ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ಬಳಿಕ ಏನೇನಾಯ್ತು?
ಮೈಸೂರು, ಏಪ್ರಿಲ್ 24: ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಮಗ ಬಿ.ವೈ ವಿಜಯೇಂದ್ರಗೆ ಟಿಕೆಟ್ ನೀಡಬೇಕೆಂದು ನಾಯಕರು ಹಾಗೂ ಕಾರ್ಯಕರ್ತರ ಹೈಡ್ರಾಮವೇ ನಡೆಯಿತು. ಆದರೆ, ವಿಜಯೇಂದ್ರಗೆ ಟಿಕೆಟ್ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಘೋಷಿಸಿ, ಗದ್ದಲವೆಬ್ಬಿಸಿದ್ದ ನಾಯಕರು ಮತ್ತು ಕಾರ್ಯಕರ್ತರು ಬಳಿಕ ಎಲ್ಲಿ ಕಳೆದುಹೋದರು ಎಂಬ ಕುತೂಹಲ ಹುಟ್ಟುಹಾಕಿದೆ. ಮಂಗಳವಾರ ಮಧ್ಯರಾತ್ರಿಯಿಂದ ಅಲ್ಲಿ ಏನೇನಾಯಿತು? ಅಲ್ಲಿನ ಕೆಲವು ಬೆಳವಣಿಗೆಯ ಪ್ರಮುಖ ಅಂಶಗಳು ಇಲ್ಲಿವೆ.
ರಾತ್ರಿ 1.15 - ಟಿಕೆಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ರಾತ್ರಿ ಮೈಸೂರಿಗೆ ಆಗಮಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಬಿಜೆಪಿ ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್, ಬಿಎಸ್ ವೈ ಅವರನ್ನು ಭೇಟಿಯಾಗಿ ಸಭೆ ನಡೆಸಿದರು. ಟಿಕೆಟ್ ವಿಚಾರದಲ್ಲಿ ಗಲಾಟೆ ಶುರುವಾಗಿದ್ದರಿಂದ ಮಧ್ಯರಾತ್ರಿ ವೇಳೆಯೇ ಅವರು ಆಗಮಿಸಿದ್ದು ವಿಶೇಷ.
ಬೆಳಿಗ್ಗೆ 8.15 - ಬಿಜೆಪಿಯ ಉಭಯ ರಾಷ್ಟ್ರೀಯ ನಾಯಕರು ಬಿಎಸ್ವೈ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದರು.
ಇದಾದ ಬಳಿಕ ಸೋಮವಾರ ಬಂಡಾಯವೆದ್ದಿದ್ದ ಮೈಸೂರು, ಚಾಮರಾಜನಗರ ಅಭ್ಯರ್ಥಿಗಳ ಜೊತೆಯಲ್ಲಿಯೂ ಸಭೆ ನಡೆಸಿದರು. ಈ ಮಾತುಕತೆ ನಂತರ ಅಮಿತ್ ಷಾ ಹಾಗೂ ಪಿಯೂಷ್ ಗೋಯಲ್ಗೆ ಮಾಹಿತಿ ನೀಡಲಾಯಿತು.
ಬೆಳಿಗ್ಗೆ 8.35 - ಟಿಕೆಟ್ ನಿರಾಕರಣೆ ಘೋಷಣೆಯ ಬಳಿಕ ವಿಜಯೇಂದ್ರ ಸ್ಥಳದಿಂದ ನಾಪತ್ತೆಯಾಗಿದ್ದು ಕುತೂಹಲಕ್ಕೆ ಮೂಡಿಸಿತು. ಪ್ರಚಾರದ ಉದ್ದೇಶದಿಂದ ತಾವು ನಂಜನಗೂಡಿನಲ್ಲಿ ಮಾಡಿಕೊಂಡಿದ್ದ ಮನೆ ಹಾಗೂ ಯಡಿಯೂರಪ್ಪ ತಂಗಿದ್ದ ಹೋಟೆಲ್ ಗೂ ವಿಜಯೇಂದ್ರ ಬಂದಿರಲಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗಲಿಲ್ಲ.

