ಬೆಟ್ಟದಪುರದಲ್ಲಿ ಸಂಭ್ರಮದಿಂದ ಜರುಗಿದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ
ಮೈಸೂರು, ಫೆಬ್ರವರಿ 11: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಇತಿಹಾಸ ಪ್ರಸಿದ್ಧ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವವು ಸಡಗರ, ಸಂಭ್ರಮದಿಂದ ಸೋಮವಾರ ನಡೆಯಿತು. ಈ ವೇಳೆ ನೆರೆದಿದ್ದ ಸಹಸ್ರಾರು ಭಕ್ತರು ಮಲ್ಲಿಕಾರ್ಜುನನಿಗೆ ಜಯಘೋಷ ಕೂಗಿ ಹಣ್ಣು ಜವನ ಎಸೆದು ಭಕ್ತಿಯನ್ನು ಸಮರ್ಪಿಸಿದರು.
ರಥಬೀದಿಯಲ್ಲಿ ಸಾಗಿ ಬಂದ ಬೆಳ್ಳಿಬಸವ, ಗಣಪತಿ ಹಾಗೂ ಭ್ರಮರಾಂಭ ಮಲ್ಲಿಕಾರ್ಜುನ ದೇವತೆಗಳ ಮೂರು ರಥಗಳಿಗೆ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು, ಹಣ್ಣು ಜವನ ಎಸೆದು ಜೈಘೋಷ ಕೂಗಿ ಭಕ್ತಿ ಮೆರೆದರು.
ರಥೋತ್ಸವದಲ್ಲಿ ಮೊದಲಿಗೆ ಬೆಳ್ಳಿ ಬಸವ, ಗಣಪತಿ ಹಾಗೂ ಗಿರಿಜಮ್ಮ ಮಲ್ಲಿಕಾರ್ಜುನ ಸ್ವಾಮಿ ದೇವರ ಮೂರ್ತಿಗಳನ್ನು ಪ್ರತ್ಯೇಕ ಮೂರು ರಥಗಳಲ್ಲಿ ಪ್ರತಿಷ್ಠಾಪಿಸಿ, ಬಳಿಕ ಪುರೋಹಿತರು ಶುಭಲಗ್ನದಲ್ಲಿ ಪೂಜೆ ಸಲ್ಲಿಸಿದರು. ಮೊದಲು ಬೆಳ್ಳಿ ಬಸವ ದೇವರ ರಥ, ಎರಡನೆಯದಾಗಿ ಗಣಪತಿ, ಕೊನೆಯದಾಗಿ ಗಿರಿಜಮ್ಮ ಮಲ್ಲಯ್ಯ ದೇವರು ಮೂರ್ತಿಗಳ ರಥವು ಸಾಗಿ ಬಂದಿತು. ಈ ವೇಳೆ ದಾರಿಯುದ್ದಕ್ಕೂ ಪೂಜೆ ಸಲ್ಲಿಸಲಾಯಿತು.

ರಥೋತ್ಸವದ ಅಂಗವಾಗಿ ಗಿರಿಜ ಕಲ್ಯಾಣ ನಡೆದಿದ್ದು ಈ ವೇಳೆ ನವ ದಂಪತಿಗಳು, ಯುವಕ ಯುವತಿಯರು ಸೇರಿದಂತೆ ಸಾವಿರಾರು ಭಕ್ತರು 3600 ಮೆಟ್ಟಿಲುಗಳಿರುವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು ಹತ್ತಿ ಇಳಿಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ರಥೋತ್ಸವಕ್ಕೆ ಆಗಮಿಸಿದ್ದ ಸರ್ವ ಭಕ್ತರಿಗೂ ಅನ್ನದಾನ ಸಮಿತಿ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು. ಜಾತ್ರೆಯಲ್ಲಿ ವಿವಿಧ ಸಿಹಿ ತಿಂಡಿ ಮತ್ತು ಗೃಹ ಉಪಯೋಗಿ ಅಂಗಡಿ ಮಳಿಗೆಗಳು ನಿರ್ಮಾಣವಾಗಿ ರಥೋತ್ಸವಕ್ಕೆ ಮೆರಗು ತಂದವು. ಜಾನುವಾರು ಜಾತ್ರೆಯಲ್ಲಿ ಉತ್ತಮ ಬೆಲೆ ಬಾಳುವ ರಾಸುಗಳ ಮಾಲೀಕರಿಗೆ ತಾಲೂಕು ಆಡಳಿತ ವತಿಯಿಂದ ಒಟ್ಟು ಮೂರು ಬಹುಮಾನಗಳು ಹಾಗೂ ಸಮಾಧಾನಕರ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.












Click it and Unblock the Notifications