ದಸರಾ ಆನೆ ದ್ರೋಣ ಸಾವಿನ ಸುತ್ತ ಅನುಮಾನದ ಹುತ್ತ

ಮೈಸೂರು, ಏಪ್ರಿಲ್ 28: ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೂಕಪ್ರಾಣಿ ದ್ರೋಣ ಆನೆ ಬಲಿಯಾಯಿತೇ? ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಕಳೆದ ಶುಕ್ರವಾರ ದಸರಾ ಗಜಪಡೆಯ ಆನೆ ದ್ರೋಣ ಸಾವಿಗೀಡಾಗಿತ್ತು.

ನೀರು ಕುಡಿಯುವ ವೇಳೆಯಲ್ಲಿ ಆನೆ ಕುಸಿದು ಬಿದ್ದು ಸಾವನ್ನಪ್ಪಿದೆ ಎಂದು ಶಿಬಿರದ ಅಧಿಕಾರಿಗಳು ಮಾಹಿತಿ ನೀಡಿದ್ದು, ಪಶುವೈದ್ಯರು ಆನೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಹೇಳಿದ್ದಾರೆ. ಈ ವಿಭಿನ್ನ ಹೇಳಿಕೆಗೆ ಸದ್ಯ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಮತ್ತಿಗೋಡು ಶಿಬಿರದಲ್ಲಿ ಮೈಸೂರು ದಸರಾ ಆನೆ ದ್ರೋಣ ಸಾವು
ದ್ರೋಣ ಸಾವಿಗೂ ಮುನ್ನ ನರಳಿ- ನರಳಿ ಪ್ರಾಣ ಬಿಟ್ಟಿದ್ದ ವೀಡಿಯೋ ಕೊನೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆನೆಯ ನರಳಾಟ ಕಂಡ ಮಾವುತರು ತಮ್ಮ ಮೊಬೈಲ್ ಮೂಲಕ ದ್ರೋಣ ಕೊನೆ ಕ್ಷಣದ ದೃಶ್ಯಾವಳಿಗಳನ್ನು ಸೆರೆ ಹಿಡಿದಿದ್ದಾರೆ. ಇದರ ಆಧಾರದ ಮೇಲೆ ಇದೀಗ ದ್ರೋಣನ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗುತ್ತಿವೆ.

ಇನ್ನು ದ್ರೋಣ ಆನೆಯ ಸಾವು ಅಸಹಜ ಎಂದು ಹೇಳಿರುವ ಶಿಬಿರದ ಅಧಿಕಾರಿಗಳು, ಆ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆನೆಯು ನೀರು ಕುಡಿಯುವ ಸಂದರ್ಭ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಕೊನೆಯುಸಿರೆಳೆಯುವ ಮುನ್ನ ಕಬ್ಬಿಣದ ಸರಪಳಿಯಿಂದ ದ್ರೋಣನನ್ನು ಮರವೊಂದಕ್ಕೆ ಕಟ್ಟಿ ಹಾಕಿರುವುದು ವಿಡಿಯೋ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಅಲ್ಲದೆ ಆನೆಗೆ ಈ ಹಿಂದಿನಿಂದಲೂ ಆರೋಗ್ಯದ ಸಮಸ್ಯೆ ಇದ್ದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರು ನಿರ್ಲಕ್ಷ್ಯ ವಹಿಸಿದ್ದರು ಎಂಬುದಾಗಿ ದ್ರೋಣನ ಮಾವುತನ ಆರೋಪಿಸಿದ್ದಾರೆ ಎನ್ನಲಾಗಿದೆ.

 ದ್ರೋಣನ ಸಾವಿಗೆ ಆಂತ್ರಾಕ್ಸ್ ಕಾರಣವಲ್ಲ

ದ್ರೋಣನ ಸಾವಿಗೆ ಆಂತ್ರಾಕ್ಸ್ ಕಾರಣವಲ್ಲ

ದ್ರೋಣನ ಸಾವಿಗೆ ಆಂತ್ರಾಕ್ಸ್ ಕಾರಣವಲ್ಲ ಎಂಬುದು ದೃಢಪಟ್ಟಿದೆ. ಇದು ಅಧಿಕಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ. ಕಳೆದ ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ಆಂತ್ರಾಕ್ಸ್ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಪರಿಣಾಮ ಹಲವಾರು ಪ್ರಾಣಿಗಳು ಮೃತಪಟ್ಟಿದ್ದವು. ಇದು ಅರಣ್ಯದಲ್ಲಿನ ಆನೆಗಳ ಪ್ರಾಣಕ್ಕೂ ಕುತ್ತು ತಂದಿತ್ತು. ಈ ಹಿನ್ನೆಲೆಯಲ್ಲಿ ದ್ರೋಣನ ದಿಢೀರ್ ಸಾವು, ಅರಣ್ಯಾಧಿಕಾರಿಗಳ ಆತಂಕಕ್ಕೆ ಕಾರಣವಾಗಿತ್ತು. ಆಂತ್ರಾಕ್ಸ್ ಮತ್ತೆ ಕಾಣಿಸಿಕೊಂಡಿದೆಯೋ ಎಂಬ ಅನುಮಾನ ಮೂಡಿತ್ತು. ಆದ್ದರಿಂದಲೇ ಮೃತ ಆನೆಯ ಶರೀರವನ್ನು ಕತ್ತರಿಸಿ ಮರಣೋತ್ತರ ಪರೀಕ್ಷೆ ಮಾಡದೆ, ಮೊದಲು ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳುಹಿಸಿ ವರದಿ ತರಿಸಿಕೊಂಡಿದ್ದರು. ಇದೀಗ, ವರದಿಯಲ್ಲಿ ದ್ರೋಣನ ಸಾವಿಗೆ ಆಂತ್ರಾಕ್ಸ್ ಕಾರಣವಲ್ಲ ಎಂಬ ಅಂಶ ದೃಢಪಟ್ಟಿರುವುದು ಅಧಿಕಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.

