ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಎದುರಿಗೆ 7 ಸವಾಲುಗಳು

By ಯಶಸ್ವಿನಿ ಎಂ.ಕೆ.
|
Google Oneindia Kannada News

Recommended Video

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಎದುರಾಗುವ 7 ಪ್ರಮುಖ ಸವಾಲುಗಳು | Oneindia Kannada

ಮೈಸೂರು, ಏಪ್ರಿಲ್ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ಮೂರೂವರೆ ದಶಕಗಳ ರಾಜಕೀಯ ಅನುಭವ. ಮೈಸೂರು ಜಿಲ್ಲೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರನ ಎದೆ ಬಡಿತ, ನಾಡಿ ಮಿಡಿತ ಬಲ್ಲ ಅವರು, ಚುನಾವಣೆಗೆ ಈ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುತ್ತೇನೆ ಎಂದು ಮಾಧ್ಯಮದ ಎದುರು ಮೂರು ಬಾರಿ ಹೇಳಿದ್ದರು.

ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ! ಸಿದ್ದುವನ್ನು ಸೋಲಿಸಲು ಜೆಡಿಎಸ್ ಬಳಿಯಿದೆ ರೇವಣಾಸ್ತ್ರ!

ಅದೆಷ್ಟು ಸಲ ಹೇಳಬೇಕ್ರಿ ನಿಮಗೆ, ಕೇಳಿದ್ದೇ ಕೇಳ್ತೀರಲ್ಲ ಎಂದು ಸಿಟ್ಟು ಮಾಡಿಕೊಂಡು ಪ್ರಶ್ನಿಸಿದ್ದರು. ಆದರೂ ಸಿದ್ದರಾಮಯ್ಯ ಈ ಸಲ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತೇ ಹರಿದಾಡುತ್ತಿತ್ತು. ಬೆಂಕಿ ಇಲ್ಲದೆ ಹೊಗೆ ಆಡುತ್ತದೆಯಾ? ಆ ಮಾತೀಗ ನಿಜವಾಗಿದೆ. ಚಾಮುಂಡೇಶ್ವರಿ ಕ್ಷೇತ್ರದೊಂದಿಗೆ ಬನಶಂಕರಿ ದೇವಿಯ ತಾಣ ಉತ್ತರ ಕರ್ನಾಟಕದ ಬಾದಾಮಿಯಿಂದಲೂ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಜನತಾದಳದಲ್ಲಿ, ಆ ನಂತರ ಜೆಡಿಎಸ್ ನಲ್ಲಿ ಮುಂದುವರಿದಿದ್ದ ಸ್ನೇಹಿತ, ದಶಕಗಳ ಒಡನಾಡಿ, ಹೊಸದಾಗಿ ಶತ್ರುತ್ವ ಬೆಳೆದಿರುವ ಜಿ.ಟಿ.ದೇವೇಗೌಡ ಅದೇ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧೆಗೆ ನಿಂತಿದ್ದಾರೆ. ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ಇಬ್ಬರೂ ಒಂದೇ ಗರಡಿ ಮನೆಯವರು. ಆ ಗರಡಿ ಮನೆಯ ಉಸ್ತಾದ್ ಆಗಿದ್ದವರೂ ಒಬ್ಬರೇ.

ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿಯಲ್ಲಿ ಸೋಲುವ ಭೀತಿಯೆ ಎಂಬ ಪ್ರಶ್ನೆ ಉದ್ಭವಿಸಿದೆ. ಈ ನಿರ್ಧಾರವು ಸ್ವತಃ ಮುಖ್ಯಮಂತ್ರಿಗಳದೋ ಅಥವಾ ಆಪ್ತ ವಲಯದ್ದೋ, ಇದ್ಯಾವುದೂ ಅಲ್ಲದೇ ಹೈ ಕಮಾಂಡ್ ನ ರಣತಂತ್ರವೋ ಇನ್ನೂ ಗೊತ್ತಾಗಿಲ್ಲ. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದುಗೆ ಸಲೀಸಲ್ಲ ಎನ್ನುವುದಕ್ಕೆ ಇಲ್ಲಿವೆ 7 ಪ್ರಮುಖ ಕಾರಣಗಳು.

