ಹಿಮಪಾತಕ್ಕೆ ಎಚ್.ಡಿ.ಕೋಟೆಯ ಯೋಧ ಮಹೇಶ್ ಬಲಿ
ಮೈಸೂರು, ಫೆಬ್ರವರಿ 06 : ಜಮ್ಮು ಕಾಶ್ಮೀರದ ಸಿಯಾಚಿನ್ ಬಳಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಸಾವನ್ನಪ್ಪಿದ ಹತ್ತು ಮಂದಿ ಯೋಧರಲ್ಲಿ ಹೆಗ್ಗಡೆದೇವನ ಕೋಟೆ(ಎಚ್.ಡಿ.ಕೋಟೆ) ಜೋಣಿಗೇರಿ ಬೀದಿಯ ನಿವಾಸಿ ದಿ. ನಾಗರಾಜು ಮತ್ತು ಯಶೋಧಮ್ಮ ದಂಪತಿ ಪುತ್ರ ಪಿ.ಎನ್. ಮಹೇಶ್ (31) ಒಬ್ಬರಾಗಿದ್ದಾರೆ.
ಮಹೇಶ್ ಸೇರಿದಂತೆ 10 ಮಂದಿ ಸೈನಿಕರು ಹಿಮಪಾತದಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ತಿಳಿದು ಕುಟುಂಬ ಆತನ ಬ್ಯಾಚ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿದಾಗ ಹಿಮಪಾತದಲ್ಲಿ ಸಿಲುಕಿರುವ 10 ಮಂದಿ ಸೈನಿಕರಲ್ಲಿ ಮಹೇಶ್ ಸೇರಿರುವುದನ್ನು ಸಹೋದರ ಮಂಜುನಾಥ್ಗೆ ಖಚಿತ ಪಡಿಸಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬ ಮತ್ತು ಸ್ನೇಹಿತರು ದುಃಖಿತರಾಗಿ ಸ್ನೇಹಿತ ಬದುಕಿ ಬರಲಿ ಎಂದು ದೇವರ ಮೊರೆಹೋಗಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಹಿಮಪಾತದಲ್ಲಿ ಯೋಧ ಮಹೇಶ್ ಮೃತಪಟ್ಟಿರುವುದು ದೃಢವಾಗಿದೆ. ಮನೆಯಲ್ಲಿ ರೋದನ ಮುಗಿಲು ಮುಟ್ಟಿದೆ. ಮಗನ ಕಳೆದುಕೊಂಡ ತಾಯಿ, ಸಹೋದರರು, ಬಂಧುಗಳ ದುಃಖದ ಕಟ್ಟೆಯೊಡೆದಿದೆ. [ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿದ್ದ ಯೋಧರ ಸಾವು]
ದ್ವಿತೀಯ ಪಿಯುಸಿ ಓದಿದ್ದ ಮಹೇಶ್ 12 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಇನ್ನು ಮೂರು ವರ್ಷ ಕಳೆದಿದ್ದರೆ ನಿವೃತ್ತಿಯಾಗುತ್ತಿತ್ತು. ಆ ನಂತರ ವಿವಾಹವಾಗುವ ಆಲೋಚನೆ ಮಾಡಿದ್ದರು. ಈ ಕಾರಣದಿಂದ ಅವಿವಾಹಿತರಾಗಿಯೇ ಉಳಿದಿದ್ದರು. ಕಳೆದ ಒಂದು ತಿಂಗಳ ಹಿಂದೆ ಸಹೋದರ ಸಂತೋಷ್ಗೆ ಕರೆ ಮಾಡಿ ಹಿಮಾಲಯದ ಸಿಯಾಚಿನ್ಗೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೆ ಮಾರ್ಚ್ನಲ್ಲಿ ಮನೆಗೆ ಬರುವುದಾಗಿ ಹೇಳಿದ್ದರು.
ಮೃತ ವೀರಯೋಧ ಮಹೇಶ್ ತಾಯಿ ಯಶೋಧಮ್ಮ, ಸಹೋದರ ಮಂಜುನಾಥ್, ಸಂತೋಷ್ ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ. ರೈಫಲ್ ಶೂಟಿಂಗ್ನಲ್ಲಿ ಮುಂದಿದ್ದ ಮಹೇಶ್ ಮೂರು ಚಿನ್ನದ ಪದಕ ಪಡೆದಿದ್ದರು. ಇದೀಗ ಮಗನ ಪಾರ್ಥೀವ ಶರೀರಕ್ಕಾಗಿ ಕಾಯುತ್ತಿರುವ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.
ಕರ್ನಾಟಕದ ಇನ್ನಿಬ್ಬರು ಕಣ್ಮರೆ : ಎಚ್ ಡಿ ಕೋಟೆಯ ಮಹೇಶ್ ಅಲ್ಲದೆ ಹಾಸನ ಜಿಲ್ಲೆಯ ತೇಜೂರಿನ ಸುಬೇದಾರ್ ಟಿ.ಟಿ. ನಾಗೇಶ್ (41) ಮತ್ತು ಹಾವೇರಿ ಜಿಲ್ಲೆ ಕುಂದಗೋಳ ತಾಲೂಕಿನ ಬೆಟದೂರಿನ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಕೂಡ ಹಿಮಪಾತದಲ್ಲಿ ಸಾವನ್ನಪ್ಪರುವುದು ಖಚಿತವಾಗಿದೆ.