ಬೆಳಿಗ್ಗೆ 8.45 - ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ್ದರಿಂದ ಮಂಡ್ಯ ಜಿಲ್ಲೆಯ ಬೂಕನಕೆರೆ ಅಭಿಮಾನಿಯಿಂದ ಆತ್ಮಹತ್ಯೆಯ ಬೆದರಿಕೆಯೊಡ್ಡಿದ ಘಟನೆ ಕೂಡ ನಡೆಯಿತು. ಟಿಕೆಟ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಮಧುಸೂದನ್ ಎಂಬುವವರು ಬೆದರಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ವೈರಲ್ ಆಗಿತ್ತು.
ಬೆಳಿಗ್ಗೆ 8.55 : ಗೊಂದಲ ನಿವಾರಣೆಗಾಗಿ ವಿಜಯೇಂದ್ರ ಪತ್ನಿ ನಾಡದೇವತೆ ಚಾಮುಂಡೇಶ್ವರಿ ಮೊರೆ ಹೋದರು. ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ವಿಜಯೇಂದ್ರ ಪತ್ನಿ ಪ್ರೇಮಾ ಮತ್ತು ಅವರ ತಾಯಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ವರುಣಾದಲ್ಲಿ ವಿಜಯೇಂದ್ರಗೇ ಟಿಕೆಟ್ ಕೊಡಿ: ಜಿಟಿ ದೇವೇಗೌಡ ಒತ್ತಾಯ
ಬೆಳಿಗ್ಗೆ 9.20 : ವಿಜಯೇಂದ್ರಗೆ ಟಿಕೆಟ್ ನೀಡುವಂತೆ ಮೈಸೂರಿನ ಹೋಟೆಲ್ ಮುಂದೆ ಕಾರ್ಯಕರ್ತರು ಮತ್ತೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರನ್ನು ಪೊಲೀಸರು ಹೊಟೇಲ್ ಮುಂಭಾಗದಿಂದ ಹೊರಕಳುಹಿಸಿದರು.
.
ಬೆಳಿಗ್ಗೆ 10 : ವಿಜಯೇಂದ್ರ ಅವರಿಗೆ ಅವಕಾಶ ನೀಡಬೇಕು ಎಂದು ಜಿಲ್ಲಾಪಂಚಾಯಿತಿ ಸದಸ್ಯ ಸದಾನಂದ್ ಮಾಧ್ಯಮದೆದುರು ಕಣ್ಣೀರು ಹಾಕಿದರು. ನನಗೂ ವಿಜಯೇಂದ್ರಗೂ ಅಣ್ಣ ತಮ್ಮನ ಸಂಬಂಧವಿದೆ. ಅವರ ಜಾಗದಲ್ಲಿ ಯಾರನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಮಿತ್ ಶಾ ಬಂದು ನಿಲ್ಲಿ ಎಂದು ಹೇಳಿದರೂ ನಾನು ವರುಣಾದಲ್ಲಿ ನಿಲ್ಲುವುದಿಲ್ಲ ಎಂದರು.
ಬೆಳಿಗ್ಗೆ 10.35 : ಎರಡು ಸುತ್ತಿನ ಮಾತುಕತೆ ಬಳಿಕ ಹೊರಬಂದ ಬಿಜೆಪಿ ನಾಯಕರು ವರುಣಾದಿಂದ ವಿಜಯೇಂದ್ರ ಸ್ಪರ್ಧೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೈಸೂರು-ಚಾಮರಾಜ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳು ಇದಕ್ಕೆ ಒಪ್ಪಿದ್ದಾರೆ. ವಿಜಯೇಂದ್ರಗೆ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗುವುದು. ವರುಣಾ ಕ್ಷೇತ್ರದಿಂದ ಬಿಜೆಪಿಯ ಬೇರೆ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದಾರೆ. 20 ದಿನ ಇಲ್ಲೇ ಉಳಿದು ವಿಜಯೇಂದ್ರ ಪ್ರಚಾರ ನಡೆಸಲಿದ್ದಾರೆ ಎಂದರು.