ಒಕ್ಕಲಿಗ ವಿರೋಧಿ ಎಂಬ ಹಣೆಪಟ್ಟಿ

ಒಕ್ಕಲಿಗ ವಿರೋಧಿ ಎಂಬ ಹಣೆಪಟ್ಟಿ

ಜಾತಿವಾರು ಮತಗಳು ಹೇಗೆ ವರ್ತಿಸುತ್ತವೆ ಎಂದು ಹೇಳಲು ಅಸಾಧ್ಯ. ಆದರೆ ಒಕ್ಕಲಿಗ ಮತಬ್ಯಾಂಕ್ ಅನ್ನು ಒಂದೆಡೆ ಕ್ರೋಡೀಕರಿಸಿ, ಸಿದ್ದರಾಮಯ್ಯ ವಿರುದ್ಧ ಅಸ್ತ್ರವಾಗಿ ಬಳಸಲು ಜೆಡಿಎಸ್ ಭಾರೀ ತಂತ್ರವನ್ನೇ ಹೆಣೆಯುತ್ತಿದೆ. ಇನ್ನು ಸಿದ್ದರಾಮಯ್ಯ ಅವರು ಜಿಟಿ ದೇವೇಗೌಡ ವಿರುದ್ಧ ಬಾಯಿಗೆ ಬಂದ ಹಾಗೆ ಮಾತನಾಡಿ, ಒಕ್ಕಲಿಗ ವಿರೋಧಿ ಎಂದು ಈಗಾಗಲೇ ಬಿಂಬಿತವಾಗಿದೆ. ಹೀಗೆ ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದು ಈ ಹಿಂದೆ ಕಾಂಗ್ರೆಸ್ ನಲ್ಲಿದ್ದು ಸೋತ ವಿಶ್ವನಾಥ್. ಅವರ ಸೋಲೇ ಇದಕ್ಕೆ ಉದಾಹರಣೆ.

ಲಿಂಗಾಯತ- ವೀರಶೈವ ವಿವಾದದ ಬಗೆಗಿನ ಆಕ್ಷೇಪ

ಲಿಂಗಾಯತ- ವೀರಶೈವ ವಿವಾದದ ಬಗೆಗಿನ ಆಕ್ಷೇಪ

ಇನ್ನು ಲಿಂಗಾಯತ ಧರ್ಮ ವಿವಾದ ಕಾಂಗ್ರೆಸ್ ಗೆ ಪೂರಕವಾಗಬಹುದು ಎಂಬುದು ಮೇಲ್ನೋಟ. ಆದರೆ ವಿವಾದ ಕೆಲವೊಬ್ಬರಿಗೆ ಹಿಡಿಸಿಲ್ಲ. ಅವರ ಮತಗಳು ಇಲ್ಲಿ ಹೆಚ್ಚು ಪರಿಗಣನೆಗೆ ಬರುವಲ್ಲಿ ಸಂಶಯವಿಲ್ಲ. ಉದಾಹರಣೆಗೆ ಇತ್ತೀಚೆಗೆ ವೀರಶೈವ ಮಹಾಸಭಾದ ಹಿನಕಲ್ ಬಸವರಾಜ್ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದು. ಅವರನ್ನು ವಜಾಗೊಳಿಸಲು ಸಿದ್ದರಾಮಯ್ಯರನ್ನು ಬೆಂಬಲಿಸಿದರು ಎಂಬುದೇ ಕಾರಣ.

ಜೆಡಿಎಸ್ ಅಭ್ಯರ್ಥಿಗೇ ಬಿಜೆಪಿ ಬೆಂಬಲ ನೀಡಿಬಿಟ್ಟರೆ..

ಜೆಡಿಎಸ್ ಅಭ್ಯರ್ಥಿಗೇ ಬಿಜೆಪಿ ಬೆಂಬಲ ನೀಡಿಬಿಟ್ಟರೆ..

