಂಜೂರಾಗಿತ್ತು. ಇದರ ಜೊತೆಗೆ ಅಲ್ಪ, ಸ್ವಲ್ಪ ಸಾಲ ಸೋಲ ಮಾಡಿ ಹಿಂದಿನ ಪಟ್ಟಣ ಪಂಚಾಯಿತಿಯ ಅನುಮತಿಯೊಂದಿಗೆ ಮನೆ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದೆವು.[ಎರಡು ಬಾರಿ ಸೋತು ಗೆದ್ದ ಕಳಲೆ ಕೇಶವಮೂರ್ತಿ ಯಾರು?]
ನಂತರದ ದಿನಗಳಲ್ಲಿ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯ ಅಭಿವೃದ್ದಿ ಕಾರ್ಯಕ್ಕೆ ಶಾಸಕರು ಹಣ ಬಿಡುಗಡೆ ಮಾಡಿದರು. ನಂತರ ಕಾಮಗಾರಿ ಕೈಗೊಂಡ ಪುರಾತತ್ವ ಇಲಾಖೆಯವರು ನಾವು ವಾಸಿಸುವ ಸ್ಥಳ ದೇವಾಲಯಕ್ಕೆ ಸೇರಿದ ಜಾಗ ಎಂದು ಹೇಳಿ ನಮ್ಮನ್ನು ತೆರವುಗೊಳಿಸಿದ್ದು ಇದೀಗ ನಾವು ಬೀದಿ ಪಾಲಾಗಿದ್ದೇವೆ.
2016 ಮೇ ತಿಂಗಳ 7ರಂದು ಬೆಳಗ್ಗಿನ ಜಾವ ಜೆಸಿಬಿ ಯಂತ್ರದೊಂದಿಗೆ ಪೊಲೀಸರ ಸಮ್ಮುಖದಲ್ಲಿ ಆಗಿನ ತಹಸೀಲ್ದಾರ್ ಆರ್.ಶೂಲದಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿ.ಟಿ.ವಿಲ್ಸನ್ರವರು ಮನೆ ನೆಲಸಮ ಮಾಡಿದರು. ಸಮಯವಕಾಶ ನೀಡದೆ, ಮನೆಯೊಳಗಿದ್ದ ಪರಿಕರಗಳನ್ನು ತೆಗೆದುಕೊಳ್ಳಲು ಅವಕಾಶ ನೀಡದೆ ಏಕಾಏಕಿ ಯಂತ್ರಗಳನ್ನು ಬಳಕೆ ಮಾಡಿ ಮನೆಯನ್ನು ಕೆಡವಿ ನಮ್ಮನ್ನು ಅತಂತ್ರ ಮಾಡಿದರು.[ಆಪರೇಷನ್ ಬಿಜೆಪಿ ವರ್ಕೌಟ್ ಆಗಿಲ್ಲ - ಜಿ ಪರಮೇಶ್ವರ್]
ಅಂದಿನಿಂದ ಇಂದಿನವರೆಗೂ ಇದೇ ಸ್ಥಳದಲ್ಲಿ ಮಹಿಳೆ ಮತ್ತು ಮಕ್ಕಳ ಸಮೇತ ಬಿಸಿಲು ಮಳೆಗಾಳಿ ಎನ್ನದೇ ನ್ಯಾಯಕ್ಕಾಗಿ ಹೋರಾಡುತ್ತಿದ್ದು, ರಾತ್ರಿಯ ಕಗ್ಗತ್ತಲಿನಲ್ಲಿ ಇಲ್ಲೇ ವಾಸ ಮಾಡುತ್ತಾ ಛಾತಕ ಪಕ್ಷಿಯಂತೆ ನ್ಯಾಯಕ್ಕಾಗಿ ಕಾಯುತ್ತಿದ್ದೇವೆ. ಸ್ಥಳೀಯ ಶಾಸಕರು, ಸಂಸದರು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಪುನರ್ವಸತಿ ಕಲ್ಪಿಸುವಂತೆ ಹಲವೂ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇವರು ಅಳಲು ತೋಡಿಕೊಂಡಿದ್ದಾರೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರು ತಿ.ನರಸೀಪುರ ವಿಧಾನಸಭಾ ಕ್ಷೇತ್ರದವರೇ ಆಗಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.