ಬೆಳಿಗ್ಗೆ 11.30: ವರುಣಾ ಬಿಜೆಪಿ ಅಭ್ಯರ್ಥಿ ಅಂತಿಮ ಮಾಡಿ ತೋಟದಪ್ಪ ಬಸವರಾಜು ಹೆಸರನ್ನು ಸೂಚಿಸಲಾಯಿತು.
ಟಿ.ನರಸೀಪುರ ನಿವಾಸಿಯಾಗಿರುವ ತೋಟದಪ್ಪ ಬಸವರಾಜುಗೆ ಟಿಕೇಟ್ ನೀಡಿ ಕಾರ್ಯಕರ್ತರನ್ನು ಸಮಾಧಾನಗೊಳಿಸಲಾಯಿತು.
ಮಧ್ಯಾಹ್ನ 12.30: ಮೈಸೂರಿನಲ್ಲಿ ವಿಜಯೇಂದ್ರಗೆ ಜೈ ಎಂದ ಜೆಡಿಎಸ್ ಮುಖಂಡ ಜಿ ಟಿ ದೇವೇಗೌಡ, ವಿಜಯೇಂದ್ರ ಪರ ಬ್ಯಾಟ್ ಬೀಸಿದರು. ಶ್ರೀನಿವಾಸ್ ಪ್ರಸಾದ್ ಹೈಕಮಾಂಡ್ ಮೇಲೆ ಒತ್ತಡ ಹಾಕಬೇಕು. ಗಲಾಟೆ ಮಾಡಿಯಾದರೂ ವಿಜಯೇಂದ್ರಗೆ ಟಿಕೆಟ್ ಕೊಡಿಸಬೇಕು ಎಂದು ಹೇಳಿದರು.
ಮಧ್ಯಾಹ್ನ 1.20: ವಿಜಯೇಂದ್ರಗೆ ಟಿಕೆಟ್ ಸಿಗದಿದ್ದರಿಂದ ಆಕ್ರೋಶಗೊಂಡ ಕೆಲ ಬಿಜೆಪಿ ಕಾರ್ಯಕರ್ತರುಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದಿಂದ ಕಚೇರಿಯ ಕಿಟಕಿ ಗಾಜುಗಳು ಪುಡಿ ಪುಡಿಯಾದವು. ಬಿಎಸ್ ವೈ ನಾಮಫಲಕ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಾಹ್ನ 1.40: ವರುಣಾ ಕ್ಷೇತ್ರ ರಾಜಕೀಯ ರಂಗು ಕಳೆದುಕೊಂಡಂತೆ ಮಂಕಾಯಿತು. ಬಿಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ನಾಮಪತ್ರ ಸಲ್ಲಿಸಲು ತೆರಳಿದಾಗ ಜನರೇ ಇರಲಿಲ್ಲ. ರಸ್ತೆಯೂ ಖಾಲಿ, ಕಚೇರಿ ಆವರಣವೂ ಖಾಲಿ ಖಾಲಿ ಹೊಡೆಯುತ್ತಿತ್ತು. ಬಸವರಾಜು ಅವರಿಂದ ಬಿ ಫಾರ್ಮ್ಅನ್ನು ಚುನಾವಣಾಧಿಕಾರಿಗಳು ಪಡೆದುಕೊಂಡರು. ಬಿಜೆಪಿ ನಾಯಕರು ಉತ್ಸಾಹ ಕಳೆದುಕೊಂಡಂತೆ ಸಪ್ಪೆ ಮೋರೆಯಲ್ಲಿ ಕಂಡುಬಂದರು.











Click it and Unblock the Notifications