ಬಿಜೆಪಿ ಅಭ್ಯರ್ಥಿ ಯಾರು, ಪಕ್ಷದ ನಿಲುವೇನು ಎನ್ನುವುದು ಸಮುದಾಯದ ಮತ ಪಲ್ಲಟಕ್ಕೆ ಕಾರಣವಾಗಬಹುದು. ಒಂದೊಮ್ಮೆ ಬಿಜೆಪಿಯು ನಾಯಕ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಚಿತ್ರಣವೇ ಬೇರೆಯಾಗಲಿದೆ. ಇಲ್ಲದಿದ್ದರೆ ಸ್ಪರ್ಧಿಯನ್ನು ಹಾಕದೆ ಜೆಡಿಎಸ್ ಗೆ ಪರೋಕ್ಷ ಬೆಂಬಲ ನೀಡುವ ಯೋಚನೆ ಮಾಡಿದರಂತೂ ಸಿದ್ದರಾಮಯ್ಯ ಅವರಿಗೆ ಸವಾಲು ಇನ್ನಷ್ಟು ಕಷ್ಟವಾಗುತ್ತದೆ.

ಸಿದ್ದರಾಮಯ್ಯ ರಾಜಕೀಯ ವಿರೋಧಿಗಳೆಲ್ಲ ಒಟ್ಟಾಗಿದ್ದಾರೆ

ಸಿದ್ದರಾಮಯ್ಯ ರಾಜಕೀಯ ವಿರೋಧಿಗಳೆಲ್ಲ ಒಟ್ಟಾಗಿದ್ದಾರೆ

ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ನಿಂತಿದ್ದು ವರುಣಾದಲ್ಲಿ. ಈ ಹಿಂದಿನ ಉಪ ಚುನಾವಣೆ ಅಖಾಡದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದುಗೆ ದೊರೆತಿದ್ದು ಇನ್ನೂರೈವತ್ತು ಮತಗಳ ಅಂತರದ ಗೆಲುವು ಮಾತ್ರ. ಇನ್ನು ಸಿದ್ದು ಬೆನ್ನಿಗೆ ನಿಂತಿದ್ದ ಕಾಂಗ್ರೆಸ್ ಘಟಾನುಘಟಿಗಳು ಈ ಬಾರಿ ಕೈಗೆ ಗುಡ್ ಬೈ ಹೇಳಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರ ರಾಜಕೀಯ ಶತ್ರುಗಳೆಲ್ಲ ಒಂದೆಡೆ ಸೇರಿದಂತಿದೆ. ಇದು ಕೂಡ ಸಿದ್ದರಾಮಯ್ಯ ಅವರ ಪಾಲಿಗೆ ಪ್ರಮುಖ ಸವಾಲು.

ಸಿದ್ದು ಸೋಲಿಗೆ ದೇವೇಗೌಡರ ಶಪಥ

ಸಿದ್ದು ಸೋಲಿಗೆ ದೇವೇಗೌಡರ ಶಪಥ

ಈಗಿನ ವಿಧಾನಸಭೆ ಚುನಾವಣೆ ಜಿಟಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರ ಜಟ್ಟಿ ಕಾಳಗದ ಅಖಾಡ. ಅವರ ಜೊತೆಯಲ್ಲೇ ಗತ ಕಾಲದ ಸ್ನೇಹಿತ ಜಿ.ಟಿ.ದೇವೇಗೌಡ ಅವರು ಸಿದ್ದುಗಿಂತಲೂ ಹೆಚ್ಚು ಚಾಣಾಕ್ಷತನದಿಂದ ಪ್ರತಿತಂತ್ರ ಹೆಣೆಯಬಲ್ಲರು. ಅವರಿಗೆ ರಾಜಕೀಯ ಗುರುವೆಂದೇ ಬಿಂಬಿತವಾಗಿರುವ, ಮಾಜಿ ಪ್ರಧಾನಿ ದೇವೇಗೌಡರು, ನಾನು ಸಿದ್ದರಾಮನನ್ನು ಮಣಿಸಿಯೇ ತೀರುತ್ತೇನೆ ಎಂದು ಸವಾಲು ಎಸೆದಿರುವುದರಿಂದ ಚುನಾವಣೆ ಅಖಾಡ ಮತ್ತಷ್ಟು ಕಷ್ಟ ಆಗುವುದರಲ್ಲಿ ಅನುಮಾನವಿಲ್ಲ.

ಯುವ ಸಮುದಾಯದವರು ಓಟು ಹಾಕಬಹುದೇ ಎಂಬ ಅನುಮಾನ

ಯುವ ಸಮುದಾಯದವರು ಓಟು ಹಾಕಬಹುದೇ ಎಂಬ ಅನುಮಾನ

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ‌ಹಿರಿಯ ಮತದಾರರ ಪ್ರಾಬಲ್ಯದಷ್ಟೇ ಯುವ ಸಮುದಾಯದ ಪಾತ್ರವೂ ಇದೆ. ಆ ವಯಸ್ಸಿನವರನ್ನು ಎಚ್.ಡಿ.ಕುಮಾರಸ್ವಾಮಿ ತಮ್ಮ ಮಾತಿನ ಮೋಡಿಯಿಂದ ಹಿಡಿದಿಟ್ಟಿದ್ದಾರೆ. ಇನ್ನು ಸಿದ್ದರಾಮಯ್ಯ ಹೋದಲ್ಲೆಲ್ಲಾ, ನಿಮ್ಮ ಅಪ್ಪ- ಅಮ್ಮ, ಅಜ್ಜ ನನಗೇ ಓಟು ಹಾಕಿರೋದು. ನೀವು ನನಗೇ ಓಟು ಹಾಕಿ ಎನ್ನುತ್ತಿರುವುದು ಕಂಡುಬರುತ್ತಿದೆ.

ಕ್ಷೇತ್ರದಲ್ಲಿನ ಬದಲಾವಣೆಯನ್ನು ಗುರುತಿಸಬೇಕಿದೆ

ಕ್ಷೇತ್ರದಲ್ಲಿನ ಬದಲಾವಣೆಯನ್ನು ಗುರುತಿಸಬೇಕಿದೆ

ಸಿದ್ದರಾಮಯ್ಯ ಪ್ರಚಾರದ ವೇಳೆ ಹೆಚ್ಚು ಜನ ಕಾಣುತ್ತಿಲ್ಲ. ಚುನಾವಣಾ ಪ್ರಚಾರದ ಕಾರ್ಯಕ್ರಮದಲ್ಲೂ ಕಾರ್ಯಕರ್ತರಿಗಿಂತ ಕರೆತಂದ ಜನರೇ ಹೆಚ್ಚು ಕಾಣುತ್ತಾರೆ. ಹಳ್ಳಿಗಳಲ್ಲಿ ಯಾವುದೇ ಸ್ಥಿತಿ ಕಂಡರೂ ಕೊನೆಯ ದಿನಗಳ ಆಟವಷ್ಟೇ ವರ್ಕೌಟ್ ಆಗುವುದು ಹೆಚ್ಚು. ಮೇಲ್ನೋಟಕ್ಕೆ ಸಿದ್ದರಾಮಯ್ಯ ಪಡೆಯಷ್ಟೇ ಅವರ ಶತ್ರು ಪಡೆಯೂ ಸಮಬಲದ ಸೆಣಸಿಗೆ ಸಜ್ಜಾದಂತಿದೆ. ಎರಡು ಚುನಾವಣೆಗಳಲ್ಲಿ ಇಲ್ಲಿ ಆಗಿರುವ ಬದಲಾವಣೆಗಳನ್ನು ಗುರುತಿಸಿ, ಜನರ ಮನಸ್ಸನ್ನು ಗೆಲ್ಲುವುದು ಮುಖ್ಯವಾಗಿದೆ.

English summary
Karnataka Assembly Elections 2018: Siddaramaiah's contest from Chamundeshwari constituency is become tougher. Here is the 7 reasons or challenges for Siddaramaiah tough competition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X