ಅದು 'ಮೂಡ್' ಅಲ್ಲ, ಜನರ ಅಭಿಪ್ರಾಯ:ನಗೆ ಚಟಾಕಿ ಹಾರಿಸಿದ ಸಿದ್ದರಾಮಯ್ಯ
ಮೈಸೂರು, ಏಪ್ರಿಲ್ 15:ನಾನು ಕೇವಲ ಚಾಮುಂಡೇಶ್ವರಿಯಲ್ಲಿ ಮಾತ್ರ ಚುನಾವಣೆಯಲ್ಲಿ ನಿಲ್ಲಲ್ಲ ಎಂದಿದ್ದೆ ಅಷ್ಟೇ.ಆದರೆ ಬೇರೆ ಕಡೆ ನಿಲ್ಲುವುದಿಲ್ಲ ಅಂತ ಹೇಳಿದ್ದೀನಾ? ಇನ್ನೂ ಚುನಾವಣೆಗೆ ನಾಲ್ಕು ವರ್ಷ ಬಾಕಿ ಇದೆ.ಮುಂದೆ ನೋಡೋಣ ಬಿಡಿ ಎಂದು ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಚಾಮುಂಡೇಶ್ಚರಿ ಕ್ಷೇತ್ರಕ್ಕೂ ಋಣ ಮುಗಿದಿದೆ. ಕೇವಲ ಚಾಮುಂಡೇಶ್ಚರಿಯಲ್ಲಿ ಮಾತ್ರ ಚುನಾವಣೆಯಲ್ಲಿ ನಿಲ್ಲಲ್ಲ ಎಂದಿದ್ದೆ ಅಷ್ಟೇ.ಆದರೆ ನಾನು ಬೇರೆ ಕಡೆ ನಿಲ್ಲೋದಿಲ್ಲ ಅಂತ ಹೇಳಿಲ್ಲವಲ್ಲ ಎಂದರು.
ಕೊನೆಗೂ ಒಂದಾದ ಸಿದ್ದರಾಮಯ್ಯ, ಜಿಟಿಡಿ:ಇಂದು ಚಾಮುಂಡೇಶ್ವರಿಯಲ್ಲಿ ಭರ್ಜರಿ ಪ್ರಚಾರ
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಸೋತಲ್ಲಿ ಸರ್ಕಾರ ಉಳಿಯುತ್ತಾ ಎಂಬ ತಮ್ಮ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಹೇಳಿದ್ದು ಮೈತ್ರಿ ಪಕ್ಷ ಸೋತರೆ ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸಬಹುದು ಎಂಬರ್ಥ ಬರುತ್ತದೆ ಎಂದು ಸ್ಪಷ್ಟಪಡಿಸಿದರು.
ಪರ್ಸೆಂಟೇಜ್ ಸರ್ಕಾರ ಎಂಬ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಒಬ್ಬ ಪ್ರಧಾನಿಯಾಗಿ ಇಂತಹ ಹೇಳಿಕೆಗಳನ್ನ ಕೊಡಬಾರದು. ಇದೊಂದು ಆರೋಪರಹಿತ ಮಾತುಗಳು. ಅವರ ಬಳಿ ಇಂಟೆಲಿಜೆನ್ಸ್ ಸೇರಿದಂತೆ ಹಲವು ಇಲಾಖೆಗಳಿದೆ. ಇಂತಹ ಆರೋಪ ಮಾಡುವ ಮುನ್ನ ಯೋಚನೆ ಮಾಡಬೇಕು. ಕಳೆದ ಐದು ವರ್ಷದಲ್ಲಿ ಕೇವಲ ಬೇಡದ್ದನ್ನೇ ಮಾತನಾಡುತ್ತಿದ್ದಾರೆ ಎಂದರು.
ದೇವೇಗೌಡ ಪರ ಸಿದ್ದರಾಮಯ್ಯ ಮತಯಾಚನೆ: ಮೋದಿ ವಿರುದ್ಧ ವಾಗ್ದಾಳಿ
ಇನ್ನು ಎಲೆಕ್ಷನ್ ಮೂಡ್ ಹೇಗಿದೆ ಸರ್ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೂಡ್ ಅಂದ್ರೆ ಏನು? ಮೂಡ್ ಅಂದ್ರೆ ಬೇರೆ ಕಣಪ್ಪ. ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ. ಈಗ ಇರೋದು ಜನರ ಅಭಿಪ್ರಾಯ ಅಷ್ಟೇ. ಜನರು ಕಾಂಗ್ರೆಸ್ ಪರವಾಗಿ, ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ನಿರ್ಧಾರ ಮಾಡಿದ್ದಾರೆ. ಅದು ಮೂಡ್ ಅಲ್ಲ, ಜನರ ಅಭಿಪ್ರಾಯ. ನೀವ್ ಯಾವ್ ಮೂಡ್ ಅಲ್ಲಿ ಕೇಳ್ತಿದ್ದೀರೋ ನನಗೆ ಗೊತ್ತಿಲ್ಲ. ಮೂಡ್ ಬೇರೆ ಜನರ ಅಭಿಪ್ರಾಯ ಬೇರೆ ಎಂದು ಇದೇ ವೇಳೆ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.