ತಾಯಿ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯ ಕೊಲೆಗೈದ ಮಗ
ಮೈಸೂರು, ಮಾರ್ಚ್ 5: ತಾಯಿಯ ಜತೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ ವ್ಯಕ್ತಿಯನ್ನು ಪುತ್ರನೊಬ್ಬ ತನ್ನ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿರುವ ಪ್ರಕರಣ ಇಲ್ಲಿನ ದಟ್ಟಗಳ್ಳಿಯಲ್ಲಿ ನಡೆದಿದೆ.
ಬಲ್ಲಹಳ್ಳಿಯ ಕಾಂತರಾಜು (45) ಕೊಲೆಯಾದ ವ್ಯಕ್ತಿ. ಇಲ್ಲಿನ ದಟ್ಟಗಳ್ಳಿ ನಿವಾಸಿ ಆದರ್ಶ (24) ಕೊಲೆ ಮಾಡಿದ ಯುವಕ. ಈತನ ಸ್ನೇಹಿತರಾದ ಮಹದೇವ (24), ತೇಜು (24) ಹಾಗೂ ಪುಟ್ಟರಾಜು (24) ಕೊಲೆಗೆ ಸಹಕರಿಸಿದವರು. ಇವರನ್ನೆಲ್ಲ ಈಗ ಬಂಧಿಸಲಾಗಿದೆ.
ತಾಲೂಕಿನ ಅರಸಿನಕೆರೆ- ಬೆಟ್ಟದಬೀಡು ಗ್ರಾಮದ ಮಧ್ಯದ ಮೀಸಲು ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿ ಫೆ. 26ರಂದು ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ತಲೆಯ ಭಾಗದಲ್ಲಿ ಬಲವಾದ ಏಟು ಬಿದ್ದಿರುವ ಗುರುತು ಇದ್ದುದ್ದರಿಂದ ಇದೊಂದು ಕೊಲೆ ಎಂಬುದು ಸಾಬೀತಾಗಿತ್ತು. ಆದರೆ, ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ.

ನಂತರ ಬಲ್ಲಹಳ್ಳಿಯ ಕಾಂತರಾಜು ಕಾಣೆಯಾಗಿದ್ದಾರೆ ಎಂಬ ದೂರು ದಾಖಲಾಯಿತು. ಶವಗಾರದಲ್ಲಿ ಮೃತದೇಹವನ್ನು ನೋಡಿದ ಕಾಂತರಾಜು ಸಂಬಂಧಿಕರು ಶವವನ್ನು ಗುರುತಿಸಿದರು. ಕೊಲೆ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಜಯಪುರ ಠಾಣೆ ಪೊಲೀಸರ ತಂಡ ಬಲೆ ಬೀಸಿತು.
ಕಾಂತರಾಜು ಅವರ ಸ್ನೇಹಿತರನ್ನು ವಿಚಾರಿಸಿದಾಗ ದಟ್ಟಗಳ್ಳಿಯಲ್ಲಿ ತರಕಾರಿ ವ್ಯಾಪಾರ ಮಾಡುವ ಮಹಿಳೆಯೊಬ್ಬರ ಜತೆ ಕಾಂತರಾಜು ಆತ್ಮೀಯ ಸಂಪರ್ಕ ಹೊಂದಿರುವ ವಿಚಾರ ತಿಳಿಯಿತು. ನಂತರ, ಆಕೆಯ ಪುತ್ರನನ್ನು ತೀವ್ರ ವಿಚಾರಣೆ ನಡೆಸಿದಾಗ ಕೊಲೆಯ ವಿಚಾರ ಗೊತ್ತಾಯಿತು.
ಕೊಲೆಗೆ ಕಾರಣ ಏನು?
ಕುಡಿದ ಅಮಲಿನಲ್ಲಿ ಆದರ್ಶನಿಗೆ ಕಾಂತರಾಜು ನಿನ್ನ ತಾಯಿಯ ಜತೆ ಸಂಬಂಧ ಇದ್ದು, ಆಕೆಯೊಡನೆ ಎಲ್ಲಿಯಾದರೂ ಹೊರಟು ಹೋಗುತ್ತೇನೆ ಎಂದು ಹೇಳಿದ್ದ. ಜತೆಗೆ ಹಣಕಾಸಿನ ವಿಚಾರವಾಗಿ ಇಬ್ಬರ ಮಧ್ಯೆ ವೈಮನಸ್ಯವೂ ಇತ್ತು. ಇದರಿಂದ ಕೋಪಗೊಂಡ ಆದರ್ಶ ತನ್ನ ಸ್ನೇಹಿತರೊಂದಿಗೆ ಸೇರಿ ಕಾರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಕಾಂತರಾಜುನನ್ನು ಹತ್ತಿಸಿಕೊಂಡು ಹೊಡೆದು ಕೊಲೆ ಮಾಡಿದ್ದಾನೆ. ನಂತರ, ಶವವನ್ನು ಅರಸಿನಕೆರೆ ಬಳಿ ರಸ್ತೆ ಬದಿ ಎಸೆದು ಹೊರಟು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications