ಪ್ರಸಾದ್ ಗೆ ಭರ್ಜರಿ ಗುದ್ದು ನೀಡಿದ ಸಿಎಂ ಸಿದ್ದು
ಸಚಿವರಾಗಿದ್ದ ವಿ. ಶ್ರೀನಿವಾಸ ಪ್ರಸಾದ್ ತಮ್ಮನ್ನು ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿ.ಜೆ.ಪಿ. ಸೇರಿದ್ದರು. ಆದರೆ ಅವರನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿ ಯಶಸ್ವಿಯಾಗಿದೆ.
ಮೈಸೂರು, ಏಪ್ರಿಲ್ 13 : ಕೊನೆಗೂ ಬಹು ನಿರೀಕ್ಷಿತ ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಭರ್ಜರಿ ಮೇಲುಗೈ ಸಾಧಿಸಿದೆ. ಬಿಜೆಪಿ ಎರಡೂ ಸ್ಥಾನಗಳಲ್ಲಿ ಪರಾಭವಗೊಂಡಿದ್ದು ಮುಖಭಂಗ ಅನುಭವಿಸಿದೆ.
ಬಿಜೆಪಿ ಸೋಲಿನ ಹಿಂದೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್..!
ನಂಜನಗೂಡು ಕ್ಷೇತ್ರದಿಂದ ಚುನಾಯಿತರಾಗಿದ್ದ ವಿ. ಶ್ರೀನಿವಾಸ ಪ್ರಸಾದ್ ಸಚಿವರಾಗಿದ್ದರು, ತಮ್ಮನ್ನು ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿ.ಜೆ.ಪಿ. ಸೇರಿದ್ದರು. ಆದರೆ ಅವರನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿ ಯಶಸ್ವಿಯಾಗಿದೆ.[ಎರಡು ಬಾರಿ ಸೋತು ಗೆದ್ದ ಕಳಲೆ ಕೇಶವಮೂರ್ತಿ ಯಾರು?]
ಗುಂಡ್ಲುಪೇಟೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಹದೇವ ಪ್ರಸಾದ್ ಕೂಡ ಸಚಿವರಾಗಿದ್ದರು. ಅವರ ಅಕಾಲಿಕ ನಿಧನದಿಂದ ಉಪ ಚುನಾವಣೆ ನಿಗದಿಯಾಗಿತ್ತು. ಗೀತಾ ಮಹಾದೇವ ಪ್ರಸಾದ್ ಪರ ಅನುಕಂಪದ ಅಲೆಯನ್ನೇ ಬೆನ್ನೇರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಸಿ.ಎಸ್. ನಿರಂಜನ್ ಕುಮಾರ್ ನಿರಂತರ ಸೋಲು ಕಂಡಿದ್ದರಿಂದ ಮತದಾರರು ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿದರೂ ಗೀತಾ ಮೇಲಿದ್ದ ಅನುಕಂಪದ ಅಲೆಯ ಮುಂದೆ ಜಯಗಳಿಸಲು ಸಾಧ್ಯವಾಗಿಲ್ಲ.[ಚುನಾವಣೆ ಗದ್ದಲ ಮುಗಿದರೂ ಅನುರಣಿಸುತ್ತಿವೆ ನಾಯಕರ ಹೇಳಿಕೆ]

ರಣತಂತ್ರ ಯಶಸ್ವೀ
ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್ ಮೊದಲಾದವರು ಗುಂಡ್ಲುಪೇಟೆಯಲ್ಲಿ ಬೀಡು ಬಿಟ್ಟು ಚುನಾವಣಾ ರಣತಂತ್ರ ರೂಪಿಸಿದ್ದರು. ಅನುಕಂಪದ ಅಲೆ, ಸಂಘಟಿತ ಪ್ರಚಾರ, ಜೊತೆಗೆ ಗೀತಾ ಅವರಿಗೆ ಸಚಿವ ಸ್ಥಾನ ನೀಡಲಾಗುವುದೆಂದು ಘೋಷಿಸಿದ್ದು, ಗೆಲುವಿಗೆ ಕಾರಣವಾಗಿದೆ.

ಅನುಕಂಪದ ಅಲೆ
ಇನ್ನು ಇದೇ ವೇಳೆ ಬಿ.ಎಸ್. ಯಡಿಯೂರಪ್ಪ ಅವಿರೋಧವಾಗಿ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದಾಗಿ ಗೀತಾ ಕಣ್ಣೀರಿಟ್ಟಿದ್ದು, ಸಂಸದ ಪ್ರತಾಪ್ ಸಿಂಹ ನೀಡಿದ ಗೂಟದ ಕಾರಿನ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು ಕೂಡ ಚುನಾವಣೆ ಮೇಲೆ ಪರಿಣಾಮ ಬೀರಿದೆ. ನಂಜನಗೂಡಿನಲ್ಲಿ ಚುನಾವಣೆ ಘೋಷಣೆಯಾದಾಗಿನಿಂದಲೂ ಸಚಿವ ಮಹಾದೇವಪ್ಪ ಉಸ್ತುವಾರಿಯಲ್ಲಿ ಕಾರ್ಯತಂತ್ರ ರೂಪಿಸಲಾಗಿತ್ತು. ಅವರು ಹಳ್ಳಿಗಳಿಗೆ ಭೇಟಿ ನೀಡಿ ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಶ್ರೀನಿವಾಸ್ ಪ್ರಸಾದ್ ಸೋಲಿಗೆ ಗೈರು ಹಾಜರೇ ಕಾರಣ
ಶ್ರೀನಿವಾಸ ಪ್ರಸಾದ್ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದೇ, ಅತಿಯಾದ ವಿಶ್ವಾಸದಲ್ಲಿದ್ದರು. ಶ್ರೀನಿವಾಸ ಪ್ರಸಾದ್ ಸೇರ್ಪಡೆಯಿಂದ ಬಿ.ಜೆ.ಪಿ. ನಾಯಕರ ವಿಶ್ವಾಸ ಇಮ್ಮಡಿಸಿತ್ತು.
ಆದರೆ ತವರು ಜಿಲ್ಲೆ ಮೈಸೂರಿನಲ್ಲಿ ಪ್ರಭಾವ ಹೊಂದಿರುವ ಸಿದ್ಧರಾಮಯ್ಯ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಿ.ಜೆ.ಪಿ. ನಾಯಕರು ಸಂಘಟಿತ ಪ್ರಚಾರ ನಡೆಸಿದ್ದರೂ, ಗೆಲುವಿಗಾಗಿ ಎಲ್ಲಾ ಕಾರ್ಯತಂತ್ರವನ್ನು ರೂಪಿಸಿದ್ದರೂ, ಗೆಲುವು ದೊರೆತಿಲ್ಲ. ಸಾಮಾನ್ಯವಾಗಿ ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷ ಗೆಲುವು ಸಾಧಿಸುತ್ತದೆ. ಅದು ಈ ಉಪ ಚುನಾವಣೆಯಲ್ಲಿಯೂ ಮರುಕಳಿಸಿದೆ.

ಪ್ರತಿಷ್ಠೆಯ ಪ್ರಶ್ನೆಯಾಗಿತ್ತು
ಯಡಿಯೂರಪ್ಪ-ಸಿದ್ದರಾಮಯ್ಯ ನಡುವಿನ ಪ್ರತಿಷ್ಠೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಯಕತ್ವಕ್ಕೆ ಗೆಲುವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮೈಸೂರಿನಲ್ಲೇ ಬೀಡು ಬಿಟ್ಟು ಪ್ರಚಾರ ನಡೆಸಿದ್ದರು. ಗೆಲುವಿಗಾಗಿ ಎಲ್ಲಾ ರೀತಿಯ ತಂತ್ರಗಾರಿಕೆ ರೂಪಿಸಿದ್ದರು. ಎರಡೂ ಪಕ್ಷಗಳ ನಾಯಕರ ದಂಡೇ ಹಳ್ಳಿ, ಹಳ್ಳಿಗಳನ್ನು ಸುತ್ತಿ ಪ್ರಚಾರ ನಡೆಸಿದ್ದರು. ಆದರೆ ಮತದಾರರು ಮಾತ್ರ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ.

ಬಾಡಿದ ಮೊಗದಲ್ಲಿ ಯಡಿಯೂರಪ್ಪ
ನಂಜನಗೂಡು ಮತ್ತು ಗುಂಡ್ಲು ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತೀವ್ರ ಬೇಸರಗೊಂಡಿದ್ದಾರೆ. ಬೆಂಗಳೂರಿನ ತಮ್ಮ ಮನೆಯಲ್ಲಿ ಬೆಳಗ್ಗೆಯಿಂದಲೇ ಟಿವಿ ನೋಡುತ್ತಾ ಕುಳಿತಿದ್ದ ಯಡಿಯೂರಪ್ಪ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶದ ನಂತರ ಶಿಕಾರಿಪುರ ಶಾಸಕ ಹಾಗೂ ಪುತ್ರ ಬಿವೈ ರಾಘವೇಂದ್ರ ಹಾಗೂ ಮಾಜಿ ಸಚಿವ ಅಶೋಕ್ ಅವರನ್ನು ಬಿಟ್ಟರೆ ಬಿಜೆಪಿಯ ಯಾವ ನಾಯಕರೂ ಅತ್ತ ಸುಳಿದಿಲ್ಲ ಎನ್ನಲಾಗಿದೆ.

ನಾಯಕನಿಗೆ ಧೈರ್ಯ ತುಂಬುವ ಯತ್ನ
ಉಪಚುನಾವಣೆಯಲ್ಲಿ ತಮ್ಮಿಬ್ಬರು ಅಭ್ಯರ್ಥಿಗಳು ಸೋಲನುಭವಿಸುತ್ತಿದ್ದಂತೆ ಬಿಜೆಪಿ ನಾಯಕರು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಜಮಾವಣೆಗೊಳ್ಳತೊಡಗಿದ್ದಾರೆ. ಶ್ರಮಪಟ್ಟರೂ ಪ್ರತಿಫಲ ಸಿಕ್ಕಿಲ್ಲ ಎಂಬ ನಿರಾಸೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಧೈರ್ಯ ತುಂಬಲು ಪಕ್ಷದ ಹಿರಿಯ ನಾಯಕರು ಆಗಮಿಸುತ್ತಿದ್ದಾರೆ.
ಮೊದಲ ಸುತ್ತಿನಿಂದಲೂ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಬಿಜೆಪಿ ನಾಯಕರಲ್ಲಿ ಆತಂಕ ಮೂಡಿಸಿತ್ತು. ಸೋಲು ನಿಚ್ಚಳವಾಗುತ್ತಿದ್ದಂತೆ ಯಡಿಯೂರಪ್ಪ ಅವರ ನಿವಾಸದತ್ತ ಹೆಜ್ಜೆ ಹಾಕಿದ್ದಾರೆ.












Click it and Unblock the Notifications