 ಮರಣೋತ್ತರ ಪರೀಕ್ಷೆಯ ವರದಿ ಬಂದಿಲ್ಲ

ಮರಣೋತ್ತರ ಪರೀಕ್ಷೆಯ ವರದಿ ಬಂದಿಲ್ಲ

ದ್ರೋಣನ ಅಕಾಲಿಕ ಸಾವಿನ ನಂತರ ನಾಗರಹೊಳೆ ಅಭಯಾರಣ್ಯಕ್ಕೆ ಸಾರ್ವಜನಿಕರು, ಮಾಧ್ಯಮದವರಿಗೆ ನಿಷೇಧ ಹೇರಲಾಗಿದೆ. ದ್ರೋಣನ ಮರಣೋತ್ತರ ಪರೀಕ್ಷೆಯ ವರದಿ ಬಾರದ ಕಾರಣ ಹಾಗೂ ಅರಣ್ಯ ಇಲಾಖೆಯ ನಿಯಮಗಳ ಪ್ರಕಾರ ಇಂತಹ ಸಂದರ್ಭದಲ್ಲಿ ಶಿಬಿರ ಹಾಗೂ ಅರಣ್ಯ ವ್ಯಾಪ್ತಿಯ ಉದ್ಯಾನವನಗಳಿಗೆ ಸಾರ್ವಜನಿಕರಿಗೆ ಪ್ರವೇಶ ನೀಡಲು ಅನುಮತಿ ಇಲ್ಲ ಎಂಬುದು ನಾಗರಹೊಳೆ ಅರಣ್ಯ ಅಧಿಕಾರಿಗಳ ಅಭಿಮತ.

 ಮೇಲ್ನೋಟಕ್ಕೆ ಹೃದಯಾಘಾತ ಅನಿಸುತಿದೆ

ಮೇಲ್ನೋಟಕ್ಕೆ ಹೃದಯಾಘಾತ ಅನಿಸುತಿದೆ

ನಾಗರಹೊಳೆ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ನಾರಾಯಣಸ್ವಾಮಿಯವರು ದ್ರೋಣನ ಸಾವು ಮೇಲ್ನೋಟಕ್ಕೆ ಹೃದಯಾಘಾತದಿಂದ ಸಂಭವಿಸಿರಬಹುದು ಎಂದು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅದರ ವರದಿ ಬಂದ ನಂತರವೇ ಸ್ಪಷ್ಟವಾಗಲಿದೆ. ಈ ಕುರಿತು ಸತ್ಯಾಂಶ ತಿಳಿದು ವರದಿ ಮಾಡುವಂತೆ ಮೈಸೂರಿನ ಪಶು ವೈದ್ಯಾಧಿಕಾರಿ ನಾಗರಾಜ್ ಅವರನ್ನು ನೇಮಿಸಲಾಗಿದೆ ಮರಳಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

 ಆನೆಗಳ ತಪಾಸಣೆ ಸೂಕ್ತವಾಗಿ ನಡೆಯುತ್ತಿಲ್ಲ

ಆನೆಗಳ ತಪಾಸಣೆ ಸೂಕ್ತವಾಗಿ ನಡೆಯುತ್ತಿಲ್ಲ

ಇದರೊಟ್ಟಿಗೆ ಆನೆಗಳ ಆರೋಗ್ಯ ತಪಾಸಣೆ ಸೂಕ್ತವಾಗಿ ನಡೆಯುತ್ತಿಲ್ಲ ಎನ್ನುವ ಆರೋಪಗಳು ಕೂಡ ಇವೆ. ಬೇಸಿಗೆಯಲ್ಲಿ ಆನೆಗಳಿಗೆ ನೀಡುವ ಆಹಾರದಲ್ಲಿ ಕೂಡ ವ್ಯತ್ಯಾಸವಾಗುತ್ತಿದೆ. ಆರೈಕೆಗೆ ಸೂಕ್ತ ಸಿಬ್ಬಂದಿ ಇಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಇನ್ನಾದರೂ ಅರಣ್ಯಾಧಿಕಾರಿಗಳು ಮೂಕ ಪ್ರಾಣಿಗಳ ರೋದನೆಯನ್ನು ಅರಿತು ಸೂಕ್ತವಾಗಿ ಸ್ಪಂದಿಸಬೇಕಿದೆ. ಆನೆಗಳನ್ನು ಅರಣ್ಯಕ್ಕೆ ಮೇಯಲು ಬಿಟ್ಟಮೇಲೆ ಮರಳಿ ಸುರಕ್ಷಿತವಾಗಿ ಶಿಬಿರಕ್ಕೆ ಕರೆತರುವುದು ಮಾವುತರು, ಕಾವಾಡಿಗಳ ಜವಾಬ್ದಾರಿ. ಈ ಬಗ್ಗೆ ಅರಣ್ಯಾಧಿಕಾರಿಗಳಿಂದ ಕಟ್ಟುನಿಟ್ಟಿನ ಸೂಚನೆ ಇಲ್ಲವಾಗಿದೆ. ಶಿಬಿರದ ಅರಣ್ಯಾಧಿಕಾರಿಗಳು ಎಚ್ಚರವಹಿಸದೇ ಇರುವುದರಿಂದ ಮತ್ತಿಗೋಡು ಶಿಬಿರದಲ್ಲಿ ಒಂದೊಂದೇ ಆನೆಗಳು ಜೀವ ಕಳೆದುಕೊಳ್ಳುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+